ಪಾಟ್ನಾ: ಕುಡುಕ ಗಂಡನಿಗೆ ಕೈಕೊಟ್ಟು ಸಾಲ ವಸೂಲಾತಿಗೆ ಆಗಮಿಸುತ್ತಿದ್ದ ಬ್ಯಾಂಕ್ ಸಿಬ್ಬಂದಿಯನ್ನೇ ಮಹಿಳೆಯೊಬ್ಬರು ಮದುವೆಯಾಗಿರುವ ಘಟನೆ ಬಿಹಾರದಲ್ಲಿ ವರದಿಯಾಗಿದೆ.
ಹೌದು.. ಈ ಹಿಂದೆ ಮಗಳ ಓದಿನ ನೆಪವೊಡ್ಡಿ ಗಂಡನ ಕಿಡ್ನಿ ಮಾರಿ ಆ ದುಡ್ಡನ್ನು ಕದ್ದು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಮಹಿಳೆಯ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಮತ್ತೋರ್ವ ಮಹಿಳೆ ತನ್ನ ಕುಡುಕ ಗಂಡನಿಗೆ ಕೈಕೊಟ್ಟು ಸಾಲ ವಸೂಲಾತಿಗೆ ಬರುತ್ತಿದ್ದ ರಿಕವರಿ ಏಜೆಂಟ್ ನನ್ನು ಮದುವೆಯಾಗಿರುವ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.
ಬಿಹಾರದ ಇಂದ್ರ ಕುಮಾರಿ ಎಂಬ ಮಹಿಳೆ ಪವನ್ ಕುಮಾರ್ ಯಾದವ್ ಎಂಬ ಲೋನ್ ರಿಕವರಿ ಏಜೆಂಟ್ ನನ್ನು ಮದುವೆಯಾಗುವ ಮೂಲಕ ತನ್ನ ಕುಡುಕ ಗಂಡನಿಗೆ ಕೈಕೊಟ್ಟಿದ್ದಾಳೆ. ಇದೀಗ ಗ್ರಾಮದ ಹಿರಿಯರು ಮತ್ತು ಸಮಾಜದ ಮುಖ್ಯಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ಮಹಿಳೆ ಇಂದ್ರ ಕುಮಾರಿ ಸಂಬಂಧಿಕರಿಂದ ಪ್ರತೀಕಾರ ಮತ್ತು ಸಾಮಾಜಿಕ ವಿರೋಧದ ಭಯದಲ್ಲಿದ್ದಾರೆ.
ಏನಿದು ಘಟನೆ?
ಇಂದ್ರ ಕುಮಾರಿ 2022 ರಲ್ಲಿ ಜಮುಯಿ ಜಿಲ್ಲೆಯ ನಿವಾಸಿ ನಕುಲ್ ಶರ್ಮಾ ಅವರನ್ನು ವಿವಾಹವಾಗಿದ್ದರು. ಮದುವೆಗೂ ಮುಂಚೆ ಮದ್ಯವ್ಯಸನಿಯಾಗಿದ್ದ ನಕುಲ್ ಶರ್ಮಾ ಮದುವೆ ಬಳಿಕವೂ ಅದನ್ನು ಮುಂದುವರೆಸಿದ್ದ. ಅಲ್ಲದೆ ನಿತ್ಯ ಕುಡಿದು ಬಂದು ಪತ್ನಿ ಇಂದ್ರಕುಮಾರಿಯನ್ನು ನಿಂದಿಸಿ ಹಲ್ಲೆ ಮಾಡುತ್ತಿದ್ದ. ಆತನ ದೈಹಿಕ ಮತ್ತು ಭಾವನಾತ್ಮಕ ಕಿರುಕುಳವನ್ನು ಸಹಿಸಲಾಗದೆ ಪರಿತಪಿಸುತ್ತಿದ್ದಳು. ಇದೇ ವೇಳೆ ಆಕೆಯ ಗ್ರಾಮಕ್ಕೆ ಸಾಲ ಮರುಪಾವತಿಗಾಗಿ ಪವನ್ ಕುಮಾರ್ ಯಾದವ್ರು ಬರುತ್ತಿದ್ದ. ಇಂದ್ರ ಕುಮಾರಿ ಮನೆಗೂ ಆಗಮಿಸಿದ್ದ ಪವನ್ ಕುಮಾರ್ ಆಕೆಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದಾನೆ. ಕ್ರಮೇಣ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿದೆ.
