ರೈತರಿಂದ  ಕ್ಯಾಂಡಲ್ ಲೈಟ್ ಮಾರ್ಚ್
ರೈತರಿಂದ ಕ್ಯಾಂಡಲ್ ಲೈಟ್ ಮಾರ್ಚ್ 
ದೇಶ

ಬೇಡಿಕೆ ಈಡೇರುವವರೆಗೂ ಧರಣಿ ನಿಲ್ಲುವುದಿಲ್ಲ ಎಂದ ಪಂಧೇರ್; ರೈತರಿಂದ ಕ್ಯಾಂಡಲ್ ಮಾರ್ಚ್

Lingaraj Badiger

ಚಂಡೀಗಢ: ‘ದೆಹಲಿ ಚಲೋ’ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ತಮ್ಮ ಧರಣಿ ಕೈ ಬಿಡುವುದಿಲ್ಲ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಅವರು ಶನಿವಾರ ಹೇಳಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬಂದರೂ ತಮ್ಮ ಹೋರಾಟ ಮುಂದುವರೆಯಲಿದೆ ಎಂಬ ಸೂಚನೆ ನೀಡಿದ್ದಾರೆ.

ನಾಲ್ಕು ಸುತ್ತಿನ ಮಾತುಕತೆಯ ನಂತರವೂ ಕೇಂದ್ರ ಸಚಿವರು ಮತ್ತು ರೈತ ಮುಖಂಡರ ನಡುವಿನ ಬಿಕ್ಕಟ್ಟು ಪರಿಹಾರವಾಗಿಲ್ಲ. ಹೀಗಾಗಿ ರೈತರು ಪ್ರತಿಭಟನೆ ಮುಂದುವರೆಸಿದ್ದು, ರೈತರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಸಾವನ್ನಪ್ಪಿದ ರೈತನ ಸ್ಮರಣಾರ್ಥ ಹರಿಯಾಣದ ಪಂಜಾಬ್‌ನ ಗಡಿಯಲ್ಲಿರುವ ಶಂಭು ಮತ್ತು ಖಾನೌರಿಯಲ್ಲಿ ಕ್ಯಾಂಡಲ್ ಲೈಟ್ ಮಾರ್ಚ್ ನಡೆಸಿದರು.

ಕಳೆದ ಬುಧವಾರ ಖಾನೌರಿಯಲ್ಲಿ ನಡೆದ ಘರ್ಷಣೆಯಲ್ಲಿ ಕೆಲವು ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿ ನಿರ್ಮಿಸಿದ್ದ ಬ್ಯಾರಿಕೇಡ್‌ಗಳತ್ತ ನುಗ್ಗಲು ಯತ್ನಿಸಿದಾಗ ಬಟಿಂಡಾ ಮೂಲದ ಶುಭಕರನ್ (21) ಸಾವನ್ನಪ್ಪಿದ್ದರು.

ಶುಭಕರನ್ ಸಾವಿಗೆ ಕಾರಣರಾದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರೈತ ಸಂಘಟನೆಗಳು ಪಟ್ಟು ಹಿಡಿದಿವೆ. ಅಲ್ಲದೆ ಎಫ್ಐಆರ್ ದಾಖಲಿಸುವವರೆಗೆ ನಾವು ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ಹೇಳಿವೆ. ಆದರೆ ಅಧಿಕಾರ ವ್ಯಾಪ್ತಿಯ ಸಮಸ್ಯೆಗಳನ್ನು ಉಲ್ಲೇಖಿಸಿ ಪಂಜಾಬ್ ಪೊಲೀಸರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಶುಭಕರನ್ ಹರಿಯಾಣ ರಾಜ್ಯದ ವ್ಯಾಪ್ತಿಯಲ್ಲಿ ಗಾಯಗೊಂಡಿದ್ದು, ಹಾಗಾಗಿ ನಾವು ಪ್ರಕರಣ ದಾಖಲಿಸುವುದು ಅಸಾಧ್ಯ ಎಂದು ಪಂಜಾಬ್ ಪೊಲೀಸರು ಹೇಳಿದ್ದಾಗಿ ವರದಿ ಮಾಡಲಾಗಿದೆ.

ಎಲ್ಲಿಯವರೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವುದಿಲ್ಲವೋ ಅಲ್ಲಿಯವರೆಗೆ ಈ ಪ್ರತಿಭಟನೆ ಮುಂದುವರೆಯುವುದು ಖಚಿತ. ನಾಳೆಯೇ ಅವರು(ಕೇಂದ್ರ) ನಮ್ಮ ಬೇಡಿಕೆಗಳನ್ನು ಒಪ್ಪಿಕೊಂಡರೆ, ನಾವು ಪ್ರತಿಭಟನೆ ಹಿಂಪಡೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಪಂಧೇರ್ ಹೇಳಿದ್ದಾರೆ.

ಚುನಾವಣಾ ಆಯೋಗ ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದರೆ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪಂಧೇರ್, ನಾವು ಸಂಸದರಿಗೆ ಟಿಕೆಟ್ ಹಂಚುವ ಅಗತ್ಯವಿಲ್ಲ. ಆದ್ದರಿಂದ ಮಾದರಿ ನೀತಿ ಸಂಹಿತೆ ಬಗ್ಗೆ ಚಿಂತಿಸುವುದಿಲ್ಲ. ನಾವು ಮತಗಟ್ಟೆಗಳಲ್ಲಿ ಪ್ರಚಾರ ಮಾಡಲು ಹೋಗುವುದಿಲ್ಲ ಎಂದಿದ್ದಾರೆ.

"ನಾವು ನೀತಿ ಸಂಹಿತೆಯ ಬಗ್ಗೆ ಚಿಂತಿಸುವುದಿಲ್ಲ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗಲೂ ಧರಣಿ ಮುಂದುವರಿಸಬಹುದು ಎಂದು ನಾವು ಯೋಚಿಸುತ್ತಿದ್ದೇವೆ" ಎಂದು ಕೆಎಂಎಂ ನಾಯಕ ಹೇಳಿದ್ದಾರೆ.

SCROLL FOR NEXT