ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಆಪ್ತರಾಗಿರುವ ಮಹಾಯುತಿ ಮಿತ್ರಪಕ್ಷದ 22 ಶಾಸಕರು ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ ಎಂದು ಶಿವಸೇನಾ- ಯುಬಿಟಿ ನಾಯಕ ಆದಿತ್ಯ ಠಾಕ್ರೆ ಸೋಮವಾರ ಹೇಳಿದ್ದಾರೆ. ಅವರು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕರನ್ನು ಉಲ್ಲೇಖಿಸಿ ಈ ಮಾತುಗಳನ್ನಾಡಿದ್ದಾರೆ.
ಜೂನ್ 2022 ರಲ್ಲಿ ಶಿಂಧೆ ನೇತೃತ್ವದ ಬಂಡಾಯದ ನಂತರ ಶಿವಸೇನೆ ವಿಭಜನೆಯಾಯಿತು.ಇದರ ಪರಿಣಾಮ ಅಂದಿನ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಯಿತು. ನಂತರ ಜನವರಿ 2024 ರಲ್ಲಿ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಏಕನಾಥ್ ಶಿಂಧೆ ನೇತೃತ್ವದ ಬಣವು "ನೈಜ" ಶಿವಸೇನೆ ಎಂದು ಘೋಷಿಸಿದರು.
ಇದು ಬಿಜೆಪಿ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಎನ್ಸಿಪಿ ಜೊತೆಗೆ ರಾಜ್ಯದಲ್ಲಿ ಆಡಳಿತ ನಡೆಸುವ ಮಹಾಯುತಿಯ ಮೈತ್ರಿಪಕ್ಷವಾಗಿದೆ.
ಆಡಳಿತಾರೂಢ ಸರ್ಕಾರದಲ್ಲಿ ಒಂದು ಪಕ್ಷ ಮತ್ತು ಎರಡು ಬಣಗಳಿವೆ. ಒಂದು ಬಣದ ಇಪ್ಪತ್ತೆರಡು ಶಾಸಕರು ಸಿಎಂಗೆ ಹತ್ತಿರವಾಗಿದ್ದಾರೆ. ಅವರ ಬಳಿ ಸಾಕಷ್ಟು ಹಣವಿದ್ದು, ಸಿಎಂ ತಾಳಕ್ಕೆ ತಕ್ಕಂತೆ ಕುಣಿಯಲು ಪ್ರಾರಂಭಿಸಿದ್ದಾರೆ" ಎಂದು ಶಿಂಧೆ ನೇತೃತ್ವದ ಶಿವಸೇನೆಯನ್ನು ಹೆಸರಿಸದೆ ಆದಿತ್ಯ ಠಾಕ್ರೆ ಹೇಳಿದ್ದಾರೆ.
ವಿಧಾನ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 22 ಶಾಸಕರು ಪಕ್ಷವನ್ನು ಬದಲಾಯಿಸಲು ಸಿದ್ಧರಾಗಿದ್ದಾರೆ. ಈ 22 ಶಾಸಕರಲ್ಲಿ ಯಾರೋ ಒಬ್ಬರು ತಮ್ಮನ್ನು "ಉಪನಾಯಕ" ಎಂದು ಕರೆದುಕೊಳ್ಳುತ್ತಾರೆ ಎಂದು ಕೈಗಾರಿಕಾ ಸಚಿವ ಉದಯ್ ಸಾಮಂತ್ ಅವರ ಮುಸುಕಿನ ಗುದ್ದಾಟವನ್ನು ಉಲ್ಲೇಖಿಸಿ ಆದಿತ್ಯ ಠಾಕ್ರೆ ಹೇಳಿದರು.
ಈ ಹಿಂದೆ, ಶಿಂಧೆ ಮತ್ತು ಅಜಿತ್ ಪವಾರ್ ಜೊತೆಗೆ ಸಮಂತ್ ರಾಜ್ಯದ ಮೂರನೇ ಮುಖ್ಯಮಂತ್ರಿಯಾಗಬಹುದು ಎಂದು ಶಿವಸೇನೆ-ಯುಬಿಟಿ ಹೇಳಿಕೊಂಡಿತ್ತು. ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ನೇಮಿಸುವ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಸರ್ಕಾರ ಯಾಕೆ ಹೆದರುತ್ತಿದೆ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.
ಶಿವಸೇನಾ-ಯುಬಿಟಿ ನಾಯಕ ಭಾಸ್ಕರ್ ಜಾಧವ್ ಅವರನ್ನು ಶಾಸಕಾಂಗ ಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಹೆಸರಿಸಲಾಗಿದೆ. ಆದರೆ ಸ್ಪೀಕರ್ ಕ್ಯಾಬಿನೆಟ್ ದರ್ಜೆಯ ನೇಮಕಾತಿಯ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.