ಹೈದರಾಬಾದ್: ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಮಾಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಗುಜರಾತ್ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಬಾನು ಅವರ ಬಳಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಲ್ಕಿಸ್ ಬಾನು ಅತ್ಯಾಚಾರಿಗಳು ಮತ್ತು ಆಕೆಯ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ ಅಪರಾಧಿಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ಗುಜರಾತ್ನಲ್ಲಿನ ಬಿಜೆಪಿ ಸರ್ಕಾರಗಳು ಪ್ರತಿಕ್ರಿಯಿಸಬೇಕು ಮತ್ತು ಬಿಲ್ಕಿಸ್ ಬಾನು ಬಳಿ ಕ್ಷಮೆಯಾಚಿಸಬೇಕು ಎಂದರು.
ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಗುಜರಾತ್ ಸರ್ಕಾರವು ಅಪರಾಧಿಗಳೊಂದಿಗೆ ಸಹಕರಿಸಿರುವುದನ್ನು ಗಮನಿಸಿದೆ ಎಂದು ಓವೈಸಿ ಹೇಳಿದರು.
'ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇನೆ ಮತ್ತು ಭವಿಷ್ಯದಲ್ಲಿ ಎಲ್ಲಾ ಅತ್ಯಾಚಾರಿಗಳ ವಿರುದ್ಧ ಇದು ಪೂರ್ವನಿದರ್ಶನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭಾವಿಸುತ್ತೇನೆ. ಅತ್ಯಾಚಾರಿಗಳು ಭಾರತದ ಸಂವಿಧಾನಕ್ಕೆ ವಿರುದ್ಧವಾದ ರಾಜಕೀಯ ಸಿದ್ಧಾಂತವನ್ನು ದೃಢಪಡಿಸುವ ಕಾರಣ ಅವರನ್ನು ಬಿಡುಗಡೆ ಮಾಡಲು ಆಗುವುದಿಲ್ಲ ಎಂದು ಅವರು ಅರ್ಥಮಾಡಿಕೊಳ್ಳಬೇಕು' ಎಂದು ಅವರು ಹೇಳಿದರು.
ಇದನ್ನೂ ಓದಿ: ಬಿಲ್ಕಿಸ್ ಬಾನು ಪ್ರಕರಣ: ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ 'ಸಾಕ್ಷಿ', ಪಟಾಕಿ ಸಿಡಿಸಿ ಸಂಬಂಧಿಕರ ಸಂಭ್ರಮಾಚರಣೆ
ಗುಜರಾತ್ ಬಿಜೆಪಿ ಸರ್ಕಾರವು ಅತ್ಯಾಚಾರಿಗಳನ್ನು ಬಿಡುಗಡೆ ಮಾಡಲು ಅಧಿಕಾರ ಇಲ್ಲದಿದ್ದರೂ ಅಪರಾಧಿಗಳನ್ನು ಬಿಡುಗಡೆ ಮಾಡಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಸುಪ್ರೀಂ ಕೋರ್ಟಿನ ಈ ಆದೇಶದೊಂದಿಗೆ ಮಹಿಳೆಯರಿಗೆ ನ್ಯಾಯದ ವಿಚಾರದಲ್ಲಿ ಬಿಜೆಪಿಯ ನಿಲುವನ್ನು ಬಹಿರಂಗಪಡಿಸಿದೆ ಮತ್ತು ಅತ್ಯಾಚಾರಿಗಳನ್ನು ಬೆಂಬಲಿಸಿದೆ ಮತ್ತು ಅಪರಾಧಿಗಳ ಬಿಡುಗಡೆಯನ್ನು ಅನುಮೋದಿಸಿದೆ ಎಂದು ಓವೈಸಿ ಹೇಳಿದರು.
ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ಜುಲೈ 11, 2022ರ ಪತ್ರದ ಮೂಲಕ ಅಪರಾಧಿಗಳಿಗೆ ಕ್ಷಮಾಪಣೆ ಮತ್ತು ಅವಧಿಪೂರ್ವ ಬಿಡುಗಡೆಯನ್ನು ಅನುಮೋದಿಸಿದೆ. ಅವರ ಬಿಡುಗಡೆಗೆ ಅಮಿತ್ ಶಾ ಏಕೆ ಅನುಮೋದನೆ ನೀಡಿದರು ಎಂದು ಪ್ರಶ್ನಿಸಿದರು.
