ಹತ್ರಾಸ್: 123 ಜನರ ಸಾವಿಗೆ ಕಾರಣವಾದ ಹತ್ರಾಸ್ನಲ್ಲಿ ಸತ್ಸಂಗ ನಡೆಸಿದ ಸ್ವಯಂಘೋಷಿತ ದೇವಮಾನವ 'ಭೋಲೆ ಬಾಬಾ' ಗಾಗಿ ಉತ್ತರ ಪ್ರದೇಶ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಗುರುವಾರ ಮೈನ್ಪುರಿಯಲ್ಲಿರುವ ರಾಮ್ ಕುಟೀರ್ ಚಾರಿಟೇಬಲ್ ಟ್ರಸ್ಟ್ನಲ್ಲಿ ಶೋಧ ನಡೆಸಿದರು.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಸಭೆಯ ಸಂಘಟಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದರೆ 'ಭೋಲೆ ಬಾಬಾ' ಹೆಸರನ್ನು ಎಫ್ಐಆರ್ ನಲ್ಲಿ ಇನ್ನೂ ಉಲ್ಲೇಖಿಸಿಲ್ಲ. ಮೈನ್ಪುರಿಯ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ) ಸುನೀಲ್ ಕುಮಾರ್ ಅವರು "ಆಶ್ರಮದೊಳಗೆ ಬಾಬಾ ಪತ್ತೆಯಾಗಿಲ್ಲ" ಎಂದು ನಿನ್ನೆ ಹೇಳಿದ್ದರು.
"ಆಶ್ರಮದೊಳಗೆ 40-50 ಸೇವಕರಿದ್ದಾರೆ, ಅವರು('ಭೋಲೆ ಬಾಬಾ') ಆಶ್ರಮದ ಒಳಗೆ ಇಲ್ಲ. ಅವರು ನಿನ್ನೆಯೂ ಬಂದಿಲ್ಲ ಮತ್ತು ಇಂದು ಕೂಡ ಬಂದಿಲ್ಲ..." ಎಂದು ಮೈನಪುರಿ ಡಿಎಸ್ಪಿ ಸುನೀಲ್ ಕುಮಾರ್ ತಿಳಿಸಿದ್ದರು.
ಆಶ್ರಮದ ಭದ್ರತೆ ಪರಿಶೀಲಿಸಲು ಬಂದಿದ್ದೆ. ಇಲ್ಲಿ ಯಾರೂ ಪತ್ತೆಯಾಗಿಲ್ಲ ಎಂದು ಸಿಟಿ ಎಸ್ಪಿ ರಾಹುಲ್ ಮಿಥಾಸ್ ಅವರು ಹೇಳಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಆಶ್ರಮದ ಸುತ್ತ ಪೊಲೀಸ್ ಪಡೆ ನಿಯೋಜಿಸಲಾಗಿತ್ತು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ಅಧಿಕೃತ ಪ್ರಕಟಣೆಯ ಪ್ರಕಾರ, ವಿಷಯದ ಸಮಗ್ರತೆ ಮತ್ತು ವಿಚಾರಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಮೂರ್ತಿ(ನಿವೃತ್ತ) ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಅವರ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ನ್ಯಾಯಾಂಗ ತನಿಖಾ ಆಯೋಗ ರಚಿಸಲಾಗಿದೆ. ನ್ಯಾಯಾಂಗ ಆಯೋಗವು ಇನ್ನೆರಡು ತಿಂಗಳಲ್ಲಿ ಹತ್ರಾಸ್ ಕಾಲ್ತುಳಿತದ ವಿವಿಧ ಅಂಶಗಳ ಬಗ್ಗೆ ತನಿಖೆ ನಡೆಸಲಿದ್ದು, ತನಿಖೆಯ ನಂತರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.