ಚುನಾವಣಾ ಆಯುಕ್ತ ಅರುಣ್ ಗೋಯಲ್
ಚುನಾವಣಾ ಆಯುಕ್ತ ಅರುಣ್ ಗೋಯಲ್ 
ದೇಶ

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಚುನಾವಣಾ ಆಯುಕ್ತ ಸ್ಥಾನಕ್ಕೆ ಅರುಣ್ ಗೋಯಲ್ ರಾಜೀನಾಮೆ ನೀಡಿದ್ದೇಕೆ?

Srinivasamurthy VN

ನವದೆಹಲಿ: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಚುನಾವಣಾ ಆಯುಕ್ತ ಸ್ಥಾನಕ್ಕೆ ಅರುಣ್ ಗೋಯಲ್ ರಾಜೀನಾಮೆ ನೀಡಿದ್ದು, ಅವರ ದಿಢೀರ್ ನಿರ್ಧಾರದ ಕುರಿತು ನಾನಾ ರೀತಿಯ ಚರ್ಚೆಗಳು ಹರಿದಾಡುತ್ತಿವೆ.

ಶನಿವಾರ ರಾತ್ರಿ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರು ರಾಜೀನಾಮೆ ನೀಡಿರುವುದು ಅಚ್ಚರಿ ಮೂಡಿಸಿದ್ದಲ್ಲದೆ, ದೇಶದಲ್ಲಿ ನ್ಯಾಯಸಮ್ಮತ ಮತ್ತು ಮುಕ್ತ ಚುನಾವಣೆ ನಡೆಸುವ ಕುರಿತು ಊಹಾಪೋಹಗಳು ಮತ್ತು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಲೋಕಸಭಾ ಚುನಾವಣೆಯ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಚುನಾವಣಾ ಆಯುಕ್ತರು ಏಕೆ ರಾಜೀನಾಮೆ ನೀಡಬೇಕು?, ವಿಶೇಷವಾಗಿ ಅವರ ಅಧಿಕಾರಾವಧಿಯು ಡಿಸೆಂಬರ್ 5, 2027 ರಂದು ಮಾತ್ರ ಕೊನೆಗೊಳ್ಳುತ್ತದೆ. ಒಂದು ವೇಳೆ ಅವರು ರಾಜೀನಾಮೆ ನೀಡಿರದಿದ್ದರೆ, ಅವರು ಮುಖ್ಯ ಚುನಾವಣಾ ಆಯುಕ್ತರಾಗುತ್ತಿದ್ದರು. ಹೀಗಿರುವಾಗ ಅರುಣ್ ಗೋಯಲ್ ರಾಜೀನಾಮೆ ನೀಡಿದ್ದೇಕೆ ಎಂಬ ಪ್ರಶ್ನೆಗಳು ಉದ್ಧವಿಸುತ್ತಿವೆ.

ಗೋಯೆಲ್ ಸಂಪೂರ್ಣ ಆರೋಗ್ಯವಾಗಿದ್ದು, ತಮ್ಮ ರಾಜೀನಾಮೆಗೆ "ವೈಯಕ್ತಿಕ ಕಾರಣಗಳನ್ನು" ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. ಅರುಣ್ ಗೋಯೆಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ, ಮಾರ್ಚ್ 9, 2024 ರಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ ಎಂದು ಕಾನೂನು ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ಫೆಬ್ರವರಿಯಲ್ಲಿ ಅನುಪ್ ಚಂದ್ರ ಪಾಂಡೆ ನಿವೃತ್ತಿಯಾಗಿದ್ದರು. ಇದೀಗ ಅರುಣ್ ಗೋಯೆಲ್ ರಾಜೀನಾಮೆಯೊಂದಿಗೆ, ಮೂರು ಸದಸ್ಯರ ಚುನಾವಣಾ ಆಯೋಗವು ಈಗ ಕೇವಲ ಒಬ್ಬ ಸದಸ್ಯ ಅಂದರೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ಗೆ ಸೀಮಿತವಾಗಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕವನ್ನು ನಿಯಂತ್ರಿಸುವ ಹೊಸ ಕಾನೂನಿನಡಿಯಲ್ಲಿ, ಕಾನೂನು ಸಚಿವರ ನೇತೃತ್ವದ ಮತ್ತು ಇಬ್ಬರು ಕೇಂದ್ರ ಕಾರ್ಯದರ್ಶಿಗಳನ್ನು ಒಳಗೊಂಡ ಶೋಧನಾ ಸಮಿತಿಯು ಐದು ಅಭ್ಯರ್ಥಿಗಳ ಪಟ್ಟಿಯನ್ನು ಸಂಗ್ರಹಿಸುತ್ತದೆ. ನಿವೃತ್ತ ಅಧಿಕಾರಿಯಾಗಿದ್ದ ಗೋಯೆಲ್ ಅವರು ಪಂಜಾಬ್ ಕೇಡರ್‌ನ 1985-ಬ್ಯಾಚ್ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ನವೆಂಬರ್ 2022 ರಲ್ಲಿ ಚುನಾವಣಾ ಆಯೋಗವನ್ನು ಸೇರಿದ್ದರು.

ಕಳೆದ ವರ್ಷ, ಚುನಾವಣಾ ಆಯುಕ್ತರಾಗಿ ಗೋಯೆಲ್ ಅವರ ನೇಮಕವನ್ನು ಪ್ರಶ್ನಿಸಿ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಏತನ್ಮಧ್ಯೆ, ಗೋಯೆಲ್ ರಾಜೀನಾಮೆ ನೀಡಿದ ಕೂಡಲೇ, ಟಿಎಂಸಿ ನಾಯಕ ಮಹುವಾ ಮೊಯಿತ್ರಾ ಅವರು ಪ್ಲಾಟ್‌ಫಾರ್ಮ್ X ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, "ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರು ಕೋಲ್ಕತ್ತಾದಲ್ಲಿ ಇಸಿಐನ ಚುನಾವಣಾ ಪರಿಶೀಲನಾ ಸಭೆಯ ನಂತರ ಹಠಾತ್ತಾಗಿ ಏಕೆ ರಾಜೀನಾಮೆ ನೀಡಿದರು? ಸ್ಪಷ್ಟವಾಗಿ ಅವರು ಹಂತಗಳು ಮತ್ತು ವಿಪರೀತ ಬಲದ ನಿಯೋಜನೆ ವಿಚಾರದಲ್ಲಿ ದೆಹಲಿಯ ಆದೇಶವನ್ನು ಒಪ್ಪಲಿಲ್ಲ. ಈಗ ಅವರಿಗೆ ಬೇಕಾದ 'ಎಸ್ ಬಾಸ್'' ವ್ಯಕ್ತಿಯನ್ನು ಆರಿಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು ಅರುಣ್ ಗೋಯೆಲ್ ಅವರು ರಾಜೀನಾಮೆ ನೀಡಲು ತುಂಬಾ ಧೈರ್ಯ ತೋರಿದ್ದರಿಂದ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿ (ತಮ್ಮ ರಾಜೀನಾಮೆಗೆ) ಕಾರಣವನ್ನು ವಿವರಿಸಬೇಕು ಎಂದು ಹೇಳಿದ್ದಾರೆ.

SCROLL FOR NEXT