ನಾಗ್ಪುರ: ನಾಗ್ಪುರದಲ್ಲಿ ಸಂಭವಿಸಿದ್ದ ಹಿಟ್ & ರನ್ ಪ್ರಕರಣದ ಹಿಂದೆ ವ್ಯವಸ್ಥಿತ ಸಂಚು ಇದ್ದುದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಹಿಟ್ & ರನ್ ಪ್ರಕರಣ ಎನಿಸಿದರೂ, ನೈಜವಾಗಿ 300 ಕೋಟಿ ರೂಪಾಯಿಗಳ ಆಸ್ತಿಗಾಗಿ ಸೊಸೆ ತನ್ನ ಮಾವನನ್ನು 1 ಕೋಟಿ ರೂಪಾಯಿ ಕೊಟ್ಟು ಕೊಲ್ಲಿಸಿರುವ ಕೇಸ್ ಇದಾಗಿದೆ.
ನಗರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಅರ್ಚನ ಮನೀಷ್ ಪುಟ್ಟೇವಾರ್ ಅವರ ಮಾವ ಪುರುಷೋತ್ತಮ್ ಪುಟ್ಟೇವಾರ್ ಕಾರು ಅಪಘಾತದಲ್ಲಿ ನಿಧನರಾದ ಪ್ರಕರಣದಲ್ಲಿ ಆಕೆಯನ್ನು ಬಂಧಿಸಲಾಗಿದೆ.
ಪ್ರಕರಣದ ಬಗ್ಗೆ ಪಿಟಿಐ ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ಹಿಟ್ & ರನ್ ಪ್ರಕರಣದಂತೆ ಮಾಡಿ ಪುರುಷೋತ್ತಮ್ ಪುಟ್ಟೇವಾರ್ ಅವರನ್ನು ಹತ್ಯೆ ಮಾಡುವುದಕ್ಕಾಗಿ ಅರ್ಚನಾ ಪುಟ್ಟೇವಾರ್ 1 ಕೋಟಿ ರೂಪಾಯಿ ಖರ್ಚು ಮಾಡಿ ಒಂದಷ್ಟು ಜನರನ್ನು ನೇಮಕ ಮಾಡಿದ್ದರು. ಈ ಉದ್ದೇಶಕ್ಕಾಗಿಯೇ ಹಳೆಯ ಕಾರನ್ನು ಖರೀದಿ ಮಾಡುವುದಕ್ಕೆ ಆರೋಪಿಗಳಿಗೆ ಅರ್ಚನಾ ಹಣಕಾಸು ನೆರವು ನೀಡಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿದೆ.
ಅವರ ₹ 300 ಕೋಟಿ ಆಸ್ತಿಯ ಮೇಲೆ ಹಿಡಿತ ಸಾಧಿಸಲು ಕೊಲೆ ಮಾಡಿಸಿ ಕೊಲೆಯನ್ನು ಅಪಘಾತದಂತೆ ಕಾಣಲು ಹೀಗೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
53 ವರ್ಷದ ಮಹಿಳೆ ತನ್ನ ಗಂಡನ ಚಾಲಕ ಬಾಗ್ಡೆ ಮತ್ತು ಇತರ ಇಬ್ಬರು ಆರೋಪಿಗಳಾದ ನೀರಜ್ ನಿಮ್ಜೆ ಮತ್ತು ಸಚಿನ್ ಧಾರ್ಮಿಕ್ ಅವರೊಂದಿಗೆ ಕೊಲೆಗೆ ಸಂಚು ರೂಪಿಸಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪೊಲೀಸರು ಅವರ ವಿರುದ್ಧ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯಡಿ ಕೊಲೆ ಮತ್ತು ಇತರ ಸೆಕ್ಷನ್ಗಳ ಆರೋಪ ಹೊರಿಸಿದ್ದಾರೆ. ಎರಡು ಕಾರು, ಚಿನ್ನಾಭರಣ ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ನಡೆದ ದಿನ ಪುರುಷೋತ್ತಮ ಪುಟ್ಟೇವಾರ್ ಅವರು ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದ ಪತ್ನಿ ಶಕುಂತಲಾ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಹಿಂತಿರುಗುವಾಗ, ಕಾರು ಅವರ ಮೇಲೆ ಹರಿದಿದೆ. ಅವರ ಮಗ, ಅರ್ಚನಾ ಅವರ ಪತಿ ಮನೀಶ್ ವೈದ್ಯರಾಗಿದ್ದಾರೆ.