ನವದೆಹಲಿ: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭದಲ್ಲಿ ಮತ್ತು ಅಧಿಕೃತ ಭೋಜನ ಕೂಟದಲ್ಲಿ ಭಾಗವಹಿಸುವ ಮೂಲಕ ಉಭಯ ದೇಶಗಳ ನಡುವಿನ ಬಾಂಧವ್ಯ ವೇಗವಾಗಿ ಸುಧಾರಿಸುತ್ತಿದೆ ಎಂಬ ಸಂದೇಶ ರವಾನಿಸಿದರು.
ಆದಾಗ್ಯೂ, ಸೋಮವಾರ ಮಾಲ್ಡೀವ್ಸ್ನ ಸಂಸದೀಯ ಸಮಿತಿಯು ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಎಂಬ ಕಾರಣ ಉಲ್ಲೇಖಿಸಿ, ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವರ ನೇತೃತ್ವದಲ್ಲಿ ಭಾರತದೊಂದಿಗೆ ಮಾಡಿಕೊಂಡ ನಾಲ್ಕು ಒಪ್ಪಂದಗಳನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಿದೆ.
ಸೋಲಿಹ್ ಅವರ ಆಡಳಿತದಲ್ಲಿ ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಸಹಿ ಹಾಕಲಾದ ಎಲ್ಲಾ ಒಪ್ಪಂದಗಳನ್ನು ಪರಿಶೀಲಿಸುವ ಪ್ರಸ್ತಾಪವನ್ನು ಹಿತಾಧೂ ಸೆಂಟ್ರಲ್ ಸಂಸದ ಅಹ್ಮದ್ ಅಜಾನ್ ಅವರು ಮಾಡಿದ್ದಾರೆ.
ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಒಪ್ಪಂದಗಳಲ್ಲಿ ಹೈಡ್ರೋಗ್ರಾಫಿ ಒಪ್ಪಂದ, ಭಾರತದ ಅನುದಾನದ ನೆರವಿನೊಂದಿಗೆ ನಿರ್ಮಿಸಲಾಗುತ್ತಿರುವ ಉತುರು ತಿಲಫಲ್ಹು (UTF) ಡಾಕ್ಯಾರ್ಡ್ ಮತ್ತು ಮಾನವೀಯ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಭಾರತವು ಮಾಲ್ಡೀವ್ಸ್ ರಕ್ಷಣಾ ಪಡೆಗಳಿಗೆ ಉಡುಗೊರೆಯಾಗಿ ನೀಡಿದ ಡೋರ್ನಿಯರ್ ವಿಮಾನಗಳನ್ನು ಒಳಗೊಂಡಿದೆ.
"ಇಂದು, ಸಂಸತ್ತಿನ ರಾಷ್ಟ್ರೀಯ ಭದ್ರತಾ ಸೇವೆಗಳ ಸಮಿತಿಯು ಮಾಲ್ಡೀವ್ಸ್ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಅಧ್ಯಕ್ಷ ಸೋಲಿಹ್ ಅವರ ಆಡಳಿತ ಕೈಗೊಂಡ ಕ್ರಮಗಳನ್ನು ತನಿಖೆ ಮಾಡಲು ಸಂಸದೀಯ ತನಿಖೆ ನಡೆಸಲು ನಿರ್ಧರಿಸಿದೆ" ಎಂದು ಅಹ್ಮದ್ ಅಜಾನ್ ಅವರು ಸೋಮವಾರ ತಿಳಿಸಿದ್ದಾರೆ.