ನವದೆಹಲಿ: ದೆಹಲಿ ವಿಧಾನಸಭೆಗೆ ದಿನಾಂಕ ಘೋಷಣೆಯಾಗಿದ್ದು ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಮತದಾರರ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ (BJP) ತಿರುಚಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಬಿಜೆಪಿಯೊಂದಿಗೆ ನಂಟಿರುವ 13 ಸಾವಿರಕ್ಕೂ ಹೆಚ್ಚು ಜನರು ನಾನು ಪ್ರತಿನಿಧಿಸುವ ನವದೆಹಲಿ ವಿಧಾನಸಭಾ ಕ್ಷೇತ್ರದ ಮತದಾರರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತದಾರರಿದ್ದಾರೆ, ಅಂದರೆ ಶೇ. 5.5ರಷ್ಟು ಮತದಾರರ ಹೆಸರನ್ನು ತೆಗೆದುಹಾಕಲು ಕೇವಲ 22 ದಿನಗಳಲ್ಲಿ ಅರ್ಜಿಗಳು ಬಂದಿವೆ. ಈ ಘಟನೆ ತುಂಬಾ ಅನುಮಾನಾಸ್ಪದವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದು, ಚುನಾವಣಾ ಅಧಿಕಾರಿಗಳ ತನಿಖೆಯಲ್ಲಿ ಈ ಅರ್ಜಿಗಳಲ್ಲಿ ಹೆಚ್ಚಿನವು ನಕಲಿ ಎಂದು ಕಂಡುಬಂದಿದೆ ಎಂದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಇದು ಗಂಭೀರ ಕಳವಳಕಾರಿ ವಿಷಯವಾಗಿದೆ. ಕಾರಣ ಚುನಾವಣಾ ಆಯೋಗವು ಈ ಜನರಲ್ಲಿ ಕೆಲವರನ್ನು ಸಂಪರ್ಕಿಸಿದಾಗ, ಅವರು ತಾವು ಅರ್ಜಿಗಳನ್ನು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ. ಸಂಪರ್ಕಿಸಿದ ಎಲ್ಲಾ 89 ಜನರು ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಹೇಳಿದರು. ಇದು ಸ್ಪಷ್ಟವಾಗಿ ಹಗರಣ ಎಂಬುದನ್ನು ಸೂಚಿಸುತ್ತದೆ. ಮತದಾರರ ನೋಂದಣಿ ಅರ್ಜಿಗಳಲ್ಲಿ ಹಠಾತ್ ಹೆಚ್ಚಳವನ್ನು ಕೇಜ್ರಿವಾಲ್ ಎತ್ತಿ ತೋರಿಸಿದರು.
ಕಳೆದ 15 ದಿನಗಳಲ್ಲಿ 13,000 ಹೊಸ ಮತದಾರರನ್ನು ಸೇರ್ಪಡೆಗೊಳಿಸಲು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು. ಕೊನೆಯ ಕ್ಷಣದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಸೇರಿಸಿದರೆ ಅಥವಾ ಅಳಿಸಿದರೆ, ಅದು ಚುನಾವಣಾ ಪ್ರಕ್ರಿಯೆಯನ್ನು ಅಣಕಿಸುತ್ತದೆ ಎಂದರು.
2013ರಿಂದ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೇಜ್ರಿವಾಲ್, ಈ ಬಾರಿ ದೆಹಲಿಯ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರನ್ನು ಎದುರಿಸಲಿದ್ದಾರೆ. ಬಿಜೆಪಿ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಪ್ರವೇಶ್ ವರ್ಮಾ ಅವರನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಅವರಿಗೆ ಟಿಕೆಟ್ ನೀಡಿದೆ.
ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ.