ದೇಶ

ರಾಜ್ಯಸಭೆ ಚುನಾವಣೆ: ಬಿಜೆಪಿಯಲ್ಲಿ 24 ನಿರ್ಗಮಿತ ಸಂಸದರಿಗಿಲ್ಲ 2 ನೇ ಅವಧಿ!

Srinivas Rao BV

ನವದೆಹಲಿ: ಕೇಂದ್ರ ಸಚಿವರೂ ಆಗಿರುವ ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್ ಸೇರಿ 24 ಮಂದಿ ಬಿಜೆಪಿಯ ರಾಜ್ಯಸಭೆ ಸಂಸದರನ್ನು ಮರು ಆಯ್ಕೆ ಮಾಡಲಾಗಿಲ್ಲ.

ಈ 24 ಮಂದಿ ಪೈಕಿ ಹಲವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. 56 ಸ್ಥಾನಗಳಿಗೆ ಆಡಳಿತಾರೂಢ ಪಕ್ಷ 28 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಸಂಘಟನೆಯ ಕಾರ್ಯಕರ್ತರ ನಡುವಿನಿಂದ ಅರ್ಹ ಅಭ್ಯರ್ಥಿಗಳನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಬಿಜೆಪಿ ಮುಂದಾಗಿದೆ.

ಬಿಹಾರದಿಂದ ಧರ್ಮಶೀಲ ಗುಪ್ತ, ಮಹಾರಾಷ್ಟ್ರದಿಂದ ಮೇಧಾ ಕುಲ್ಕರ್ಣಿ ಹಾಗೂ ಮಧ್ಯಪ್ರದೇಶದಿಂದ ಮಾಯಾ ನರೋಲಿಯಾ ಅವರನ್ನು ರಾಜ್ಯಸಭೆಗೆ ಕಳಿಸಲಾಗುತ್ತಿದ್ದು, ಮಹಿಳಾ ಮತದಾರರ ಮತಗಳನ್ನು ಗಳಿಸುವ ಕಾರ್ಯತಂತ್ರದ ಭಾಗವಾಗಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅವಧಿಪೂರ್ಣಗೊಳಿಸಿ ರಾಜ್ಯಸಭೆಯಿಂದ ನಿರ್ಗಮಿಸುತ್ತಿರುವ 28 ಸಂಸದರ ಪೈಕಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಇಬ್ಬರು ಕೇಂದ್ರ ಸಚಿವರು, ರಾಷ್ಟ್ರೀಯ ವಕ್ತಾರರಾದ ಸುಧಾಂಶು ತ್ರಿವೇದಿ ಅವರನ್ನು ಮಾತ್ರ ಮರು ನಾಮಕರಣ ಮಾಡಲಾಗಿದ್ದು, ಉನ್ನತ ಸ್ಥಾನವನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಬಲವಾದ ಸಂದೇಶವನ್ನು ಕಳುಹಿಸಿದೆ. ಅಶ್ವಿನಿ ವೈಷ್ಣವ್ ಮತ್ತು ಎಲ್ ಮುರುಗನ್ ಮರುನಾಮಕರಣಗೊಂಡ ಕೇಂದ್ರ ಸಚಿವರಾಗಿದ್ದಾರೆ.

ಮೂರನೇ ಅವಧಿಗೆ ಸಜ್ಜಾಗಿರುವ ನಡ್ಡಾ ಅವರನ್ನು ಹೊರತುಪಡಿಸಿ ಎರಡು ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿರುವ ಬಿಜೆಪಿಯ ನಿರ್ಗಮಿತ ಯಾವುದೇ ರಾಜ್ಯಸಭಾ ಸದಸ್ಯರೂ ಪುನರಾವರ್ತನೆಯಾಗಿಲ್ಲ ಎಂಬುದು ಗಮನಾರ್ಹವಾಗಿದೆ.

SCROLL FOR NEXT