ಲಖನೌ: ರೈಲು ಹಳಿ ತಪ್ಪಿಸಲು ಟ್ರ್ಯಾಕ್ ಮೇಲೆ ದುಷ್ಕರ್ಮಿಗಳು ಗ್ಯಾಸ್ ಸಿಲಿಂಡರ್ ಇಟ್ಟಿರುವ ವಿಕೃತ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ ಮಾರ್ಗವಾಗಿ ಭಿವಾನಿಗೆ ತೆರಳುತ್ತಿದ್ದ ಕಾಳಿಂದಿ ಎಕ್ಸ್ಪ್ರೆಸ್ ರೈಲು ತೆರಳುವ ಹಳಿಗಳ ಮೇಲೆ ದುಷ್ಕರ್ಮಿಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಇಟ್ಟಿದ್ದು, ಲೋಕೋ ಪೈಲಟ್ ಇದನ್ನು ಗಮನಿಸಿ ತಕ್ಷಣ ತುರ್ತು ಬ್ರೇಕ್ ಹಾಕಿದ್ದಾರೆ.
ಈ ವೇಳೆ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ ರೈಲು ಬಡಿದು ಸಿಲಿಂಡರ್ ದೂರಕ್ಕೆ ಹಾರಿದೆ. ಅದೃಷ್ಟವಶಾತ್ ಸಂಭಾವ್ಯ ಅನಾಹುತ ತಪ್ಪಿ ರೈಲು ಸುರಕ್ಷಿತವಾಗಿದೆ.
ಮೂಲಗಳ ಪ್ರಕಾರ ಇಲ್ಲಿನ ಶಿವರಾಜ್ಪುರ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ರೈಲು ಅಪಘಾತ ನಡೆಸುವ ದುರುದ್ದೇಶದಿಂದ ಹಳಿಯ ಮೇಲೆ ಸಿಲಿಂಡರ್ ಇಡಲಾಗಿತ್ತು ಎಂದು ತಿಳಿದುಬಂದಿದೆ. ವಿಚಾರ ತಿಳಿದ ಕೂಡಲೇ ಹಿರಿಯ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ರಕ್ಷಣಾ ದಳ (ಆರ್ಪಿಎಫ್) ವಿಧಿ ವಿಜ್ಞಾನ ತಂಡವನ್ನೂ ಸ್ಥಳಕ್ಕೆ ಕರೆಸಿ ತನಿಖೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ಎಸಿಪಿ ಹರೀಶ್ ಚಂದ್ರ ಅವರು, "ಹಳಿಗಳ ಮೇಲೆ ಇಡಲಾಗಿದ್ದ ಎಲ್ಪಿಜಿ ಸಿಲಿಂಡರ್ ಅನ್ನು ಲೋಕೋ ಪೈಲಟ್ ಗಮನಿಸಿ ತುರ್ತು ಬ್ರೇಕ್ ಹಾಕಿದ್ದಾರೆ. ಘರ್ಷಣೆಯಿಂದಾಗಿ ಸಿಲಿಂಡರ್ಗೆ ಬದಿಗೆ ಸರಿದಿದೆ.
ಲೋಕೋ ಪೈಲಟ್ ಈ ಬಗ್ಗೆ ಗಾರ್ಡ್ ಮತ್ತು ಗೇಟ್ಮ್ಯಾನ್ಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ರೈಲು ಶಿವರಾಜ್ಫುರ ಪ್ರದೇಶದಲ್ಲಿ 20 ನಿಮಿಷ ರೈಲು ನಿಂತಿತ್ತು. ಪ್ರಸ್ತುತ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ ಪೆಟ್ರೋಲ್ ಮತ್ತು ಬೆಂಕಿಪೊಟ್ಟಣವನ್ನೂ ಜಪ್ತಿ ಮಾಡಲಾಗಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.