ಎಎಪಿ ಪ್ರತಿಭಟನೆ
ಎಎಪಿ ಪ್ರತಿಭಟನೆ 
ದೇಶ

ಮುಖ್ಯಮಂತ್ರಿ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ ನೀಡಲ್ಲ: ಎಎಪಿ ಸಭೆಯಲ್ಲಿ ನಿರ್ಧಾರ

Nagaraja AB

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಭಾನುವಾರ ನಡೆದ ಎಎಪಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಬಂಧನದ ಹಿನ್ನೆಲೆಯಲ್ಲಿ ತನ್ನ ಮುಂದಿನ ಕ್ರಮವನ್ನು ನಿರ್ಧರಿಸಲು ಎಎಪಿ ಭಾನುವಾರ ಸಭೆ ನಡೆಸಿತು. ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಡಾ ಸಂದೀಪ್ ಪಾಠಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಸಚಿವರು, ಶಾಸಕರು ಮತ್ತು ಪಕ್ಷವು ಜೈಲಿನಿಂದ ಅವರ ಆದೇಶವನ್ನು ಮುಂದುವರಿಸುತ್ತದೆ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.

'ಮೈನ್ ಭಿ ಕೇಜ್ರಿವಾಲ್' ಅಭಿಯಾನ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಮನೆಗಳ ಹೊರಗೆ ಮತ್ತು ಆಟೋ-ರಿಕ್ಷಾಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತದೆ ಮತ್ತು ಹೋರ್ಡಿಂಗ್ ಅನ್ನು ಸಹ ಹಾಕಲಾಗುತ್ತದೆ.ಮಾರ್ಚ್ 31 ರಂದು ಇಂಡಿಯಾ ಮೈತ್ರಿಕೂಟ ಆಯೋಜಿಸಿರುವ ರ್‍ಯಾಲಿ'ಯಲ್ಲಿ ಭಾಗವಹಿಸುವವರು ತಮ್ಮ ವಾಹನಗಳ ಮೇಲೆ ಅಂಟಿಸಲಾದ 'ಮೈ ಭಿ ಕೇಜ್ರಿವಾಲ್' ಸ್ಟಿಕ್ಕರ್‌ಗಳೊಂದಿಗೆ ಬರಬೇಕು ಎಂದು ಪಾಠಕ್ ಸೂಚಿಸಿದರು. ಮಾರ್ಚ್ 31 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟ ಆಯೋಜಿಸಿರುವ ಮಹಾ ರ್‍ಯಾಲಿ'ಯಲ್ಲಿ ಆಪ್ ಮತ್ತು ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ.

ಮಾರ್ಚ್ 31 ರಂದು ರಾಮಲೀಲಾ ಮೈದಾನವನ್ನು ತಲುಪಲು ಪ್ರತಿ ಬೂತ್‌ನಿಂದ 10 ಜನರನ್ನು ಕರೆತರಲು ಮಾರ್ಚ್ 27-28 ರಂದು ಶಾಸಕರು ಮತ್ತು ಕೌನ್ಸಿಲರ್‌ಗಳೊಂದಿಗೆ ವಲಯ ಮಟ್ಟದ ಸಭೆಗಳನ್ನು ಆಯೋಜಿಸುವಂತೆ ಅವರು ಪಕ್ಷದ ಮುಖಂಡರನ್ನು ಒತ್ತಾಯಿಸಿದರು. "ಸುಮಾರು 14,000 ಬೂತ್‌ಗಳಿವೆ. ಪ್ರತಿ ಬೂತ್‌ನಿಂದ 10 ಜನರು ಬಂದರೆ ರಾಮಲೀಲಾ ಮೈದಾನಕ್ಕೆ ತಲುಪುವವರ ಸಂಖ್ಯೆ 1.5 ಲಕ್ಷ ಆಗಿರುತ್ತದೆ ಎಂದು ಅವರು ತಿಳಿಸಿದರು.

ಪಕ್ಷವನ್ನು ಯಾರು ಒಡೆಯಲು ಹೋಗುವುದಿಲ್ಲ, ಜೈಲಿನಲ್ಲಿರುವ ಕೇಜ್ರಿವಾಲ್ ಅವರು ಜೈಲಿನ ಹೊರಗೆ ಇದ್ದದ್ದಕ್ಕಿಂತ ಹೆಚ್ಚು ಅಪಾಯಕಾರಿ. ಈಗ ಯಾವುದೇ ಮನವಿ ಇರುವುದಿಲ್ಲ, ಯುದ್ಧ ಇರುತ್ತದೆ. ಈಗ ನಾವು ಜೈಲಿನಿಂದ ಆದೇಶಗಳನ್ನು ಪಡೆಯುತ್ತೇವೆ ಮತ್ತು ನಾವು ಅವುಗಳನ್ನು ಅನುಸರಿಸುತ್ತೇವೆ ಎಂದು ಅವರು ಹೇಳಿದರು.

ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಅವರ ಅಧಿಕೃತ ನಿವಾಸದಿಂದ ಬಂಧಿಸಿತ್ತು. ಶುಕ್ರವಾರದಂದು ನ್ಯಾಯಾಲಯ ಎಎಪಿ ರಾಷ್ಟ್ರೀಯ ಸಂಚಾಲಕರನ್ನು ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿತು.

SCROLL FOR NEXT