ಅರವಿಂದ್ ಕೇಜ್ರಿವಾಲ್-ಭಗವಾನ್ ಮಾನ್ TNIE
ದೇಶ

AAP: 30 ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ; ಪಂಜಾಬ್ ಸಿಎಂ ಹುದ್ದೆ ಮೇಲೆ ಕಣ್ಣು? ದಿಢೀರ್ ಸಭೆ ಕರೆದ ಕೇಜ್ರಿವಾಲ್!

ಪಂಜಾಬ್‌ನಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ತನ್ನ ಶಾಸಕರನ್ನು ಒಗ್ಗಟ್ಟಿನಿಂದ ಇಡುವುದು ಎಎಪಿಗೆ ದೊಡ್ಡ ಸವಾಲಾಗಿರಬಹುದು ಎಂದು ಹೇಳಲಾಗುತ್ತಿದೆ.

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (AAP) ಬಿಜೆಪಿ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಚುನಾವಣಾ ಫಲಿತಾಂಶದ ಒಂದು ದಿನದ ನಂತರ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಫೆಬ್ರವರಿ 11ರಂದು ದೆಹಲಿಯಲ್ಲಿ ಪಂಜಾಬ್‌ನ ತಮ್ಮ ಎಲ್ಲಾ ಶಾಸಕರು ಮತ್ತು ಸಚಿವರ ಸಭೆ ಕರೆದಿದ್ದಾರೆ. ಈ ಸಭೆ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ (ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಪಂಜಾಬ್ ಮುಖ್ಯಮಂತ್ರಿಯ ಅಧಿಕೃತ ನಿವಾಸ) ನಡೆಯಲಿದೆ. ಈ ಬಗ್ಗೆ ಎಲ್ಲಾ ಶಾಸಕರಿಗೆ ತಿಳಿಸಲಾಗಿದ್ದು, ಫೆಬ್ರವರಿ 11ರಂದು ಅವರ ಎಲ್ಲಾ ಉದ್ದೇಶಿತ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಕೇಳಲಾಗಿದೆ.

ಪಂಜಾಬ್ ವಿಧಾನಸಭೆಯ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರು, ಸುಮಾರು 30 ಎಎಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಈ ಸಭೆ ಕರೆದಿದ್ದಾರೆ. ಬಾಜ್ವಾ ಅವರಲ್ಲದೆ, ರಾಜ್ಯದ ಇತರ ಕೆಲವು ಕಾಂಗ್ರೆಸ್ ನಾಯಕರು ಕೂಡ ಎಎಪಿ ಶಾಸಕರು ತಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷವು ಈ ಹಿಂದೆಯೂ ಬಿಜೆಪಿ 'ಆಪರೇಷನ್ ಕಮಲ'ದ ಮೂಲಕ ಪಂಜಾಬ್‌ನಲ್ಲಿ ತನ್ನ ಶಾಸಕರನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಎಎಪಿ ಶಾಸಕರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿಕೊಂಡಿದೆ.

ಮುಖ್ಯಮಂತ್ರಿ ಭಗವಂತ್ ಮಾನ್ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದರು. ನಿನ್ನೆಯಷ್ಟೇ ಪಂಜಾಬ್ ಗೆ ಮರಳಿದ್ದರು. ಇನ್ನು ಸೋಮವಾರ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಫೆಬ್ರವರಿ 13ಕ್ಕೆ ಮುಂದೂಡಲಾಯಿತು. ಕಳೆದ ನಾಲ್ಕು ತಿಂಗಳಲ್ಲಿ ಪಂಜಾಬ್‌ನಲ್ಲಿ ನಡೆಯುತ್ತಿರುವ ಮೊದಲ ಸಚಿವ ಸಂಪುಟ ಸಭೆ ಇದಾಗಿದೆ. ಫೆಬ್ರವರಿ 6ರಂದು ಸಭೆ ನಿಗದಿಯಾಗಿತ್ತು. ಆದರೆ ನಂತರ ಫೆಬ್ರವರಿ 10ಕ್ಕೆ ಮುಂದೂಡಲಾಯಿತು. ದೆಹಲಿ ಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ (ಆಮ್ ಆದ್ಮಿ ಪಕ್ಷವು 70 ಸ್ಥಾನಗಳಲ್ಲಿ ಕೇವಲ 22 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು), ಎಎಪಿಯ ಉನ್ನತ ನಾಯಕತ್ವದ ಗಮನ ಪಂಜಾಬ್‌ನತ್ತ ಹರಿದಿದೆ. ಅದು ಈಗ ಪಕ್ಷವು ಸರ್ಕಾರ ಹೊಂದಿರುವ ಏಕೈಕ ರಾಜ್ಯವಾಗಿದೆ.

ಈ ಸಭೆಯ ಕಾರ್ಯಸೂಚಿಯನ್ನು ರಹಸ್ಯವಾಗಿಡಲಾಗಿದ್ದರೂ, ದೆಹಲಿಯಲ್ಲಿನ ಸೋಲಿನಿಂದ ಪಕ್ಷದ ಶಾಸಕರು ನಿರಾಶೆಗೊಳ್ಳದಂತೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪ್ರೇರೇಪಿಸುತ್ತಾರೆ ಎಂದು ನಂಬಲಾಗಿದೆ. 'ಅಧಿಕಾರ'ದ ದುರಹಂಕಾರವು ಅವರನ್ನು ಆವರಿಸಲು ಬಿಡಬಾರದು ಮತ್ತು ಆಯಾ ಕ್ಷೇತ್ರಗಳಲ್ಲಿನ ಮತದಾರರೊಂದಿಗೆ 'ಆಮ್ ಆದ್ಮಿ' ಆಗಿ ಮತ್ತೆ ಸಂಪರ್ಕ ಸಾಧಿಸಬೇಕು ಎಂಬ ಸಂದೇಶವನ್ನು ಕೇಜ್ರಿವಾಲ್ ಪಂಜಾಬ್ ಶಾಸಕರಿಗೆ ಕಳುಹಿಸಲು ಬಯಸುತ್ತಾರೆ. ಪಂಜಾಬ್‌ನಲ್ಲಿ ಮುಂದಿನ ವಿಧಾನಸಭಾ ಚುನಾವಣೆ 2027ರಲ್ಲಿ ನಡೆಯಲಿದೆ. 2022ರ ಚುನಾವಣೆಯಲ್ಲಿ, 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಆಮ್ ಆದ್ಮಿ ಪಕ್ಷವು ಪ್ರಚಂಡ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರವನ್ನು ಗೆದ್ದಿತು.

ಪಂಜಾಬ್‌ನಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ತನ್ನ ಶಾಸಕರನ್ನು ಒಗ್ಗಟ್ಟಿನಿಂದ ಇಡುವುದು ಎಎಪಿಗೆ ದೊಡ್ಡ ಸವಾಲಾಗಿರಬಹುದು ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ದೆಹಲಿಯ ರಾಜೌರಿ ಗಾರ್ಡನ್‌ನಿಂದ ಚುನಾವಣೆಯಲ್ಲಿ ಗೆದ್ದ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, 'ದೆಹಲಿ ಚುನಾವಣೆಯಲ್ಲಿ ಸೋತ ನಂತರ, ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಪಂಜಾಬ್ ಶಾಸಕರ ಸಭೆ ಕರೆದಿದ್ದಾರೆ. ಭಗವಂತ್ ಮಾನ್ ಅವರನ್ನು ಅನರ್ಹ ಎಂದು ಕರೆದು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿ, ಕೇಜ್ರಿವಾಲ್ ಅವರೇ ಸಿಎಂ ಆಗಬಹುದೇನೋ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT