ನವದೆಹಲಿ: ಕೇಂದ್ರ ಚುನಾವಣಾ ಆಯೋಗದ 26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡ ಜ್ಞಾನೇಶ್ ಕುಮಾರ್ ಇಂದು ಬುಧವಾರ ದೆಹಲಿಯಲ್ಲಿ ಅಧಿಕಾರ ವಹಿಸಿಕೊಂಡರು.
ಮೊನ್ನೆ ಸೋಮವಾರ ಉನ್ನತ ಚುನಾವಣಾ ಆಯೋಗದ ನೇತೃತ್ವ ವಹಿಸಲು ಅವರ ಹೆಸರನ್ನು ಘೋಷಿಸಿದ ನಂತರ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಜ್ಞಾನೇಸ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದರು.
ಹಿಂದಿನ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಅಧಿಕಾರಾವಧಿ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಿಇಸಿ ನೇಮಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ರಾಹುಲ್ ಗಾಂಧಿ ಅವರ ನೇಮಕಾತಿಯ ವಿರುದ್ಧ ಮತ ಚಲಾಯಿಸಿದರು, ಸಭೆಯನ್ನು ಅರ್ಥಹೀನ ಎಂದು ಕರೆದರು.
ಜ್ಞಾನೇಶ್ ಕುಮಾರ್ ಇಂದು ಬೆಳಗ್ಗೆ ಚುನಾವಣಾ ಆಯೋಗದ ಕಚೇರಿಗೆ ಆಗಮಿಸಿದಾಗ, ಅಲ್ಲಿ ಅವರನ್ನು ಚುನಾವಣಾ ಆಯುಕ್ತ ಡಾ. ಸುಖ್ಬೀರ್ ಸಿಂಗ್ ಸಂಧು ಸ್ವಾಗತಿಸಿದರು.
ನೂತನ ಸಿಇಸಿ ಮಾತು
ಜನವರಿ 26, 2029 ರವರೆಗೆ ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ಆದ್ಯತೆಗಳನ್ನು ಪಟ್ಟಿ ಮಾಡಿದ ಜ್ಞಾನೇಶ್ ಕುಮಾರ್, ಭಾರತದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ವ್ಯಕ್ತಿಯು ಮತದಾರರಾಗಬೇಕು ಎಂದು ಹೇಳಿದರು. ಚುನಾವಣಾ ಆಯೋಗವು ಯಾವಾಗಲೂ ಮತದಾರರ ಪರವಾಗಿ ಕೆಲಸ ಮಾಡುತ್ತದೆ ಎಂದರು.
ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆ ಮತದಾನ. ಆದ್ದರಿಂದ, 18 ವರ್ಷಗಳನ್ನು ಪೂರ್ಣಗೊಳಿಸಿದ ಭಾರತದ ಪ್ರತಿಯೊಬ್ಬ ನಾಗರಿಕನು ಮತದಾರರಾಗಬೇಕು ಮತ್ತು ಯಾವಾಗಲೂ ಮತ ಚಲಾಯಿಸಬೇಕು. ಭಾರತದ ಸಂವಿಧಾನ, ಚುನಾವಣಾ ಕಾನೂನುಗಳು, ನಿಯಮಗಳು ಮತ್ತು ಅದರಲ್ಲಿ ನೀಡಲಾದ ಸೂಚನೆಗಳ ಪ್ರಕಾರ, ಭಾರತದ ಚುನಾವಣಾ ಆಯೋಗವು ಮತದಾರರೊಂದಿಗೆ ಹಿಂದೆಯೂ ಇತ್ತು, ಇಂದು ಇರುತ್ತದೆ ಮತ್ತು ಮುಂದೆಯೂ ಯಾವಾಗಲೂ ಇರುತ್ತದೆ ಎಂದರು.
ಜ್ಞಾನೇಶ್ ಕುಮಾರ್ ಯಾರು?
ಜ್ಞಾನೇಶ್ ಕುಮಾರ್ ಅವರು ಈ ಹಿಂದೆ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಅಮಿತ್ ಶಾ ಅವರೊಂದಿಗೆ ಗೃಹ ಸಚಿವಾಲಯದಲ್ಲಿ ಕೆಲಸ ಮಾಡಿದ್ದರು.
ಅವರು ಕೇರಳ ಕೇಡರ್ನ 1988 ರ ಬ್ಯಾಚ್ ಅಧಿಕಾರಿಯಾಗಿದ್ದು, ರಕ್ಷಣಾ, ಸಂಸದೀಯ ವ್ಯವಹಾರಗಳು ಮತ್ತು ಸಹಕಾರ ಸೇರಿದಂತೆ ಹಲವಾರು ಸಚಿವಾಲಯಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ನೇಮಕಾತಿ ನಂತರ ಚುನಾವಣಾ ಆಯೋಗದ (EC) ಸದಸ್ಯರ ನೇಮಕಾತಿಯ ಹೊಸ ಕಾನೂನಿನಡಿಯಲ್ಲಿ ನೇಮಕಗೊಂಡ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.