ಬಳಿಕ ಇಬ್ಬರೂ ದೈಹಿಕ ಸಂಪರ್ಕಕೂಡ ಬೆಳೆಸಿಕೊಂಡಿದ್ದು, ಐದು ತಿಂಗಳ ಕಾಲ, ಇಂದ್ರ ಕುಮಾರಿ ಮತ್ತು ಪವನ್ ರಹಸ್ಯವಾಗಿ ತಮ್ಮ ಸಂಬಂಧವನ್ನು ಮುಂದುವರೆಸಿದ್ದರು. ಫೆಬ್ರವರಿ 4 ರಂದು, ಅವರು ವಿಮಾನದಲ್ಲಿ ಹೋಗಿ ಇಂದ್ರ ಕುಮಾರಿಯ ಚಿಕ್ಕಮ್ಮ ವಾಸಿಸುವ ಪಶ್ಚಿಮ ಬಂಗಾಳದ ಅಸನ್ಸೋಲ್ ತಲುಪಿದ್ದರು. ಅವರು ಜಮುಯಿಗೆ ಹಿಂತಿರುಗುವ ಮೊದಲು ಕೆಲವು ದಿನಗಳ ಕಾಲ ಅಲ್ಲಿಯೇ ತಂಗಿದ್ದರು. ಬಳಿಕ ಫೆಬ್ರವರಿ 11 ರಂದು, ಅವರು ದೇವಸ್ಥಾನದಲ್ಲಿ ವಿವಾಹವಾದರು. ಸಾಂಪ್ರದಾಯಿಕ ಹಿಂದೂ ಆಚರಣೆಗಳೊಂದಿಗೆ ನಡೆದ ಅವರ ವಿವಾಹದಲ್ಲಿ ಹಲವಾರು ಜನರು ಭಾಗವಹಿಸಿದ್ದರು.
ಕೆಲ ದಿನಗಳಲ್ಲೇ ಇವರಿಬ್ಬರ ವಿವಾಹದ ವೀಡಿಯೊ ಆನ್ಲೈನ್ನಲ್ಲಿ ಕಾಣಿಸಿಕೊಂಡು ವ್ಯಾಪಕ ವೈರಲ್ ಆಯಿತು. ಪವನ್ ಕುಟುಂಬವು ಮದುವೆಯನ್ನು ಒಪ್ಪಿಕೊಂಡಿದ್ದರೂ, ಇಂದ್ರಾ ಕುಮಾರಿ ಅವರ ಕುಟುಂಬವು ಇದಕ್ಕೆ ವಿರೋಧ ವ್ಯಕ್ತಪಡಿಸಿ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಇಬ್ಬರನ್ನು ಕರೆಸಿಕೊಂಡ ಪೊಲೀಸರು ಪರಸ್ಪರರ ಹೇಳಿಕೆ ದಾಖಲಿಸಿಕೊಂಡಿದ್ದು, ಈ ವೇಳೆ ಇಂದ್ರಾ ಕುಮಾರಿ ತಮ್ಮ ಸ್ವಂತ ಇಚ್ಛೆಯಿಂದ ಪವನ್ ಅವರನ್ನು ವಿವಾಹವಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಓರ್ವ ಪತಿ ಇರುವಾಗ ಮತ್ತೋರ್ವನನ್ನು ಮದುವೆಯಾಗಬಾರದು ಎಂದು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದೀಗ ಪವನ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಮತ್ತು ಇಂದ್ರ ಕುಮಾರಿ ಕುಟುಂಬದಿಂದ ಬೆದರಿಕೆ ಬಂದಿರುವುದರಿಂದ, ನವವಿವಾಹಿತರು ಅಧಿಕಾರಿಗಳಿಂದ ರಕ್ಷಣೆ ಕೋರಿದ್ದಾರೆ.