ದೇಶ

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಗೋಡೆ ಕುಸಿತ: ಓರ್ವ ಸಾವು, ಹಲವರಿಗೆ ಗಾಯ

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿಯ ಮೆಟ್ರೋ ನಿಲ್ದಾಣವೊಂದರ ಬಳಿ ಗೋಡೆ ಕುಸಿತದಿಂದ ವ್ಯಕ್ತಿಯೋರ್ವ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.

ಪಿಂಕ್ ಲೈನ್‌ನಲ್ಲಿರುವ ಗೋಕುಲಪುರಿ ಮೆಟ್ರೋ ನಿಲ್ದಾಣದ ಗೋಡೆಯ ಒಂದು ಭಾಗ ಕುಸಿದಿದ್ದು, ಕಾರವಾಲ್ ನಗರದ 53 ವರ್ಷದ ವಿನೋದ್ ಕುಮಾರ್  ಮೃತಪಟ್ಟಿದ್ದಾರೆ. ಗಾಯಾಳುಗಳು ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಈ ಘಟನೆ ಸಂಬಂಧ ಓರ್ವ ಮ್ಯಾನೇಜರ್ ಮತ್ತು ಕಿರಿಯ ಎಂಜಿನಿಯರ್ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ತಿಳಿಸಿದೆ.

ಮೃತನ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ಘೋಷಿಸಲಾಗಿದೆ. ಸಣ್ಣಪುಟ್ಟ ಗಾಯಗಳಾದವರಿಗೆ ರೂ. 1 ಲಕ್ಷ  ಹಾಗೂ ಗಂಭೀರ ಗಾಯಗೊಂಡವರಿಗೆ ರೂ. 5 ಲಕ್ಷ ನೀಡುವುದಾಗಿ ದೆಹಲಿ ಮೆಟ್ರೋ ಘೋಷಿಸಿದೆ. ಒಂದು ಗಂಟೆಯೊಳಗೆ ಅವಶೇಷಗಳನ್ನು ರಸ್ತೆಯಿಂದ ತೆರವುಗೊಳಿಸಲಾಗಿದೆ ಎಂದು ಡಿಎಂಆರ್‌ಸಿ ಮಾಹಿತಿ ನೀಡಿದೆ.

SCROLL FOR NEXT