ಥಾಣೆ: ಮಹಾರಾಷ್ಟ್ರದ ಮಹಾಯುತಿಯಲ್ಲಿ ಭಿನ್ನಮತದ ಹೊಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊನ್ನೆಯಷ್ಟೇ ನನ್ನನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಉಪ ಮುಖ್ಯಮಂತ್ರಿ ಹಾಗೂ ಶಿವಸೇನೆ ಅಧ್ಯಕ್ಷ ಏಕನಾಥ್ ಶಿಂಧೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅವರ ಭದ್ರಕೋಟೆಯಾಗಿರುವ ಥಾಣೆಯಲ್ಲಿ ಮಹಾರಾಷ್ಟ್ರ ಅರಣ್ಯ ಸಚಿವ ಮತ್ತು ಬಿಜೆಪಿ ನಾಯಕ ಗಣೇಶ್ ನಾಯಕ್ ಸೋಮವಾರ 'ಜನತಾ ದರ್ಬಾರ್' ನಡೆಸಲು ಸಜ್ಜಾಗಿದ್ದಾರೆ.
ಥಾಣೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜನತಾ ದರ್ಬಾರ್ಗೆ ಬೃಹತ್ ಹೋರ್ಡಿಂಗ್ಗಳನ್ನು ಹಾಕಲಾಗಿದೆ. ಇದು ಈ ಪ್ರದೇಶದಲ್ಲಿ ಶಿವಸೇನೆಯ ಪ್ರಭಾವಕ್ಕ ನೇರ ಸವಾಲು ಎಂದು ಕೆಲವು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಶಿವಸೇನೆ ನಡುವೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ.
ನೆರೆಯ ಪಾಲ್ಘರ್ ಜಿಲ್ಲೆಯ ಉಸ್ತುವಾರಿ ಸಚಿವ ನಾಯಕ್ ಅವರು ಥಾಣೆಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಗಳನ್ನು ನಡೆಸುವುದಾಗಿ ಕಳೆದ ತಿಂಗಳು ಹೇಳಿದ್ದರು. ಇದು ಈ ಪ್ರದೇಶದಲ್ಲಿ ಮಿತ್ರ ಪಕ್ಷ ಶಿಂಧೆ ಪಕ್ಷದ ಪ್ರಾಬಲ್ಯಕ್ಕೆ ಸವಾಲು ಹಾಕಲು ಬಿಜೆಪಿ ತಯಾರಿ ನಡೆಸುತ್ತಿದೆ ಎಂಬ ಊಹಾಪೋಹಕ್ಕೆ ಕಾರಣವಾಗಿತ್ತು.
1990 ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ 'ಜನತಾ ದರ್ಬಾರ್' (ಸಾರ್ವಜನಿಕರ ಕುಂದುಕೊರತೆ ಆಲಿಕೆ) ಪರಿಕಲ್ಪನೆಯನ್ನು ಪ್ರಾರಂಭಿಸಿದ್ದು ಇವರೇ. ಫೆಬ್ರವರಿ 3 ರಂದು ಥಾಣೆ ಜಿಲ್ಲೆಯ ನವಿ ಮುಂಬೈ ಟೌನ್ಶಿಪ್ನ ವಾಶಿಯಲ್ಲಿ ಮತ್ತು ಫೆಬ್ರವರಿ 21 ರಂದು ಪಾಲ್ಘರ್ ಜಿಲ್ಲೆಯಲ್ಲಿ 'ಜನತಾ ದರ್ಬಾರ್' ಅನ್ನು ಉದ್ದೇಶಿಸಿ ನಾಯಕ್ ಮಾತನಾಡಿದ್ದರು.
ಈ ಹಿಂದೆ ಇಂತಹ ಘಟನೆಯ ರಾಜಕೀಯ ಪರಿಣಾಮಗಳ ಬಗ್ಗೆ ಕೇಳಿದಾಗ, ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವುದು ಜನತಾ ದರ್ಬಾರ್'ನ ಏಕೈಕ ಉದ್ದೇಶ ಎಂದು ನಾಯಕ್ ಹೇಳಿದರು. ಗಣೇಶ್ ನಾಯ್ಕ್ ಅವರ ಪುತ್ರ ಹಾಗೂ ಮಾಜಿ ಸಂಸದ ಸಂಜೀವ್ ನಾಯ್ಕ್ ಅವರು ಥಾಣೆ ಬಿಜೆಪಿ ಮುಖಂಡರೊಂದಿಗೆ ಕಾರ್ಯಕ್ರಮದ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಹಲವು ಬಾರಿ ಸಭೆ ನಡೆಸಿದ್ದಾರೆ.