ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ 
ದೇಶ

ಹಣ ಅಕ್ರಮ ವರ್ಗಾವಣೆ ಪ್ರಕರಣ: ಆರನೇ ಬಾರಿಯ ಸಮನ್ಸ್ ಗೂ ಡೋಂಟ್ ಕೇರ್; ಇ.ಡಿ ವಿಚಾರಣೆಗೆ ಕೇಜ್ರಿವಾಲ್ ಗೈರು

Shilpa D

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ) ನಡೆಸುತ್ತಿರುವ ವಿಚಾರಣೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಜರಾಗುವುದಿಲ್ಲ ಎಂದು ಆಮ್‌ ಆದ್ಮಿ ಪಕ್ಷ ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಒಟ್ಟು 6 ಬಾರಿ ಸಮನ್ಸ್‌ ಜಾರಿ ಮಾಡಿದ್ದು, ಇದುವರೆಗೆ ಒಂದೇ ಒಂದು ವಿಚಾರಣೆಗೂ ಕೇಜ್ರಿವಾಲ್‌ ಹಾಜರಾಗಲಿಲ್ಲ. ಸಮನ್ಸ್‌ ಅನ್ನು ಕಾನೂನುಬಾಹಿರ ಎಂದು ಕರೆದಿರುವ ಪಕ್ಷ, ಪದೇ ಪದೇ ಸಮನ್ಸ್ ಕಳುಹಿಸುವ ಬದಲು ನ್ಯಾಯಾಲಯದ ವಿಚಾರಣೆ ಮುಗಿಯುವವರೆಗೆ ಕಾಯಲಿ ಎಂದು ತಿಳಿಸಿದೆ.

ವಿಚಾರಣೆಗೆ ಹಾಜರಾಗದೇ ಇರುವುದರ ವಿರುದ್ಧ ಈ ಹಿಂದೆ ಇ.ಡಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸಂಬಂಧ ಫೆ.17ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ನ್ಯಾಯಾಲಯ ಕೇಜ್ರಿವಾಲ್‌ ಅವರಿಗೆ ಆದೇಶಿಸಿತ್ತು.

ಶನಿವಾರ(ಫೆ.17) ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾದ ಕೇಜ್ರಿವಾಲ್‌, ಬಜೆಟ್ ಅಧಿವೇಶನ ಮತ್ತು ವಿಶ್ವಾಸಮತ ಯಾಚನೆ ನಡೆಯುತ್ತಿರುವುದರಿಂದ ದೈಹಿಕವಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ವಿಚಾರಣೆ ಆಲಿಸಿದ ನ್ಯಾಯಾಲಯ ಕೇಜ್ರಿವಾಲ್‌ಗೆ ವೈಯಕ್ತಿಕ ಹಾಜರಾತಿಯಿಂದ ನ್ಯಾಯಾಲಯ ವಿನಾಯಿತಿ ನೀಡಿತ್ತು.

ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನವು ಫೆಬ್ರವರಿ 15 ರಂದು ಪ್ರಾರಂಭವಾಗಿದೆ ಮತ್ತು ಮಾರ್ಚ್ ಮೊದಲ ವಾರದವರೆಗೆ ಮುಂದುವರಿಯುತ್ತದೆ ಎಂದು ಕೇಜ್ರಿವಾಲ್ ಅವರ ವಕೀಲರು ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.

SCROLL FOR NEXT