ನವದೆಹಲಿ: ಲಡಾಕ್ ಗಡಿಯಲ್ಲಿ ಚೀನಾ ಮತ್ತೆ ಕಿರಿಕ್ ಆರಂಭಿಸಿದ್ದು, ಭಾರತದ ಭೂ ಭಾಗದ ಹೋಟಾನ್ ಪ್ರಾಂತ್ಯದಲ್ಲಿ ಎರಡು ಹೊಸ ಕೌಂಟಿಗಳನ್ನು ನಿರ್ಮಿಸಿದೆ. ಚೀನಾದ ಈ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ.
ಭಾರತ ಈ ಕುರಿತು ಚೀನಾದೊಂದಿಗೆ "ಬಲವಾದ ಪ್ರತಿಭಟನೆ" ದಾಖಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಶುಕ್ರವಾರ ಹೇಳಿದ್ದಾರೆ.
ಚೀನಾದ ಹೋಟಾನ್ ಪ್ರಿಫೆಕ್ಚರ್ನಲ್ಲಿ ಎರಡು ಕೌಂಟಿಗಳ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕಟಣೆಯನ್ನು ನಾವು ಗಮನಿಸಿದ್ದೇವೆ. ಈ ಕೌಂಟಿಗಳ ಕೆಲವು ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನಲ್ಲಿ ಬರುತ್ತವೆ ಮತ್ತು ಚೀನಾದ ಈ ಅಕ್ರಮ ಆಕ್ರಮಣವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.
ಸುಮಾರು ಐದು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಗಡಿ ಮಾತುಕತೆಯನ್ನು ಎರಡು ರಾಷ್ಟ್ರಗಳ ವಿಶೇಷ ಪ್ರತಿನಿಧಿಗಳು ಪುನರಾರಂಭಿಸಿದ ಕೆಲವು ದಿನಗಳ ನಂತರ ಎರಡು ಕೌಂಟಿಗಳನ್ನು ನಿರ್ಮಿಸುವ ಕುರಿತು ಚೀನಾ ಘೋಷಣೆ ಮಾಡಿದೆ.
"ಹೊಸ ಕೌಂಟಿಗಳ ನಿರ್ಮಾಣವು ಪ್ರದೇಶದ ಮೇಲೆ ನಮ್ಮ ಸಾರ್ವಭೌಮತ್ವದ ಬಗ್ಗೆ ಭಾರತದ ದೀರ್ಘಕಾಲೀನ ಮತ್ತು ಸ್ಥಿರವಾದ ನಿಲುವಿನ ಮೇಲೆ ಪರಿಣಾಮ ಬೀರುವುದಿಲ್ಲ ಅಥವಾ ಚೀನಾದ ಅಕ್ರಮ ಮತ್ತು ಬಲವಂತದ ಆಕ್ರಮಣಕ್ಕೆ ಒಪ್ಪಿಗೆ ನೀಡುವುದಿಲ್ಲ" ಎಂದು ಜೈಸ್ವಾಲ್ ಹೇಳಿದ್ದಾರೆ.
ಇನ್ನು ಟಿಬೆಟ್ನಲ್ಲಿ ಬ್ರಹ್ಮಪುತ್ರ ನದಿಗೆ ಮೆಗಾ ಅಣೆಕಟ್ಟು ನಿರ್ಮಿಸುವ ಚೀನಾದ ಉದ್ದೇಶಿತ ಯೋಜನೆಗೂ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಸ್ತಾವಿತ ಅಣೆಕಟ್ಟಿಗೆ ತನ್ನ ಮೊದಲ ಪ್ರತಿಕ್ರಿಯೆಯಲ್ಲಿ, ಬ್ರಹ್ಮಪುತ್ರದ ಕೆಳಗಿರುವ ರಾಜ್ಯಗಳ ಹಿತಾಸಕ್ತಿಗಳಿಗೆ ಅಪ್ಸ್ಟ್ರೀಮ್ ಪ್ರದೇಶಗಳಲ್ಲಿನ ಚಟುವಟಿಕೆಗಳಿಂದ ಹಾನಿಯಾಗದಂತೆ ನೋಡಿಕೊಳ್ಳಲು ಬೀಜಿಂಗ್ ಅನ್ನು ದೆಹಲಿ ಒತ್ತಾಯಿಸಿದೆ.
"ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಮೇಲ್ವಿಚಾರಣೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತೇವೆ" ಎಂದು ಜೈಸ್ವಾಲ್ ತಿಳಿಸಿದ್ದಾರೆ.