ನವದೆಹಲಿ: ಇವಿಎಂಗಳ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ ಸಿಂಗ್, ವಿವಿಪ್ಯಾಟ್ ಕಾಗದಗಳನ್ನು ಮತದಾರರಿಗೆ ಹಸ್ತಾಂತರಿಸಿ ಅವುಗಳನ್ನು ಬ್ಯಾಲೆಟ್ ಬಾಕ್ಸ್ಗೆ ಹಾಕಿಸಬೇಕು ಎಂದು ಆಗ್ರಹಿಸಿದ್ದಾರೆ.
ಚುನಾವಣೆಯಲ್ಲಿ ಇವಿಎಂಗಳನ್ನು ಬಳಸುವ ಬಗ್ಗೆ ವಿಡಿಯೊವೊಂದರಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ಇವಿಎಂ ಮೇಲೆ ನನಗೆ ನಂಬಿಕೆ ಇಲ್ಲ ಎಂದು 2003ರಿಂದಲೇ ಹೇಳುತ್ತಲೇ ಬಂದಿದ್ದೇನೆ ಎಂದು ಹೇಳಿದ್ದಾರೆ.
ನಾನು ಯಾರಿಗೆ ಮತ ಹಾಕಬೇಕು. ನನ್ನ ಮತ ಎಲ್ಲಿ ಹಾಕಬೇಕು ಎನ್ನುವುದೂ ನನಗೆ ಗೊತ್ತಿಲ್ಲ. ಚಿಪ್ ಅಳವಡಿಸಿ ಹ್ಯಾಕ್ ಮಾಡಲು ಸಾಧ್ಯವಿಲ್ಲದ ಒಂದೂ ಯಂತ್ರ ಈ ಪ್ರಪಂಚದಲ್ಲಿ ಇಲ್ಲ. ಯಾಕೆಂದರೆ ತನ್ನಲ್ಲಿ ಅಡಕವಾಗಿರುವ ಸಾಫ್ಟ್ವೇರ್ ಅನ್ನು ಚಿಪ್ ಅನುಸರಿಸುತ್ತದೆ. ನೀವು ‘A’ ಎಂದು ಟೈಪಿಸಿದರೆ, ಸಾಫ್ಟ್ವೇರ್ ‘A’ ಎಂದು ಹೇಳುತ್ತದೆ. ಮತ್ತೆ ಅದನ್ನೇ ಪ್ರಿಂಟ್ ಮಾಡುತ್ತದೆ ಕೂಡ’ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನ EVM ಸರಿಪಡಿಸದಿದ್ದರೆ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು: ಸ್ಯಾಮ್ ಪಿತ್ರೋಡಾ
ಇವಿಎಂನಲ್ಲಿ ನೀವು ಹಸ್ತಕ್ಕೆ ಒತ್ತಿದ್ದರೆ, ಸಾಫ್ಟ್ವೇರ್ ‘ಕಮಲ’ ಎಂದು ಹೇಳಿದರೆ ಅದು ಏನನ್ನು ಮುದ್ರಿಸುತ್ತದೆ. ಹಸ್ತವನ್ನೋ? ಕಮಲವೋ? ಈಗ ವಿಷಯವೆಂದರೆ ವಿವಿಪ್ಯಾಟ್ ಯಂತ್ರವು ನಿಮಗೆ 7 ಸೆಕೆಂಡುಗಳ ಕಾಲ 'ಹಸ್ತದ ಚಿಹ್ನೆ' ತೋರಿಸಿದೆ. ನಾವು ಸಂತೋಷದಿಂದ ಹೊರಗೆ ಬರುತ್ತೇವೆ. ಆದರೆ ಅಲ್ಲಿ ಕಮಲ ಮುದ್ರಿಸಲಾಗುತ್ತದೆ. ನೀವು ಈ ಚಮತ್ಕಾರವನ್ನು ರಾಹುಲ್ ಮೆಹ್ತಾ ಅವರ ವಿಡಿಯೊದಲ್ಲಿ ವೀಕ್ಷಿಸಬಹುದು’ ಎಂದು ಸಿಂಗ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿವಿಪ್ಯಾಟ್ನೊಂದಿಗೆ ಇವಿಎಂಗಳ ಕ್ರಾಸ್-ವೆರಿಫಿಕೇಶನ್ ಕೋರಿ ಪಿಐಎಲ್: ತುರ್ತು ವಿಚಾರಣೆ ಇಲ್ಲ ಎಂದ ಸುಪ್ರೀಂ
ಎಲ್ಲಾ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇರುವಂತೆ ನಮ್ಮಲ್ಲೂ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎನ್ನುವುದು ವಿರೋಧ ಪಕ್ಷಗಳ ಆಗ್ರಹವಾಗಿದೆ ಎಂದು ಅವರು ಹೇಳಿದ್ದಾರೆ. ಎಣಿಕೆಗೆ ಇನ್ನೂ ಸ್ವಲ್ಪ ಸಮಯ ಹಿಡಿಯುತ್ತದೆ. ಹಾಗೆಯೇ ಆಗಲಿ. ಆದರೆ ಸಾರ್ವಜನಿಕರು ತಮ್ಮ ಮತ ಅವರು ಬಯಸಿದ ವ್ಯಕ್ತಿಗೆ ಹೋಗಿದೆ ಎಂದು ನಂಬುತ್ತಾರೆ.
ವಿದ್ಯುನ್ಮಾನ ಮತಯಂತ್ರಗಳ ಕಾರ್ಯನಿರ್ವಹಣೆಯ ಸಮಗ್ರತೆಯ ಬಗ್ಗೆ ಹಲವು ಅನುಮಾನಗಳಿವೆ ಮತ್ತು ವಿವಿಪ್ಯಾಟ್ ಸ್ಲಿಪ್ಗಳನ್ನು ಮತದಾರರಿಗೆ ಹಸ್ತಾಂತರಿಸುವಂತೆ ಹೇಳಿದ್ದಾರೆ.