'ಪ್ರಧಾನಿಯವರ ನಾರಿ ಶಕ್ತಿಯ ಘೋಷಣೆಯು ಕೇವಲ ಒಂದು ಪೊಳ್ಳು ಘೋಷಣೆಯಷ್ಟೆ. ಇದು ಈ ನೆಲದ ವಾಸ್ತವಗಳಿಗೆ ಯಾವುದೇ ಹೋಲಿಕೆಯನ್ನು ಹೊಂದಿಲ್ಲ. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ಘಟನೆ ನಡೆಯಿತು. ಬಿಲ್ಕಿಸ್ ಬಾನು ಏಕಾಂಗಿಯಾಗಿ ನ್ಯಾಯಕ್ಕಾಗಿ ಹೋರಾಡಿದರು. ಆಗ ಗುಜರಾತ್ ಕೋಮು ಗಲಭೆಯಿಂದ ಹೊತ್ತಿ ಉರಿಯುತ್ತಿತ್ತು. ಇದಕ್ಕಾಗಿಯೇ ಪ್ರಕರಣದ ವಿಚಾರಣೆಯನ್ನು ಮಹರಾಷ್ಟ್ರಕ್ಕೆ ವರ್ಗಾಯಿಸಲಾಯಿತು' ಎಂದು ಅವರು ಹೇಳಿದರು.
ಇದನ್ನೂ ಓದಿ: ಬಿಲ್ಕಿಸ್ ಬಾನು ಪ್ರಕರಣ; 11 ಅಪರಾಧಿಗಳ ಬಿಡುಗಡೆಗೆ ಗುಜರಾತ್ ಸರ್ಕಾರ ನೀಡಿದ್ದ ಅನುಮತಿ ರದ್ದುಗೊಳಿಸಿದ 'ಸುಪ್ರೀಂ'
ಗುಜರಾತ್ನಲ್ಲಿ ಚುನಾವಣೆಗೆ ಮುನ್ನವೇ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಲಾಗಿತ್ತು. ಅತ್ಯಾಚಾರಿಗಳಿಗೆ ಹಾರ ಹಾಕಲಾಯಿತು. ಬಿಜೆಪಿಯ ಇಬ್ಬರು ಶಾಸಕರು ಅವಪರಾಧಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡರು ಮತ್ತು ಒಬ್ಬ ಶಾಸಕರು ಅವರನ್ನು ಸಂಸ್ಕಾರಿ ಎಂದು ಕರೆದಿದ್ದರು ಎಂದು ನೆನಪಿಸಿಕೊಂಡರು.
ನ್ಯಾಯಕ್ಕೆ ಸಿಕ್ಕ ವಿಜಯ
ಚುನಾವಣಾ ಲಾಭಕ್ಕಾಗಿ ನ್ಯಾಯವನ್ನು ಕೊಲ್ಲುವ ಪ್ರವೃತ್ತಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ. ಇಂದು, ಸುಪ್ರೀಂ ಕೋರ್ಟಿನ ತೀರ್ಪು ಮತ್ತೊಮ್ಮೆ ದೇಶಕ್ಕೆ ಯಾರು 'ಅಪರಾಧಿಗಳಿಗೆ ರಕ್ಷಣೆ' ನೀಡುತ್ತಿದ್ದಾರೆ ಎಂಬುದನ್ನು ತೋರಿಸಿದೆ. ಬಿಲ್ಕಿಸ್ ಬಾನು ಅವರ ದಣಿವರಿಯದ ಹೋರಾಟವು ದುರಹಂಕಾರಿ ಬಿಜೆಪಿ ಸರ್ಕಾರದ ವಿರುದ್ಧ ನ್ಯಾಯದ ವಿಜಯದ ಸಂಕೇತವಾಗಿದೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.