ಕೋಲ್ಕತಾ: ಮಾಜಿ ಪ್ರಧಾನಿ ದಿವಂಗತ ಮನಮೋಹನ ಸಿಂಗ್ ಓರ್ವ ಮಹಾನ್ ವ್ಯಕ್ತಿ.. ಹಾಗೂ ಒಳ್ಳೆಯ ನಾಯಕ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಬಣ್ಣಿಸಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮರ್ತ್ಯ ಸೇನ್ ಅವರು, ‘ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಉತ್ತಮ ರಾಜಕೀಯ ನಾಯಕ ಮತ್ತು ಜಗತಿನ ಅಗತ್ಯತೆಯನ್ನು ಅರ್ಥಮಾಡಿಕೊಂಡ ಅದ್ಭುತ ಅರ್ಥಶಾಸ್ತ್ರಜ್ಞರಾಗಿದ್ದರು. ಅವರು ನನ್ನ ಸ್ನೇಹಿತ ಎಂಬ ಕಾರಣಕ್ಕೆ ನಾನು ಈ ಮಾತುಗಳನ್ನು ಹೇಳುತ್ತಿಲ್ಲ... ನಿಜಕ್ಕೂ ಅವರೂ ಓರ್ವ ಮಹಾನ್ ವ್ಯಕ್ತಿ.. ಒಳ್ಳೆಯ ನಾಯಕರಾಗಿದ್ದರು ಎಂದು ಹೇಳಿದ್ದಾರೆ.
ಅಂತೆಯೇ, 'ಮನಮೋಹನ ಸಿಂಗ್ ಮತ್ತು ನಾನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ವ್ಯಾಸಂಗ ಮಾಡುವುದರ ಜತೆಗೆ ಉತ್ತಮ ಸ್ನೇಹಿತರಾಗಿದ್ದೆವು. ‘ವಜ್ರಚ್ಛೇದಿಕ ಪ್ರಜ್ಞಾಪರಮಿತಾ’ (ಬುದ್ಧಿವಂತಿಕೆಯ ಪರಿಪೂರ್ಣತೆ) ಸೂತ್ರದಲ್ಲಿ ಗೌತಮ ಬುದ್ಧ ವಿವರಿಸಿದ ಸಂದೇಶದ ಸಾರವನ್ನು ಮನಮೋಹನ ಸಿಂಗ್ ಅಳವಡಿಸಿಕೊಂಡಿದ್ದರು.
ಗೌತಮ ಬುದ್ಧನ ‘ವಜ್ರಚ್ಛೇದಿಕ ಪ್ರಜ್ಞಾಪರಮಿತಾ’ ಸೂತ್ರ ಅಥವಾ ‘ವಜ್ರ ಸೂತ್ರ’ದಲ್ಲಿರುವ ಮನುಷ್ಯರ ವಿಭಿನ್ನ ನಂಬಿಕೆಗಳ ಅಸ್ತಿತ್ವವನ್ನು ಗುರುತಿಸುವುದು ಮುಖ್ಯ ಎಂಬ ಸಂದೇಶವನ್ನು ಸಿಂಗ್ ಅರ್ಥಮಾಡಿಕೊಂಡಿದ್ದರು. ಹಾಗಾಗಿ ಭಾರತದ ನೆಲದಲ್ಲಿ ಪಾಕಿಸ್ತಾನದ ಭಯೋತ್ಪಾದನೆಯ ಪುರಾವೆಗಳು ಕಂಡುಬಂದಾಗ ಪ್ರಜ್ಞಾಪೂರ್ವಕವಾಗಿ ಹೀಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಅವರು ಅರಿತಿದ್ದರು ಎಂದು ಸೇನ್ ಹೇಳಿದ್ದಾರೆ.
ಮನಮೋಹನ ಸಿಂಗ್ ಅವರಿಗೆ ‘ವಜ್ರ ಸೂತ್ರ’ದಲ್ಲಿ ವಿವರಿಸಲಾದ ಗೌತಮ ಬುದ್ಧನ ಸಂದೇಶ ಚೆನ್ನಾಗಿ ತಿಳಿದಿತ್ತು ಎಂದು ನಾನು ಭಾವಿಸುತ್ತೇನೆ. ನಾವು ಒಟ್ಟಿಗೆ ವಿದ್ಯಾರ್ಥಿಗಳಾಗಿದ್ದಾಗ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಸಹೋದ್ಯೋಗಿಗಳಾಗಿದ್ದಾಗ ನಾನು ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದೇನೆ.
ಮನಮೋಹನ ಅವರು ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದರೂ ಸಹ ಗೌತಮ ಬುದ್ಧನ ಸಂದೇಶವನ್ನು ಇತರ ಧರ್ಮಗಳು ಮತ್ತು ಸಮುದಾಯಗಳ ಜನರಿಗೆ ತಿಳಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದರು. ನಾನು, ಮನಮೋಹನ ಸಿಂಗ್ ಅವರನ್ನು ತುಂಬಾ ಇಷ್ಟಪಟ್ಟಿದ್ದೇನೆ ಎಂದು ಅಮರ್ತ್ಯ ಸೇನ್ ಹೇಳಿದ್ದಾರೆ.
ಅಂದಹಾಗೆ ಅಮರ್ತ್ಯ ಸೇನ್ ಮತ್ತು ಮನಮೋಹನ್ ಸಿಂಗ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಾಗಿದ್ದರು. ಇಬ್ಬರೂ ಏಳು ದಶಕಗಳ ಕಾಲ ಸ್ನೇಹಿತರಾಗಿದ್ದರು. ಅಲ್ಲದೆ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಸೇನ್ ಅವರು ಮಾಜಿ ಪ್ರಧಾನಿ ಸಿಂಗ್ ಅವರ ಸಹೋದ್ಯೋಗಿಯೂ ಆಗಿದ್ದರು.