ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 
ದೇಶ

ಬಿಜೆಪಿಯವರು ಗದ್ದಲ ಮಾಡುತ್ತಾರೆ, ಆದರೆ ಸಂವಿಧಾನವನ್ನು ಬದಲಿಸುವ ಧೈರ್ಯವಿಲ್ಲ: ರಾಹುಲ್ ಗಾಂಧಿ

Ramyashree GN

ಮುಂಬೈ: ಆಡಳಿತಾರೂಢ ಬಿಜೆಪಿಯು 'ಬಹಳ ಗದ್ದಲ' ಮಾಡುತ್ತದೆ ಆದರೆ, ಸಂವಿಧಾನವನ್ನು 'ಬದಲಾವಣೆ' ಮಾಡುವಷ್ಟು ಧೈರ್ಯವನ್ನು ಹೊಂದಿಲ್ಲ. ಸತ್ಯ ಮತ್ತು ದೇಶದ ಜನರು ತಮ್ಮ ಪರವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.

ಕಾಂಗ್ರೆಸ್‌ನವರು ಸಂವಿಧಾನದಲ್ಲಿ ಬೆಡದ್ದನ್ನೆಲ್ಲ ಸೇರಿಸಿದ್ದು, ಅದರ ತಿದ್ದುಪಡಿ ಮಾಡಬೇಕಿದೆ. ಇದಕ್ಕಾಗಿ ಲೋಕಸಭೆಯಲ್ಲಿ ಬಿಜೆಪಿ 400ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾಗಿದೆ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಇತ್ತೀಚೆಗೆ ಹೇಳಿದ್ದಾರೆ.

ಹೆಗಡೆ ಅವರ ಹೇಳಿಕೆಯಿಂದ ಉಂಟಾದ ಗದ್ದಲವನ್ನು ಶಮನಗೊಳಿಸಲು ಬಿಜೆಪಿಯು ಮುಂದಾಯಿತು. ಹೆಗಡೆ ಅವರ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯ ಎಂದು ಕರೆದು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಯಿತು.

ಮುಂಬೈನ ಮಹಾತ್ಮ ಗಾಂಧಿಯವರ ಮನೆಯಾದ ಮಣಿ ಭವನದಿಂದ ನ್ಯಾಯ ಸಂಕಲ್ಪ ಪಾದಯಾತ್ರೆಯನ್ನು ಕೈಗೊಂಡ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಬಿಜೆಪಿಯವರು ಗದ್ದಲ ಸೃಷ್ಟಿಸುತ್ತಾರೆ. ಆದರೆ, ಸಂವಿಧಾನವನ್ನು ಬದಲಾಯಿಸುವಷ್ಟು ಧೈರ್ಯ ಅವರಿಗಿಲ್ಲ. ಸತ್ಯ ಮತ್ತು ಜನರ ಬೆಂಬಲ ನಮ್ಮ ಕಡೆ ಇದೆ ಎಂದರು.

ಸದ್ಯದ ಹೋರಾಟವು ಎರಡು 'ಅಭಿವ್ಯಕ್ತಿಗಳ' ನಡುವೆ ಇದೆ, ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಲ್ಲ. ಅಧಿಕಾರ ಕೇಂದ್ರೀಕರಣವಾಗಬೇಕು, ಒಬ್ಬ ವ್ಯಕ್ತಿಯು ದೇಶವನ್ನು ಮುನ್ನಡೆಸಬೇಕು ಎಂದು ಅವರು ಭಾವಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಅಧಿಕಾರ ವಿಕೇಂದ್ರೀಕರಣವಾಗಬೇಕು ಮತ್ತು ಜನರ ಧ್ವನಿಯನ್ನು ಕೇಳಬೇಕು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

ಒಬ್ಬ ವ್ಯಕ್ತಿಯು ಐಐಟಿ ಪದವಿ ಪಡೆದರೆ, ಅದು ರೈತನಿಗಿಂತಲೂ ಹೆಚ್ಚು ಜ್ಞಾನವನ್ನು ಹೊಂದಿರುವವನನ್ನಾಗಿ ಮಾಡುವುದಿಲ್ಲ. ಆದರೆ ಬಿಜೆಪಿ ಈ ರೀತಿ ಕಾರ್ಯನಿರ್ವಹಿಸುವುದಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದರು.

'(ಪ್ರಧಾನಿ) ಮೋದಿ ಮತ್ತು ಆರ್‌ಎಸ್‌ಎಸ್ ಜ್ಞಾನವು ಒಬ್ಬ ವ್ಯಕ್ತಿಯ ಬಳಿ ಇರುತ್ತದೆ ಎಂಬ ದೃಷ್ಟಿಕೋನವನ್ನು ಹೊಂದಿದೆ. ರೈತರು, ಕಾರ್ಮಿಕರು ಮತ್ತು ನಿರುದ್ಯೋಗಿ ಯುವಕರಿಗೆ ಜ್ಞಾನವಿಲ್ಲ ಎಂದು ಅವರು ಭಾವಿಸುತ್ತಾರೆ' ಎಂದು ಅವರು ಹೇಳಿದರು.

ಶನಿವಾರ, ಕಾಂಗ್ರೆಸ್ ಸಂಸದರು ಸೆಂಟ್ರಲ್ ಮುಂಬೈನಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಅವರ ಸ್ಮಾರಕ 'ಚೈತ್ಯಭೂಮಿ'ಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಮತ್ತು ಸಂವಿಧಾನದ ಮುನ್ನುಡಿಯನ್ನು ಓದುವ ಮೂಲಕ ತಮ್ಮ 63 ದಿನಗಳ 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯನ್ನು ಇಲ್ಲಿ ಮುಕ್ತಾಯಗೊಳಿಸಿದರು.

ಲೋಕಸಭೆ ಚುನಾವಣೆಗೆ ಮುನ್ನ ಪಾದಯಾತ್ರೆಯು ಜನವರಿ 14 ರಂದು ಕಲಹ ಪೀಡಿತ ಮಣಿಪುರದಿಂದ ಪ್ರಾರಂಭವಾಯಿತು.

SCROLL FOR NEXT