ಮುಂಬೈ: ಲೋಕಸಭಾ ಚುನಾವಣೆ ವೇಳೆ ಸೀಟು ಹಂಚಿಕೆ ವಿಚಾರವಾಗಿ ದೂರವಾಗಿದ್ದ ಶಿವಸೇನಾ (UTB) ಮತ್ತು ವಂಚಿತ್ ಬಹುಜನ್ ಅಘಾಡಿ (ವಿಬಿಎ) ನಡುವಿನ ಮೈತ್ರಿ ಅಂತ್ಯವಾಗಿದೆ.
ಈ ಬಗ್ಗೆ ವಂಚಿತ್ ಬಹುಜನ್ ಅಘಾಡಿ (ವಿಬಿಎ) ಪಕ್ಷದ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಭಾನುವಾರ ಮಾಹಿತಿ ನೀಡಿದ್ದು, ಶಿವಸೇನಾ (ಯುಟಿಬಿ) ಜೊತೆಗಿನ ಮೈತ್ರಿ ಅಂತ್ಯವಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದ ವಿಬಿಎ ಕಳೆದ ಲೋಕಸಭೆ ಚುನಾವಣೆ ವೇಳೆ ಸೀಟು ಹಂಚಿಕೆ ಸಂಬಂಧ ಉಂಟಾದ ಅಸಮಾಧಾನದ ಬಳಿಕ ಮೈತ್ರಿಯಿಂದ ಹೊರಗೆ ಬಂದಿತ್ತು. ಇಂಡಿಯಾ ಮೈತ್ರಿಕೂಟಕ್ಕೆ ಸೇರುವ ಮೊದಲು ವಿಬಿಎ ಶಿವಸೇನಾ (ಯುಟಿಬಿ) ಜೊತೆ ಮೈತ್ರಿ ಮಾಡಿಕೊಂಡಿತ್ತು. ಇದೀಗ ಶಿವಸೇನೆಯೊಂದಿಗೂ ವಿಬಿಎ ಮೈತ್ರಿ ಅಂತ್ಯಗೊಳಿಸಿದೆ.
ಈ ಬಗ್ಗೆ ಮಾತನಾಡಿದ ಪ್ರಕಾಶ್ ಅಂಬೇಡ್ಕರ್ ‘ಮೈತ್ರಿ ಅಂತ್ಯವಾಗಿದೆ. ಇನ್ನು ಏನೂ ಉಳಿದಿಲ್ಲ’ ಎಂದು ಶಿವಸೇನಾ (ಯುಟಿಬಿ) ಜೊತೆಗಿನ ಮೈತ್ರಿ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು. ಶಿವಸೇನಾ (ಯುಟಿಬಿ) ಹಾಗೂ ವಿಬಿಎ ನಡುವೆ 2023ರ ಜನವರಿಯಲ್ಲಿ ಮೈತ್ರಿ ಏರ್ಪಟ್ಟಿತ್ತು.
ಡಾ. ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗನಾಗಿರುವ ಪ್ರಕಾಶ್ ಅಂಬೇಡ್ಕರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಕೋಲಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಅನುಪ್ ಧೋತ್ರೆ ವಿರುದ್ಧ ಸೋಲನುಭವಿಸಿದ್ದರು.