ನವದೆಹಲಿ: UAE ಗೆ ಪರಾರಿಯಾಗಿರುವ ಕ್ರಿಮಿನಲ್ ರಾವ್ ಇಂದರ್ ಜೀತ್ ಯಾದವ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮತ್ತು ಹರಿಯಾಣದ ಗುರುಗ್ರಾಮ್ ಮತ್ತು ರೋಹ್ಟಕ್ನಾದ್ಯಂತ ಹತ್ತು ಸ್ಥಳಗಳಲ್ಲಿ ಸೋಮವಾರ ದಾಳಿ ನಡೆಸಿರುವುದಾಗಿ ಜಾರಿ ನಿರ್ದೇಶನಾಲಯ (ED)ತಿಳಿಸಿದೆ. ಐದು ಐಷಾರಾಮಿ ಕಾರುಗಳು, ಬ್ಯಾಂಕ್ ಲಾಕರ್ಗಳು, 17 ಲಕ್ಷ ರೂ. ಮೊತ್ತದ ನಗದು, ವಿವಿಧ ದೋಷಾರೋಪಣೆ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ಯಾದವ್ ಮತ್ತು ಅವರ ಸಹಚರರಿಗೆ ಸಂಬಂಧಿಸಿದ ಡಿಜಿಟಲ್ ಡೇಟಾವನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ವರ್ಷ ರೋಹ್ಟಕ್ನಲ್ಲಿ ಉದ್ಯಮಿಯೊಬ್ಬರ ಹತ್ಯೆಯ ನಂತರ ಮಧ್ಯಪ್ರಾಚ್ಯ ದೇಶಕ್ಕೆ ಪರಾರಿಯಾಗಿರುವ ಯಾದವ್ ವಿರುದ್ಧ ED ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ. ಸುಲಿಗೆ, ಖಾಸಗಿ ಫೈನಾನ್ಷಿಯರ್ ನೀಡಿದ ಸಾಲಕ್ಕೆ ಬಲವಂತದಿಂದ ವಸೂಲಿ, ಸಶಸ್ತ್ರ ಬೆದರಿಕೆಯಂತಹ ಕಾನೂನುಬಾಹಿರ ಚಟುವಟಿಕೆಗಳಿಂದ ಕಮಿಷನ್ ಗಳಿಸಿದ ಆರೋಪ ಅವರ ಮೇಲಿದೆ.
ಯಾದವ್ ಮತ್ತು ಆತನ ಸಹಚರರ ವಿರುದ್ಧ ಹರಿಯಾಣ ಮತ್ತು ಉತ್ತರ ಪ್ರದೇಶ ಪೊಲೀಸರು ಸಲ್ಲಿಸಿರುವ 15ಕ್ಕೂ ಹೆಚ್ಚು ಪ್ರಕರಣಗಳು ಮತ್ತು ಆರೋಪಪಟ್ಟಿಗಳ ಆಧಾರದ ಮೇಲೆ ತನಿಖಾ ಸಂಸ್ಥೆ ಈ ಕ್ರಮ ಕೈಗೊಂಡಿದೆ.
ರಾವ್ ಇಂದರ್ ಜೀತ್ ಯಾದವ್ ಅವರು'Gems Tunes'ಎಂದು ಕಾರ್ಯನಿರ್ವಹಿಸುವ ಜೆಮ್ ರೆಕಾರ್ಡ್ಸ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲ್ಪಡುವ ಮ್ಯೂಸಿಕ್ ಕಂಪನಿಯ ಮಾಲೀಕರು ಹಾಗೂ ನಿಯಂತ್ರಕರಾಗಿದ್ದಾರೆ. 2006 ರಲ್ಲಿ ಯಾದವ್ ಸ್ಥಾಪಿಸಿದ, Gems Tunes ವೀಡಿಯೊ-ಆನ್-ಡಿಮಾಂಡ್ (OTT) ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಹರಿಯಾಣ, ಪಂಜಾಬಿ ಮತ್ತು ಹಿಂದಿಯಲ್ಲಿ ಪ್ರಾದೇಶಿಕ ಹಾಡುಗಳನ್ನು ತಯಾರಿಸಿ ವಿತರಿಸುತ್ತದೆ. ಅವರು Instagram ನಲ್ಲಿ 12 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳೊಂದಿಗಿನ ಪೋಟೋಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.
