ಚೆನ್ನೈ: ಕನ್ನಡದ ಮೊದಲ ಖಾಸಗಿ ಉಪಗ್ರಹ ಚಾನೆಲ್ ಉದಯಟಿವಿ ಅಧ್ಯಕ್ಷ ಹಾಗೂ ಡಿಎಂಕೆ ಮುಖವಾಣಿ 'ಮುರಸೋಳಿ' ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಷಣ್ಮುಗ ಸುಂದರಂ ಸೆಲ್ವಂ (ಮುರಸೋಳಿ ಸೆಲ್ವಂ) ಅವರು ಗುರುವಾರ ನಿಧನರಾಗಿದ್ದು, ಅವರಿಗೆ 82 ವರ್ಷ ವಯ್ಯಸಾಗಿತ್ತು.
ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖವಾಣಿ ಮುರಸೋಳಿಯ ಮಾಜಿ ಸಂಪಾದಕ ಹಾಗೂ ಪಕ್ಷದ ದಿವಂಗತ ಎಂ ಕರುಣಾನಿಧಿ ಅವರ ಅಳಿಯ ಸೆಲ್ವಂ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮಾಜಿ ಕೇಂದ್ರ ಸಚಿವ ಮುರಸೋಳಿ ಮಾರನ್ ಅವರ ಸಹೋದರರೂ ಆಗಿರುವ ಸೆಲ್ವಂ ಅವರು ಪತ್ನಿ ಹಾಗೂ ಕರುಣಾನಿಧಿ ಅವರ ಪುತ್ರಿ ಸೆಲ್ವಿ, ಅವರ ಪುತ್ರಿಯನ್ನು ಅಗಲಿದ್ದಾರೆ.
ಸೆಲ್ವಂ ಅವರು ಹೃದಯಾಘಾತಕ್ಕೆ ಒಳಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುರುವಾರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ತವರೂರು ಚೆನ್ನೈಗೆ ತರಲಾಗಿದೆ.
ಎಂಕೆ ಸ್ಟಾಲಿನ್ ಸಂತಾಪ
ಇನ್ನು ತಮ್ಮ ಸಂಬಂಧಿ ಸೆಲ್ವಂ ಸಾವಿಗೆ ಕಂಬನಿ ಮಿಡಿದಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಭಾರದ ಮನಸ್ಸಿನಿಂದಲೇ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
'ಮುರಸೋಳಿ ಸೆಲ್ವಂ ಅವರು ನಿರ್ಣಾಯಕ ಘಟ್ಟಗಳಲ್ಲಿ ನನಗೆ ಸಲಹೆ ನೀಡುವ ಮೂಲಕ ನಾನು ಡಿಎಂಕೆ ಪಕ್ಷದಲ್ಲಿ ಮೇಲ್ಪಂಕ್ತಿ ನಾಯಕರಲ್ಲಿ ಗುರುತಿಸಿಕೊಳ್ಳಲು ನೆರವಾಗಿದ್ದರು. ನನ್ನ ಬೆನ್ನಿಗೆ ನಿಲ್ಲುವ ಮೂಲಕ ನನ್ನ ರಾಜಕೀಯ ಪಯಣದಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸಿದ್ದಾರೆ. ಆದರೆ ಇದೀಗ ನನ್ನ ತಂದೆಯ ಮರಣದ ನಂತರ ನಾನು ಸೈದ್ಧಾಂತಿಕ ಸ್ತಂಭವಾದ ಏಕೈಕ ಭುಜವನ್ನು ಕಳೆದುಕೊಂಡಿದ್ದೇನೆ. ನನ್ನ ನಷ್ಟವನ್ನು ನಾನೇ ಅರಗಿಸಿಕೊಳ್ಳಲು ಸಾಧ್ಯವಾಗದಿರುವಾಗ ನಾನು ನನ್ನ ಕುಟುಂಬ ಮತ್ತು ಕಾರ್ಯಕರ್ತರಿಗೆ ಹೇಗೆ ಸಾಂತ್ವನ ಹೇಳಲಿ ಎಂದು ಸ್ಟಾಲಿನ್ ಭಾವುಕರಾಗಿ ಹೇಳಿದ್ದಾರೆ.
ಸಂತಾಪ ಸೂಚಿಸಿದ 'ಉದಯಟಿವಿ'
ಇನ್ನು ಮುರಸೋಳಿ ಸೆಲ್ವಂ ಅವರು ಕನ್ನಡದ ಮೊದಲ ಖಾಸಗಿ ಉಪಗ್ರಹ ಚಾನೆಲ್ ಉದಯಟಿವಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಇದಲ್ಲದೆ ಹಲವು ಕನ್ನಡ ಚಿತ್ರಗಳಿಗೆ ನಿರ್ಮಾಪಕರೂ ಕೂಡ ಆಗಿದ್ದರು. ಸೆಲ್ವಂ ನಿಧನಕ್ಕೆ ಉದಯಟಿವಿ ಬಳಗ ಟ್ವೀಟ್ ಮೂಲಕ ಸಂತಾಪ ಸೂಚಿಸಿದೆ.
1994ರ ಜೂನ್ನಲ್ಲಿ ಉದಯ ಟಿವಿ ಸ್ಥಾಪನೆಯಾಗಿತ್ತು. ತಮಿಳುನಾಡಿನ ಚೆನ್ನೈನಲ್ಲಿ ಇದು ಪ್ರಸಾರ ಆರಂಭಿಸಿತ್ತು. ಇದನ್ನು ಸನ್ ಟಿವಿಯ ಅಧ್ಯಕ್ಷರಾದ ಕಲಾನಿಧಿ ಮಾರನ್ ಪ್ರಾರಂಭಿಸಿದ್ದರು. ಇದು ಕನ್ನಡದಲ್ಲಿ ಪ್ರಸಾರ ಆರಂಭಿಸಿದ ಮೊದಲ ಉಪಗ್ರಹ ವಾಹಿಸಿ ಎಂಬ ಹೆಗ್ಗಳಿಕೆ ಹೊಂದಿದೆ. ವೇಗವಾಗಿ ಬೆಳೆದ ಉದಯ ಚಾನೆಲ್, 2000ರಲ್ಲಿ ಕರ್ನಾಟಕದ ಟಿವಿ ವಲಯದ ಶೇ.70% ಆದಾಯ ಹೊಂದಿತ್ತು ಎನ್ನಲಾಗಿದೆ.
2000ದಲ್ಲಿ ಅತ್ಯುತ್ತಮ ಕನ್ನಡ ಟಿವಿ ಚಾನೆಲ್ ಎಂದು ಇಂಡಿಯನ್ ಟೆಲಿವಿಷನ್ ಅಕಾಡೆಮಿಯ ಪ್ರಶಸ್ತಿ ಕೂಡ ಗೆದ್ದುಕೊಂಡಿತ್ತು. 2004ರವರೆಗೆ ಇದು ಉಚಿತ ಪ್ರಸಾರದ ಚಾನಲ್ ಆಗಿತ್ತು. ನಂತರ ಪಾವತಿ ಚಾನೆಲ್ ಆಗಿ ಮಾಡಲಾಯಿತು.