ಲಖನೌ: ಗಂಗಾ ಮಾತೆ ನಿಮ್ಮ ಪಾದ ತೊಳೆಯಲೆಂದೇ ಬಂದಿದ್ದಾಳೆ. ಮಾತೆಯ ದರ್ಶನ ಮಾತ್ರದಿಂದ ನೀವು ನೇರವಾಗಿ ಸ್ವರ್ಗಕ್ಕೆ ಹೋಗುವಿರಿ. ಆದರೆ, ವಿರೋಧ ಪಕ್ಷಗಳ ನಾಯಕರು ನಿಮಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಉತ್ತರ ಪ್ರದೇಶ ಸಚಿವ ಸಂಜಯ ನಿಶಾದ್ ಅವರು, ಕಾನ್ಪುರ ಗ್ರಾಮಾಂತರ ಜಿಲ್ಲೆಯ ಭೋಗಿನಿಪುರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಹೇಳಿರುವ ಮಾತುಗಳಿವು.
ಪ್ರವಾಹದಿಂದಾಗಿ ನಮ್ಮ ಮನೆಗಳು ನಾಶವಾಗಿವೆ. ಎಲ್ಲಿಗೆ ಹೋಗಬೇಕು ಎಂಬುದು ತಿಳಿಯದೆ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ದೂರಿದ ಸಂತ್ರಸ್ತರನ್ನು ಉದ್ದೇಶಿಸಿ ಅವರು ಈ ಮಾತು ಹೇಳಿದ್ದಾರೆ.
ಗಂಗಾ ಮಾತೆ ತನ್ನ ಪುತ್ರರ ಪಾದಗಳನ್ನು ತೊಳೆಯುವುದಕ್ಕಾಗಿ ಬರುತ್ತಾಳೆ. ಆಕೆಯ ದರ್ಶನದಿಂದ ಪುತ್ರರೆಲ್ಲಾ ಸ್ವರ್ಗಕ್ಕೆ ಹೋಗುತ್ತಾರೆ ಎಂದೂ ಸಚಿವ ನಿಶಾದ್ ಹೇಳಿದ್ದಾರೆ. ಸಚಿವರ ಈ ಮಾತುಗಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಇದೇ ವೇಳೆ ಅಲ್ಲಿದ್ದ ಮಹಿಳೆ ನೀವು ಇಲ್ಲಿಯೇ ಇದ್ದು ಆಶೀರ್ವಾದ ಪಡೆಯಿರಿ ಎಂದಿದ್ದಾರೆ. ಸಂಜಯ ಅವರು ನಿಶಾದ್ ಪಕ್ಷದ ಅಧ್ಯಕ್ಷ. ಈ ಪಕ್ಷ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವೂ ಆಗಿದೆ. ನಂತರ ಅವರು ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು.