ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ತಂಡದ ಮೇಲೆ ಗುಂಪು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಪಕ್ಷದ ಪ್ರಬಲ ನಾಯಕ ಶೇಖ್ ಷಹಜಹಾನ್ ಅವರನ್ನು 6 ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.
ಶೇಖ್ ಷಹಜಹಾನ್ ಅವರನ್ನು ಬಂಧಿಸಿದ ಒಂದು ದಿನದ ನಂತರ, ತೃಣಮೂಲ ಕಾಂಗ್ರೆಸ್ ಪಕ್ಷ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿದೆ.
ಈ ಕ್ರಮವನ್ನು ಪ್ರಕಟಿಸಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ಪಕ್ಷದ ನಾಯಕರು ಬಿಜೆಪಿಯನ್ನು ಕಟುವಾಗಿ ಟೀಕಿಸಿದರು ಮತ್ತು ಮಾಜಿ ಕುಸ್ತಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಂತಹ ಕಳಂಕಿತ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯ ಮಾಡಬೇಕು ಎಂದು ಆಗ್ರಹಿಸಿದರು.
10 ದಿನ ಪೊಲೀಸ್ ಕಸ್ಟಡಿಗೆ
ಬಂಧಿತ ಸಂದೇಶಖಾಲಿ ದೌರ್ಜನ್ಯ ಪ್ರಕರಣ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಮುಖ ಆರೋಪಿ, ಟಿಎಂಸಿ ಮುಖಂಡ ಶಹಜಹಾನ್ ಶೇಕ್ ಗೆ ಪಶ್ಚಿಮಬಂಗಾಳದ ಬಸ್ರಿಹಾತ್ ಕೋರ್ಟ್ ಗುರುವಾರ (ಫೆ.29) 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ವಿಚಾರಣೆಯ ಹಿನ್ನೆಲೆಯಲ್ಲಿ ಆರೋಪಿಯನ್ನು 14 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಬೇಕೆಂದು ಪೊಲೀಸರು ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು, ಆದರೆ ಕೋರ್ಟ್ 10 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿರುವುದಾಗಿ ಶಹಜಹಾನ್ ಪರ ವಕೀಲ ರಾಜಾ ಬೌಮಿಕ್ ತಿಳಿಸಿರುವುದಾಗಿ ವರದಿಯಾಗಿದೆ.
ಏನಿದು ಪ್ರಕರಣ?
2019ರಲ್ಲಿ ನಡೆದ ಬಿಜೆಪಿಯ ಮೂವರು ಕಾರ್ಯಕರ್ತರ ಕೊಲೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಶೇಖ್, ಜನವರಿ 5ರಿಂದ ನಾಪತ್ತೆಯಾಗಿದ್ದರು. ಶೇಖ್, ಪಡಿತರ ಅಕ್ರಮ ಹಾಗೂ ಭೂ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವೂ ಪ್ರಕರಣ ದಾಖಲಿಸಿಕೊಂಡಿದೆ.
ಜನವರಿ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಶಹಜಹಾನ್ ಮತ್ತು ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ಫೆ.29) ಬೆಳಗ್ಗೆ ಪಶ್ಚಿಮಬಂಗಾಳ ಪೊಲೀಸರು ಶಹಜಹಾನ್ ನನ್ನು ಬಂಧಿಸಿ, ಕೋರ್ಟ್ ಗೆ ಹಾಜರುಪಡಿಸಿದ್ದರು. ಭೂ ಮಾಫಿಯಾ ಮತ್ತು ಲೈಂಗಿಕ ದೌರ್ಜನ್ಯದಲ್ಲಿ ಶಹಜಹಾನ್ ಹಾಗೂ ಆತನ ಬೆಂಬಲಿಗರು ಶಾಮೀಲಾಗಿದ್ದು, ಆತನನ್ನು ಬಂಧಿಸಬೇಕು ಎಂದು ಕಳೆದ ಒಂದು ತಿಂಗಳಿನಿಂದ ಸಂದೇಶ ಖಾಲಿಯಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಏತನ್ಮಧ್ಯೆ ಕೋರ್ಟ್ ಕೂಡಲೇ ಶಹಜಹಾನ್ ನನ್ನು ಹಾಜರುಪಡಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ ಪೊಲೀಸರು ಬರೋಬ್ಬರಿ 55 ದಿನಗಳ ಬಳಿಕ ಶಹಜಹಾನ್ ನನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಮತ್ತು ಸ್ಥಳೀಯರ ಭೂಮಿ ಕಬಳಿಸಿರುವ ಆರೋಪ ಶೇಖ್ ಮೇಲಿದೆ. 55 ದಿನಗಳಿಂದ ತಲೆಮರೆಸಿಕೊಂಡಿದ್ದ ಶೇಖ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸ್ ವಿಶೇಷ ಪಡೆಯು 'ಉತ್ತರ 24 ಪರಗಣ' ಜಿಲ್ಲೆಯಲ್ಲಿ ತಡರಾತ್ರಿ ಬಂಧಿಸಿತ್ತು. ಬಳಿಕ ಬಸಿರ್ಹತ್ ನ್ಯಾಯಾಲಯಕ್ಕೆ ಕರೆತರಲಾಗಿತ್ತು.