ನವದೆಹಲಿ: AAP ಪಂಜಾಬ್ ಘಟಕದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಕಾಂಗ್ರೆಸ್ ಹೇಳಿಕೆಯನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ ತಳ್ಳಿಹಾಕಿದ್ದು, ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬದ್ಧತೆಯಿಂದ ಇರುವುದಾಗಿ ಹೇಳಿದ್ದಾರೆ.
ಪಂಜಾಬ್ ಘಟಕದಲ್ಲಿ ಭಿನ್ನಾಭಿಪ್ರಾಯ ವದಂತಿ ನಡುವೆ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ದೆಹಲಿಯ ಕಪುರ್ತಲಾ ಹೌಸ್ನಲ್ಲಿ ಸಿಎಂ ಮಾನ್, ಪಂಜಾಬ್ ಸಚಿವರು ಮತ್ತು ಶಾಸಕರೊಂದಿಗಿನ ಸಭೆ ನಂತರ ಈ ಹೇಳಿಕೆ ನೀಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದ ಎಲ್ಲಾ ಪಂಜಾಬ್ ಸಚಿವರು ಮತ್ತು ಶಾಸಕರಿಗೆ ಕೇಜ್ರಿವಾಲ್ ಅವರು ಸಭೆಯಲ್ಲಿ ಧನ್ಯವಾದ ಹೇಳಿದರು ಎಂದು ಭಗವಂತ್ ಮಾನ್ ತಿಳಿಸಿದರು.
ರಾಜ್ಯದ ಆಡಳಿತ ಪಕ್ಷದ 30 ಕ್ಕೂ ಹೆಚ್ಚು ಎಎಪಿ ಶಾಸಕರು ತಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದು, ಪಕ್ಷ ಬದಲಾಯಿಸಬಹುದು ಎಂದು ಪಂಜಾಬ್ ಕಾಂಗ್ರೆಸ್ ನಾಯಕ ಪರತಾಪ್ ಸಿಂಗ್ ಬಾಜ್ವಾ ಇತ್ತೀಚೆಗೆ ಹೇಳಿದ್ದರು.
ಎಎಪಿಯಲ್ಲಿಯೇ ಉಳಿಯುವುದರಿಂದ ದೀರ್ಘಾವಧಿಯಲ್ಲಿ ರಾಜಕೀಯವಾಗಿ ಪ್ರಯೋಜನಕಾರಿಯಾಗುವುದಿಲ್ಲ ಎಂಬುದನ್ನು ಈ ಶಾಸಕರು ಅರಿತುಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಬಾಜ್ವಾ ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಮಾನ್," ಬಾಜ್ವಾ ಅವರು ನಮ್ಮ ಶಾಸಕರ ಲೆಕ್ಕ ಹಾಕಬಾರದು, ದೆಹಲಿಯಲ್ಲಿ ಕಾಂಗ್ರೆಸ್ ಎಷ್ಟು ಶಾಸಕರನ್ನು ಹೊಂದಿದೆ ಎಂಬುದನ್ನು ನೋಡಬೇಕು. ಎಎಪಿ ನಾಯಕರು "ದುರಾಸೆಯಿಲ್ಲದ ಸಮರ್ಪಿತ ಜನರು" ಎಂದು ಮನ್ ಪ್ರತಿಪಾದಿಸಿದರು.
20 ಶಾಸಕರು ಅಥವಾ 40 ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಬಾಜ್ವಾ ಈ ಹಿಂದೆಯೂ ಹೇಳಿದ್ದರು. ಅವರು ಅದನ್ನು ಹೇಳಲಿ. ನಾವು ನಮ್ಮ ಬೆವರು ಮತ್ತು ರಕ್ತವನ್ನು ರಾಜ್ಯದ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಜನರ ನಡುವೆ ಹರಿದು ಈ ಪಕ್ಷವನ್ನು ಸಂಘಟಿಸಿದ್ದೇವೆ. ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಪಂಜಾಬ್ ಅನ್ನು ದೇಶದ ಮುಂದೆ ಅಭಿವೃದ್ಧಿಯ ಮಾದರಿ ರಾಜ್ಯವಾಗಿ ಪ್ರಸ್ತುತಪಡಿಸಲಾಗುವುದು ಎಂದು ಮಾನ್ ಹೇಳಿದರು.