ನವದೆಹಲಿ: NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ತಲೆಮರೆಸಿಕೊಂಡಿದ್ದ ಕಿಂಗ್ಪಿನ್ ರಾಕಿ ಅಲಿಯಾಸ್ ರಾಕೇಶ್ ರಂಜನ್ನನ್ನು ಸಿಬಿಐ ಗುರುವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಳಂದ ಮೂಲದ ರಾಕಿ ಅಲಿಯಾಸ್ ರಾಕೇಶ್ ರಂಜನ್, ಪ್ರಕರಣದ ಮಾಸ್ಟರ್ ಮೈಂಡ್ ಸಂಜೀವ್ ಮುಖಿಯಾ ಅವರ ಸಂಬಂಧಿ ಎಂದು ಹೇಳಲಾಗಿದ್ದು, ಪಾಟ್ನಾದ ಹೊರವಲಯದಲ್ಲಿ ಸಿಬಿಐ ಬಂಧಿಸಿದೆ ಎಂದು ಅವರು ಹೇಳಿದ್ದಾರೆ.
ಪೇಪರ್ ಸೋರಿಕೆ ಪ್ರಕರಣ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿದ್ದ ರಾಕೇಶ್ ರಂಜನ್ ಗಾಗಿ ಸಿಬಿಐ ತೀವ್ರ ಶೋಧ ನಡೆಸಿತ್ತು. ಅಂತಿಮವಾಗಿ ಇಂದು ಬೆಳಗ್ಗೆ ಸಿಬಿಐ ಕಿಂಗ್ ಪಿನ್ ರಾಕಿಯನ್ನು ಬಂಧಿಸಿದೆ ಎಂದು ಅವರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಪಾಟ್ನಾದ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ರಾಕೇಶ್ ರಂಜನ್ ನನ್ನು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ ಎಂದು ಅವರು ಹೇಳಿದ್ದಾರೆ.
ರಾಕೇಶ್ ರಂಜನ್ ಬಂಧನದ ನಂತರ ಸಿಬಿಐ ಪಾಟ್ನಾ ಮತ್ತು ಹತ್ತಿರದ ಪ್ರದೇಶಗಳಲ್ಲಿ ಮೂರು ಕಡೆ ಮತ್ತು ಕೋಲ್ಕತ್ತಾದ ಒಂದು ಸ್ಥಳಗಳಲ್ಲಿ ತೀವ್ರ ಶೋಧ ನಡೆಸಿತು ಎಂದು ಅವರು ತಿಳಿಸಿದ್ದಾರೆ.
ಈ ಮುಂಚೆ ಸಿಬಿಐ, ಪ್ರಕರಣದಲ್ಲಿ ಜಾರ್ಖಂಡ್ನ ಹಜಾರಿಬಾಗ್ ಮೂಲದ ಓಯಸಿಸ್ ಶಾಲೆಯ ಪ್ರಾಂಶುಪಾಲ ಮತ್ತು ಉಪ ಪ್ರಾಂಶುಪಾಲರನ್ನು ಬಂಧಿಸಿತ್ತು ಮತ್ತು ಸುಟ್ಟ ಪ್ರಶ್ನೆಪತ್ರಿಕೆಗಳನ್ನು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.