ಯಾದವ್ ಅವರು ಕೊಲೆ, ಸುಲಿಗೆ, ಖಾಸಗಿ ಹಣಕಾಸುದಾರರು ನೀಡಿದ ಸಾಲಕ್ಕೆ ಬಲವಂತದಿಂದ ವಸೂಲಿ,, ವಂಚನೆ, ಅಕ್ರಮ ಭೂ ಕಬಳಿಕೆ ಮತ್ತು ಹಿಂಸಾತ್ಮಕ ಅಪರಾಧಗಳಂತಹ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಯಾದವ್ ಅವರು "ಪ್ರಬಲ ವ್ಯಕ್ತಿಯಾಗಿದ್ದು, ಹೆಚ್ಚಿನ ಮೌಲ್ಯದ ಖಾಸಗಿ ಸಾಲದ ವಹಿವಾಟುಗಳು ಮತ್ತು ನೂರಾರು ಕೋಟಿಗಳಷ್ಟು ಆರ್ಥಿಕ ವಿವಾದಗಳನ್ನು ಬಗೆಹರಿಸುವಲ್ಲಿ ಹೆಸರುವಾಸಿಯಾಗಿದ್ದರು. ಈ ಚಟುವಟಿಕೆಗಳ ಮೂಲಕ ಕೋಟ್ಯಾಂತರ ರೂಪಾಯಿ ಗಳಿಸಿದ್ದು, ಆಸ್ತಿ ಖರೀದಿ, ಲಕ್ಸುರಿ ಕಾರುಗಳ ಖರೀದಿಯಲ್ಲಿ ಬಳಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಆದರೆ ಆದಾಯ ತೆರಿಗೆ ರಿಟನ್ಸ್ ನಲ್ಲಿ ಕಡಿಮೆ ಆದಾಯ ತೋರಿಸಿದ್ದರು ಎಂದು ಇಡಿ ಹೇಳಿದೆ.
ಡಿಸೆಂಬರ್ 2024 ರಲ್ಲಿ, ರೋಹ್ಟಕ್ನಲ್ಲಿ ಫೈನಾನ್ಶಿಯರ್ ಮಂಜೀತ್ ದಿಘಲ್ ಅವರ ಕೊಲೆ ನಡೆದಿತ್ತು. ಹಿಮಾಂಶು ಭಾವು ಎಂಬ ಗ್ಯಾಂಗ್ ಕೊಲೆ ಮಾಡಿರುವುದಾಗಿ ಹೇಳಿಕೊಂಡಿತ್ತು. ಆಗ ರಾವ್ ಇಂದರ್ ಜೀತ್ ಯಾದವ್ ಹೆಸರು ಕೇಳಿಬಂದಿತ್ತು. ಈ ವರ್ಷದ ಜುಲೈನಲ್ಲಿ ಗಾಯಕ ರಾಹುಲ್ ಫಜಿಲ್ ಪುರಿಯಾ ಅವರ ಮನೆ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿತ್ತು. ಒಂದು ತಿಂಗಳ ನಂತರ, ಫಾಜಿಲ್ಪುರಿಯ ಸಹಾಯಕ ರೋಹಿತ್ ಶೌಕೀನ್ನನ್ನು ಗುರುಗ್ರಾಮ್ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಯಾದವ್ ಮತ್ತು ಆತನ ಸಹಚರರು ಹತ್ಯೆಯ ಹೊಣೆ ಹೊತ್ತುಕೊಂಡಿದ್ದರು.
ಆಗಸ್ಟ್ 18 ರಂದು, ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ನಿವಾಸದ ಮೇಲೆ ಕೆಲವರು ಗುಂಡಿನ ದಾಳಿ ನಡೆಸಿದ್ದರು. ಶೂಟಿಂಗ್ನ ಹೊಣೆಯನ್ನು ಹಿಮಾಂಶು ಭಾವು ಗ್ಯಾಂಗ್ ಹೊತ್ತುಕೊಂಡಿತ್ತು. ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಯಾದವ್ ಹೆಸರು ಕೂಡ ಕಾಣಿಸಿಕೊಂಡಿದೆ. ಹರಿಯಾಣದ ಸಹಾಯಕ ಸಬ್ ಇನ್ಸ್ಪೆಕ್ಟರ್ ಸಂದೀಪ್ ಕುಮಾರ್ ಲಾಥರ್ ಕೂಡಾ ಅಕ್ಟೋಬರ್ನಲ್ಲಿ ತಮ್ಮ ಆತ್ಮಹತ್ಯೆ ಪತ್ರದಲ್ಲಿ ರಾವ್ ಇಂದರ್ಜೀತ್ ಯಾದವ್ ಅವರ ಹೆಸರನ್ನು ಹೆಸರಿಸಿದ್ದಾರೆ.