ಲೋಕಸಭೆ ಚುನಾವಣೆ ಪೂರ್ವಭಾವಿಯಾಗಿ ಕನ್ಯಾಕುಮಾರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಲೋಕಸಭೆ ಚುನಾವಣೆ ಪೂರ್ವಭಾವಿಯಾಗಿ ಕನ್ಯಾಕುಮಾರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 
ದೇಶ

ಜಮ್ಮು ಮತ್ತು ಕಾಶ್ಮೀರದ ಜನರಂತೆ ತಮಿಳುನಾಡಿನ ಜನರೂ ವಿಭಜಕ ಶಕ್ತಿಗಳನ್ನು ತಿರಸ್ಕರಿಸುತ್ತಾರೆ: ಪ್ರಧಾನಿ ಮೋದಿ

Ramyashree GN

ಕನ್ಯಾಕುಮಾರಿ: ದೇಶ ಒಡೆಯುವ ಕನಸು ಕಂಡವರನ್ನು ಜಮ್ಮು ಮತ್ತು ಕಾಶ್ಮೀರದ ಜನತೆ ತಿರಸ್ಕರಿಸಿದ್ದು, ತಮಿಳುನಾಡಿನ ಜನರು ಕೂಡ ಅದನ್ನೇ ಮಾಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಇಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಡಿಎಂಕೆ ಮತ್ತು ಕಾಂಗ್ರೆಸ್ ಜನರನ್ನು 'ಲೂಟಿ' ಮಾಡಲು ಅಧಿಕಾರಕ್ಕೆ ಬರಲು ಬಯಸಿವೆ. 2ಜಿ ಸ್ಪೆಕ್ಟ್ರಂ ಹಗರಣದ 'ಅತಿದೊಡ್ಡ ಫಲಾನುಭವಿ' ಡಿಎಂಕೆ ಎಂದು ಆರೋಪಿಸಿದರು.

ಬಿಜೆಪಿಯು ಜನರ ಮುಂದಿಡಲು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೊಂದಿದೆ. ಆದರೆ, ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಕೇವಲ 'ವಂಚನೆಗಳನ್ನು' ಹೊಂದಿದೆ. ಈ ಹಗರಣಗಳ ಪಟ್ಟಿ ದೊಡ್ಡದಿದೆ ಎಂದು ಪ್ರಧಾನಿ ಹೇಳಿದರು.

ತಮಿಳುನಾಡಿನ ಆಡಳಿತಾರೂಢ ಡಿಎಂಕೆಯನ್ನು ಗುರಿಯಾಗಿಸಿಕೊಂಡ ಅವರು, ಡಿಎಂಕೆಗೆ ದೇಶ, ಅದರ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ದ್ವೇಷವಿದೆ ಮತ್ತು ದ್ರಾವಿಡ ಪಕ್ಷವು ತಮಿಳುನಾಡಿನ ಭವಿಷ್ಯ, ಸಂಸ್ಕೃತಿಯ ಶತ್ರುವಾಗಿದೆ. ಡಿಎಂಕೆ ಮತ್ತು ಕಾಂಗ್ರೆಸ್ ಮಹಿಳಾ ವಿರೋಧಿಯಾಗಿದ್ದು, ಅವರು ಮಹಿಳೆಯರನ್ನು ಮೂರ್ಖರನ್ನಾಗಿಸಿದ್ದಾರೆ ಮತ್ತು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ತಮಿಳುನಾಡಿನ ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆ ಬಗ್ಗೆ ಮೃದು ಧೋರಣೆ ಮುಂದುವರಿಸಿದ ಅವರು, ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಡಿಎಂಕೆ ಹೇಗೆ ನಡೆಸಿಕೊಂಡಿದೆ ಎಂಬುದು ಜನರಿಗೆ ತಿಳಿದಿದೆ ಮತ್ತು ಅಂತಹ ಸಂಸ್ಕೃತಿ ಇಂದಿಗೂ ಮುಂದುವರೆದಿದೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ ಎಂದು ಹೇಳಿದರು.

ಇತ್ತೀಚೆಗೆ ಅಯೋಧ್ಯೆಯ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದ ಪ್ರಸಾರವನ್ನು ರಾಜ್ಯವು 'ನಿಷೇಧಿಸಿದೆ' ಎಂಬ ತಮ್ಮ ಪಕ್ಷದ ಆರೋಪವನ್ನು ಅವರು ಪುನರುಚ್ಚರಿಸಿದರು.

ಕನ್ಯಾಕುಮಾರಿ ಜಿಲ್ಲೆಗಾಗಿ ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುತ್ತಿದೆ ಎಂದು ಹೇಳಿದರು.

SCROLL FOR NEXT