ಇಂಫಾಲ್: ಮಣಿಪುರದ ಬಿಜೆಪಿ ಸರ್ಕಾರದ ಬಗ್ಗೆ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಪ್ರತಿಪಕ್ಷಗಳು ಚರ್ಚೆಯಲ್ಲಿ ತೊಡಗಿರುವಂತೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ಎನ್. ಬಿರೇನ್ ಸಿಂಗ್ ಭಾನುವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಈಶಾನ್ಯ ರಾಜ್ಯ ಮೇ 2023 ರಿಂದ ಜನಾಂಗೀಯ ಹಿಂಸಾಚಾರದಿಂದ ನರಳುತ್ತಿದೆ. ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಬಿರೇನ್ ಸಿಂಗ್ ಭೇಟಿಯಾದ ಸ್ವಲ್ಪ ಸಮಯದ ನಂತರ ಇಂಫಾಲ್ನಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದಕ್ಕೂ ಮೊದಲು ಸಿಂಗ್ ಅವರು ಬಿಜೆಪಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಶಾಸಕರೊಂದಿಗೆ ಸಿಎಂ ಸೆಕ್ರೆಟರಿಯೇಟ್ನಲ್ಲಿ ಸಭೆ ನಡೆಸಿದರು.
ಸಿಂಗ್ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಕಾಂಗ್ರೆಸ್ ಶುಕ್ರವಾರ ಘೋಷಿಸಿತ್ತು. ಇದರ ಬೆನ್ನಲ್ಲೇ ಬಿರೇನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಗಳು ತೀವ್ರ ಕುತುಹೂಲ ಮೂಡಿಸಿವೆ.
ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರದಲ್ಲಿ ಇಷ್ಟು ದಿನ ರಾಜ್ಯದ ಜನರಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಕೇಂದ್ರ ಸರ್ಕಾರದ ಬೆಂಬಲವನ್ನು ಒಪ್ಪಿಕೊಂಡಿದ್ದಾರೆ.ಸಿಂಗ್ ಅವರ ರಾಜೀನಾಮೆ ಪತ್ರವು ಮಣಿಪುರದ ಸಮಗ್ರತೆ ಮತ್ತು ಭದ್ರತೆಗೆ ಅವರ ಬದ್ಧತೆಯನ್ನು ಒತ್ತಿಹೇಳಿದೆ.
ಪ್ರಾದೇಶಿಕ ಸಮಗ್ರತೆ, ಗಡಿ ಭದ್ರತೆ, ಅಕ್ರಮ ವಲಸೆ ಮತ್ತು ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಹೋರಾಟ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಪ್ರಯತ್ನಗಳನ್ನು ಮುಂದುವರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಐದು ಪ್ರಮುಖ ಕಳವಳಗಳನ್ನು ವ್ಯಕ್ತಪಡಿಸಿರುವ ಎನ್. ಬಿರೇನ್ ಸಿಂಗ್, ತಮ್ಮ ನಿರ್ಗಮನದ ನಂತರವೂ ಅವುಗಳನ್ನು ಅನುಸರಿಸಲಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
* ಸಾವಿರಾರು ವರ್ಷಗಳಿಂದ ಆಳವಾಗಿ ಬೇರೂರಿರುವ ಮತ್ತು ವೈವಿಧ್ಯಮಯ ನಾಗರಿಕತೆಯನ್ನು ಹೊಂದಿರುವ ಮಣಿಪುರದ ಪ್ರಾದೇಶಿಕ ಸಮಗ್ರತೆಯನ್ನು ಖಾತ್ರಿಪಡಿಸುವುದು.
* ಒಳನುಸುಳುವಿಕೆಯನ್ನು ಹತ್ತಿಕ್ಕುವ ಮೂಲಕ ಗಡಿ ಭದ್ರತೆಯನ್ನು ಬಲಪಡಿಸುವುದು ಮತ್ತು ಅಕ್ರಮ ವಲಸಿಗರ ಗಡಿಪಾರಿಗೆ ನೀತಿಗಳನ್ನು ರೂಪಿಸುವುದು.
* ಮಾದಕ ದ್ರವ್ಯ-ಸಂಬಂಧಿತ ಅಪರಾಧಗಳು ಮತ್ತು ನಾರ್ಕೋ-ಭಯೋತ್ಪಾದನೆಯನ್ನು ಎದುರಿಸಲು ಪ್ರಯತ್ನಗಳನ್ನು ತೀವ್ರಗೊಳಿಸುವುದು.
* ಅನಧಿಕೃತ ಗಡಿ ದಾಟುವಿಕೆ ತಡೆಗೆ ಬಯೋಮೆಟ್ರಿಕ್ ಪರಿಶೀಲನೆಯೊಂದಿಗೆ ಕಟ್ಟುನಿಟ್ಟಾದ ಮತ್ತು ಪರಿಷ್ಕೃತ ಕಾರ್ಯವಿಧಾನವನ್ನು ಅಳವಡಿಸುವುದು.
* ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಸುರಕ್ಷಿತ ಗಡಿ ಮೂಲಸೌಕರ್ಯ ನಿರ್ಮಾಣವನ್ನು ತ್ವರಿತಗೊಳಿಸುವುದು