ಬೆಳಗಾವಿ: ಭಾರತೀಯ ಸೇನೆಯ ಕಮಾಂಡೋಗಳ ತರಬೇತಿ ವೇಳೆ ದುರಂತ ನಡೆದಿದ್ದು, ಬೋಟ್ ಮಗುಚಿ ಇಬ್ಬರು ಯೋಧರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಘಡ ತಾಲೂಕಿನ ಹಾಜಗೋಳಿ ಬಳಿ ಈ ಘಟನೆ ನಡೆದಿದ್ದು, ತರಬೇತಿ ವೇಳೆ ಬೋಟ್ ಮಗುಚಿ ಇಬ್ಬರು ಜೂನಿಯರ್ ಕಮಾಂಡೋಗಳು (commandos) ಸಾವನ್ನಪ್ಪಿದ್ದಾರೆ.
ಮೃತರನ್ನು ರಾಜಸ್ಥಾನದ ವಿಜಯಕುಮಾರ್(28) ಮತ್ತು ಪಶ್ಚಿಮ ಬಂಗಾಳದ ದಿವಾಕರ್ ರಾಯ್(26) ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಜೂನಿಯರ್ ಕಮಾಂಡೋಗಳಾಗಿದ್ದು, ತಿಲಾರಿ ಡ್ಯಾಂ ಹಿನ್ನೀರಿನಲ್ಲಿ ನದಿ ದಾಟುವ ತರಬೇತಿ ನೀಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ನಾಲ್ವರು ಪಾರು
ಈ ತರಬೇತಿಯಲ್ಲಿ ಬೋಟ್ ನಲ್ಲಿ ಒಟ್ಟು ಆರು ಜನರಿದ್ದರು ಎಂದು ತಿಳಿದುಬಂದಿದ್ದು, ಈ ಪೈಕಿ ಬೋಟ್ನಿಂದ ನಾಲ್ವರು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಜೆಎಲ್ವಿಂಗ್ ಕಮಾಂಡೋ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.