ನವದೆಹಲಿ: ಕಬ್ಬು ಖರೀದಿ ದರ ಏರಿಕೆಯು ರೈತರ ಕಲ್ಯಾಣಕ್ಕಾಗಿ ಸರ್ಕಾರ ಮಾಡಿದ್ದ ವಾಗ್ದಾನ ಈಡೇರಿಸುವ ಬದ್ಧತೆಯನ್ನು ತೋರಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಪಾದಿಸಿದ್ದಾರೆ.
ಕೇಂದ್ರ ಸಚಿವ ಸಂಪುಟ ಕೈಗೊಂಡ ಹಲವಾರು ನಿರ್ಧಾರಗಳ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, ಕಬ್ಬು ಖರೀದಿ ದರ ಏರಿಕೆಯಿಂದ ಕೋಟ್ಯಂತರ ಕಬ್ಬು ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯು ಅಕ್ಟೋಬರ್ನಿಂದ ಪ್ರಾರಂಭವಾಗುವ 2024-25 ರ ಹಂಗಾಮಿಗೆ ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್ ಗೆ ರೂ. 25 ರಿಂದ 340 ರೂ.ವರೆಗೆ ಕನಿಷ್ಠ ಬೆಲೆಯನ್ನು ಹೆಚ್ಚಿಸಿದೆ."ಹೊಸ ಎಫ್ಆರ್ಪಿಯು ಕಬ್ಬು ಬೆಳೆಯುವ ರೈತರ ಏಳಿಗೆಯನ್ನು ಖಚಿತಪಡಿಸುತ್ತದೆ. ಭಾರತವು ಈಗಾಗಲೇ ವಿಶ್ವದಲ್ಲಿಯೇ ಕಬ್ಬಿಗೆ ಅತ್ಯಧಿಕ ಬೆಲೆಯನ್ನು ಪಾವತಿಸುತ್ತಿದೆ ಎಂಬುದು ಗಮನಾರ್ಹವಾಗಿದೆ ಮತ್ತು ಅದರ ಹೊರತಾಗಿಯೂ ಸರ್ಕಾರವು ದೇಶೀಯ ಗ್ರಾಹಕರಿಗೆ ಅಗ್ಗದ ಸಕ್ಕರೆಯನ್ನು ಖಾತ್ರಿಪಡಿಸುತ್ತಿದೆ ಎಂದು ಸಭೆ ನಂತರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕ್ಯಾಬಿನೆಟ್ನ ಇತರ ನಿರ್ಧಾರಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ರಾಷ್ಟ್ರೀಯ ಜಾನುವಾರು ಮಿಷನ್ಗೆ ಸಂಬಂಧ ಕೈಗೊಂಡ ಹೆಜ್ಜೆಯು ಮೇವು ಉತ್ಪಾದನೆ ಮತ್ತು ತಳಿ ಸಂರಕ್ಷಣೆಯಲ್ಲಿ ಪ್ರಮುಖ ಉತ್ತೇಜನದ ಜೊತೆಗೆ ಉದ್ಯಮಿಗಳಿಗೆ ಉತ್ತೇಜಕ ಅವಕಾಶಗಳನ್ನು ತರುತ್ತದೆ ಎಂದು ಹೇಳಿದ್ದಾರೆ.
ಉಪಗ್ರಹ ಘಟಕಗಳ ತಯಾರಿಕೆಗೆ ಶೇ. 100 ರಷ್ಟು ಸಾಗರೋತ್ತರ ಹೂಡಿಕೆ ಅನುಮತಿಸುವ ಮೂಲಕ ಬಾಹ್ಯಾಕಾಶ ವಲಯದಲ್ಲಿ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಮಾನದಂಡಗಳನ್ನು ಸರ್ಕಾರ ಬುಧವಾರ ಸರಾಗಗೊಳಿಸಿದೆ. ಇದನ್ನು ಶ್ಲಾಘಿಸಿದ ಮೋದಿ, "ಬೆಳವಣಿಗೆ ಮತ್ತು ನಾವೀನ್ಯತೆಗಾಗಿ ಹೊಸ ಕಕ್ಷೆ ಗುರುತಿಸಿದ್ದು,ಬಾಹ್ಯಾಕಾಶ ಕ್ಷೇತ್ರದಲ್ಲಿ ಎಫ್ಡಿಐ ನೀತಿಯನ್ನು ಸರ್ಕಾರ ನವೀಕರಿಸಿದೆ, ಅವಕಾಶಗಳ ಗ್ಯಾಲಕ್ಸಿಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.