ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಸಾಬೀತುಪಡಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಯು-ಟರ್ನ್ ಹೊಡೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಬಹುದೇ? ಎಂದು ಪ್ರತಿಪಕ್ಷ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಪ್ರಶ್ನಿಸಿದ್ದಾರೆ.
ಇಂದು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಗೂ ಮುನ್ನ ಮಾತನಾಡಿದ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಅವರನ್ನು ನಾನು ಯಾವಾಗಲೂ 'ದಶರಥ್' ಮತ್ತು ತಂದೆ ಸಮಾನ ಎಂದು ಪರಿಗಣಿಸಿದ್ದೇನೆ. ಆದರೆ 'ಮಹಾಘಟಬಂಧನ್' ಕೈಬಿಟ್ಟು ಎನ್ಡಿಎಗೆ ಮರಳಲು ಅವರನ್ನು ಒತ್ತಾಯಿಸಿದ್ದು ಯಾರು ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಮೂರನೇ ಬಾರಿಗೆ ನಿತೀಶ್ ಕುಮಾರ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, "ನಾನು ಈ ಹೊಸ ಸರ್ಕಾರದ ವಿರುದ್ಧ ನಿಂತಿದ್ದೇನೆ. ಒಂಬತ್ತು ಬಾರಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಕ್ಕಾಗಿ ಸಿಎಂ ನಿತೀಶ್ ಕುಮಾರ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದರು.
ಇದನ್ನೂ ಓದಿ: Bihar Floor Test: 129 ಮತ ಪಡೆದು ವಿಶ್ವಾಸ ಮತ ಗೆದ್ದ ನಿತೀಶ್ ಕುಮಾರ್, ವಿಪಕ್ಷದ ನಾಲ್ವರಿಂದ ಸಿಎಂ ಪರ ಮತ!
"ಜೆಡಿಯು ಶಾಸಕರ ಬಗ್ಗೆ ನನಗೆ ಬೇಸರವಾಗಿದೆ. ಏಕೆಂದರೆ ಅವರು ಸಾರ್ವಜನಿಕರ ನಡುವೆ ಹೋಗಿ ಉತ್ತರಿಸಬೇಕಾಗುತ್ತದೆ. ಯಾರಾದರೂ ನಿತೀಶ್ ಕುಮಾರ್ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದು ಏಕೆ ಎಂದು ಕೇಳಿದರೆ ನೀವು ಏನು ಹೇಳುತ್ತೀರಿ? ನೀವು ಮೊದಲು ಅವರನ್ನು(ಬಿಜೆಪಿ) ಟೀಕಿಸಿದ್ದೀರಿ ಮತ್ತು ಈಗ ಅವರನ್ನು ಹೊಗಳುತ್ತಿದ್ದೀರಿ. ನೀವು ಜನರಿಗೆ ಏನು ಹೇಳುತ್ತೀರಿ?, ನಾವು(ಆರ್ಜೆಡಿ) ಉದ್ಯೋಗಗಳನ್ನು ನೀಡಿದ್ದೇವೆ ಎಂದು ಹೇಳುತ್ತೇವೆ ಎಂದರು.
ನಿತೀಶ್ ಅವರನ್ನು ತಮ್ಮ ಕುಟುಂಬದ ಸದಸ್ಯ ಎಂದು ಭಾವಿಸಿರುವುದಾಗಿ ಹೇಳಿದ ಆರ್ಜೆಡಿ ನಾಯಕ, "...ನಾವು ಸಮಾಜವಾದಿ ಕುಟುಂಬದಿಂದ ಬಂದವರು... ಕೆಲವು ದಿನಗಳ ಹಿಂದಷ್ಟೇ ದೇಶದಲ್ಲಿ ಮೋದಿಯನ್ನು ತಡೆಯಲು ನೀವು ಧ್ವಜ ಹಿಡಿದಿದ್ದೀರಿ; ಈಗ ನಿಮ್ಮ ಸೋದರಳಿಯ ಬಿಹಾರದಲ್ಲಿ ಮೋದಿಯನ್ನು ತಡೆಯುವ ಧ್ವಜ ಹಿಡಿಯುತ್ತಾರೆ ಎಂದರು.