ದೇಶ

75ನೇ ಗಣರಾಜ್ಯೋತ್ಸವ ಸಂಭ್ರಮ: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Manjula VN

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಸಾಥ್‌ ನೀಡಿದರು. ನಂತರ ಭವ್ಯ ಮೆರವಣಿಗೆ ಪ್ರಾರಂಭವಾಯಿತು. ಸಮಾರಂಭದಲ್ಲಿ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.

ಧ್ವಜಾರೋಹಣದ ಬೆನ್ನಲ್ಲೇ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪರೇಡ್‌ ಆರಂಭವಾಯಿತು. ರಾಜಪಥ್‌ ಕರ್ತವ್ಯಪಥ ಎಂದು ಮರುನಾಮಕರಣಗೊಂಡ ಬಳಿಕ ನಡೆಯುತ್ತಿರುವ 2ನೇ ಗಣರಾಜ್ಯೋತ್ಸವ ಇದಾಗಿದ್ದು, ಪರೇಡ್‌ ಮೂಲಕ ವಿಶ್ವದ ಮುಂದೆ ದೇಶದ ಶಕ್ತಿ ಕರ್ತವ್ಯಪಥದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗುತ್ತಿದೆ.

‘ಫ್ರೆಂಚ್‌ ವಿದೇಶಿ ಪಡೆ’ ಪಥಸಂಚಲನ
ಫ್ರಾನ್ಸ್ ಸೇನಾ ತುಕಡಿ, ಯುದ್ಧವಿಮಾನಗಳು ಪಥಸಂಚನದಲ್ಲಿ ಭಾಗಿಯಾಗಿವೆ. ಯೂರೋಪ್, ಆಫ್ರಿಕಾ, ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡ ‘ಫ್ರೆಂಚ್‌ ವಿದೇಶಿ ಪಡೆ’ 75ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗಿದೆ.

2023ರಲ್ಲಿ ಪ್ಯಾರಿಸ್‌ ಬ್ಯಾಸ್ಟಿಲ್‌ ಡೇನಲ್ಲಿ ಭಾರತ ಸೇನೆ ಪಾಲ್ಗೊಂಡಿತ್ತು, ಹೀಗಾಗಿ ಇಂದು ಫ್ರೆಂಚ್‌ ವಿದೇಶಿ ಪಡೆ ಪಥಸಂಚಲನದಲ್ಲಿ ಭಾಗಿಯಾಗಿದೆ. ಕ್ಯಾಪ್ಟನ್ ಖೌರ್ಡಾ ನೇತೃತ್ವದಲ್ಲಿ ಫ್ರೆಂಚ್‌ ಸೇನಾ ಬ್ಯಾಂಡ್‌ ಭಾಗಿಯಾಗಿದೆ. 30 ಮಂದಿ ಸಂಗೀತಗಾರರಿಂದ ತಮ್ಮ ರೆಜಿಮೆಂಟ್‌ ಗೀತೆ ಗಾಯನ ನುಡಿಸಲಾಯಿತು.

ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆ ಸೀರೆ ಪ್ರದರ್ಶನ. ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಯೋಜಕತ್ವದಲ್ಲಿ ದೇಶದ ಸುಮಾರು 1,900 ಪ್ರಕಾರಗಳ ಸೀರೆ ಪ್ರದರ್ಶನ ಮಾಡಲಾಯಿತು. ಸೀರೆ ಪ್ರದರ್ಶನಕ್ಕೆ ‘ಅನಂತ’ ಸೂತ್ರ ಎಂದು ಹೆಸರಿಡಲಾಗಿದೆ.

ಕಸೂತಿ ಕಲೆಗೆ ಉತ್ತೇಜನ ನೀಡುವ ಸಲುವಾಗಿ ಸೀರೆ ಪ್ರದರ್ಶನ ಮಾಡಲಾಯಿತು. ಸೀರೆ ಪ್ರದರ್ಶನದಲ್ಲಿ ಮೈಸೂರು ರೇಷ್ಮೆ ಸೀರೆ, ಕಾಂಚೀಪುರಂ ಸೀರೆ, ಕಾಶ್ಮೀರದ ಕಾಶಿದಾ ಸೀರೆ ಸೇರಿ ಮುಂತಾದ ಸೇರಿಗಳ ಪ್ರದರ್ಶನ ಮಾಡಲಾಯಿತು.

SCROLL FOR NEXT