ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ 
ದೇಶ

ಯುವಕರ ಡ್ರಗ್ಸ್ ವ್ಯಸನದ ವಿರುದ್ಧ ಹೋರಾಡಲು ಸದೃಢ ಕುಟುಂಬಗಳ ಅಗತ್ಯವಿದೆ: ಪ್ರಧಾನಿ ನರೇಂದ್ರ ಮೋದಿ

Ramyashree GN

ನವದೆಹಲಿ: ಮಾದಕದ್ರವ್ಯ ವ್ಯಸನದಿಂದ ಯುವಕರನ್ನು ರಕ್ಷಿಸುವ ಅಗತ್ಯವಿದೆ ಮತ್ತು ಈ ದುಷ್ಕೃತ್ಯವನ್ನು ಎದುರಿಸಲು ಬಲಿಷ್ಠವಾದ ಕುಟುಂಬ ಬೆಂಬಲ ವ್ಯವಸ್ಥೆಯ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಒತ್ತಿ ಹೇಳಿದರು.

ಗಾಯತ್ರಿ ಪರಿವಾರ ಆಯೋಜಿಸಿದ್ದ ‘ಅಶ್ವಮೇಧ ಯಜ್ಞ’ ಕಾರ್ಯಕ್ರಮದಲ್ಲಿ ವಿಡಿಯೋ ಭಾಷಣ ಮಾಡಿದ ಅವರು, ಮಾದಕದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕೆ ಕುಟುಂಬಗಳು ಸಂಸ್ಥೆಯಾಗಿ ಬಲಿಷ್ಠವಾಗಿರುವುದು ಅತ್ಯಗತ್ಯ ಎಂದರು.

ಒಂದು ಸಂಸ್ಥೆಯಾಗಿ ಕುಟುಂಬ ದುರ್ಬಲಗೊಂಡಾಗ ಮತ್ತು ಅದರ ಮೌಲ್ಯಗಳು ಕುಸಿದಾಗ, ಅದು ಎಲ್ಲಾ ವಿಚಾರಗಳ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬ ಸದಸ್ಯರು ದಿನಗಟ್ಟಲೆ ಭೇಟಿಯಾಗದಿದ್ದರೆ ಅಥವಾ ಒಟ್ಟಿಗೆ ಕುಳಿತುಕೊಳ್ಳದಿದ್ದರೆ, ಅಪಾಯಗಳು ಹೆಚ್ಚಾಗುತ್ತವೆ. ಆದ್ದರಿಂದ, ದೇಶವನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ಕುಟುಂಬಗಳು ಬಲವಾಗಿರಬೇಕು ಎಂದು ಪ್ರಧಾನಿ ಹೇಳಿದರು.

'ಅಶ್ವಮೇಧ ಯಜ್ಞ'ವು ಒಂದು ದೊಡ್ಡ ಸಾಮಾಜಿಕ ಅಭಿಯಾನವಾಗಿದೆ. ಲಕ್ಷಾಂತರ ಯುವಕರನ್ನು ವ್ಯಸನದಿಂದ ದೂರವಿಟ್ಟು ರಾಷ್ಟ್ರ ನಿರ್ಮಾಣ ಚಟುವಟಿಕೆಗಳತ್ತ ಅದರ ಪಾತ್ರ ಮಹತ್ವದ್ದಾಗಿದೆ. ಮಾದಕದ್ರವ್ಯ ವ್ಯಸನವು ಸಮಾಜಕ್ಕೆ ಮತ್ತು ದೇಶಕ್ಕೆ ದೊಡ್ಡ ಹಾನಿ ಉಂಟುಮಾಡುವ ದುಷ್ಕೃತ್ಯವಾಗಿದೆ ಎಂದು ಹೇಳಿದರು.

ಯುವಕರು ದೇಶದ ಭವಿಷ್ಯ ಮತ್ತು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಅದರ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ. ವ್ಯಸನದ ಹಿಡಿತದಿಂದ ಯುವಕರನ್ನು ರಕ್ಷಿಸುವ ಅಗತ್ಯವಿದ್ದು, ಈಗಾಗಲೇ ಪೀಡಿತರಿಗೆ ಬೆಂಬಲ ಒದಗಿಸಬೇಕಾಗುತ್ತದೆ ಎಂದು ಹೇಳಿದರು.

ವ್ಯಸನವು ವ್ಯಕ್ತಿಗಳು ಮತ್ತು ಸಮಾಜಗಳ ಮೇಲೆ ವಿನಾಶಕಾರಿ ಪರಿಣಾಮವನ್ನು ಉಂಟುಮಾಡುತ್ತದೆ, ಅಪಾರ ಹಾನಿಯನ್ನುಂಟುಮಾಡುತ್ತದೆ. ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ರಾಷ್ಟ್ರವ್ಯಾಪಿ ಉಪಕ್ರಮಕ್ಕೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಅಭಿಯಾನ ಪ್ರಾರಂಭವಾದಾಗಿನಿಂದ 11 ಕೋಟಿಗೂ ಹೆಚ್ಚು ಜನರೊಂದಿಗೆ ತೊಡಗಿಸಿಕೊಳ್ಳಲಾಗಿದೆ. ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ನಡೆಸಿದ ಬೈಕ್ ರ್ಯಾಲಿ, ಪ್ರಮಾಣ ವಚನ ಸ್ವೀಕಾರ ಸಮಾರಂಭಗಳು ಮತ್ತು ಬೀದಿ ನಾಟಕಗಳು ಸೇರಿದಂತೆ ವ್ಯಾಪಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ದೊಡ್ಡ ರಾಷ್ಟ್ರೀಯ ಮತ್ತು ಜಾಗತಿಕ ಉಪಕ್ರಮಗಳೊಂದಿಗೆ ಯುವಕರ ಏಕೀಕರಣವು ಯಾವುದೇ ವ್ಯಸನದಿಂದ ದೂರವಿರಲು ಅವರಿಗೆ ಸಹಾಯ ಮಾಡುತ್ತದೆ. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಗುರಿಗಳನ್ನು ಸಾಧಿಸುವಲ್ಲಿ ಅವರದ್ದು ಪ್ರಮುಖ ಪಾತ್ರವಿದೆ. ರಾಷ್ಟ್ರೀಯ ಮತ್ತು ಜಾಗತಿಕ ಅಭಿಯಾನಗಳಲ್ಲಿ ಯುವಕರು ಹೆಚ್ಚು ತೊಡಗಿಸಿಕೊಂಡಷ್ಟೂ ತಪ್ಪು ದಾರಿಯಿಂದ ದೂರ ಉಳಿಯುತ್ತಾರೆ ಎಂದರು.

SCROLL FOR NEXT