ಪಂಜಾಬ್ನ ಲುಧಿಯಾನ ಪಶ್ಚಿಮದ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಗುರುಪ್ರೀತ್ ಬಸ್ಸಿ ಗೋಗಿ ಶುಕ್ರವಾರ ರಾತ್ರಿ ನಡೆದ ದುರಂತ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಪರವಾನಗಿ ಪಡೆದ ಪಿಸ್ತೂಲ್ ಸ್ವಚ್ಛಗೊಳಿಸುವಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದ್ದಕ್ಕಿದ್ದಂತೆ ಒಂದು ಗುಂಡು ಹಾರಿದ್ದು ಅದು ಶಾಸಕರ ತಲೆಗೆ ಬಡಿದಿದೆ. ಇದಾದ ನಂತರ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಡಿಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಕುಟುಂಬ ಮತ್ತು ಪೊಲೀಸರ ಪ್ರಕಾರ, ಇದು ಆಕಸ್ಮಿಕ ಘಟನೆ. ಗೋಗಿಯವರ ನಿಧನದಿಂದ ರಾಜಕೀಯ ಜಗತ್ತಿನಲ್ಲಿ ಶೋಕದ ಅಲೆ ಆವರಿಸಿದೆ.
ಮಾಹಿತಿಯ ಪ್ರಕಾರ, ಗುರುಪ್ರೀತ್ ಗೋಗಿ ತನ್ನ ಕೋಣೆಯಲ್ಲಿ ಒಬ್ಬರೇ ಕುಳಿತು ಪಿಸ್ತೂಲ್ ಅನ್ನು ಸ್ವಚ್ಛಗೊಳಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಒಂದು ಗುಂಡು ಹಾರಿದ್ದು ಅದು ಅವರ ತಲೆಗೆ ಬಡಿಯಿದೆ. ಇದಾದ ನಂತರ, ಕುಟುಂಬ ಸದಸ್ಯರು ಅವರನ್ನು ಲುಧಿಯಾನದ ಡಿಎಂಸಿ ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ತಿಳಿಸಿದರು. ಘಟನೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಗುರುಪ್ರೀತ್ ಗೋಗಿ ಅವರು ಮಧ್ಯರಾತ್ರಿ 12 ಸುಮಾರಿಗೆ ಗನ್ ಸ್ವಚ್ಛಗೊಳಿಸುವ ವೇಳೆ ಅವರಿಗೆ ಆಕಸ್ಮಿಕವಾಗಿ ಒಂದು ಗುಂಡು ತಲೆಗೆ ತಗುಲಿ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಲುಧಿಯಾನ ಡಿಸಿಪಿ ಜಸ್ಕರನ್ ಸಿಂಗ್ ತೇಜ ತಿಳಿಸಿದ್ದಾರೆ. ಅವರ ಮೃತದೇಹವನ್ನು ಡಿಎಂಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಗುರುಪ್ರೀತ್ ಗೋಗಿ 2022ರಲ್ಲಿ ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷ ಸೇರಿದರು. ಅವರು ಲುಧಿಯಾನ ಪಶ್ಚಿಮ ಕ್ಷೇತ್ರದಿಂದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಎರಡು ಬಾರಿ ಶಾಸಕರಾಗಿದ್ದ ಭರತ್ ಭೂಷಣ್ ಅಶು ಅವರನ್ನು ಸೋಲಿಸಿದ್ದರು. ಅವರ ನಿಧನವು ಪಕ್ಷ ಮತ್ತು ಅವರ ಬೆಂಬಲಿಗರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಕುಟುಂಬ ಮತ್ತು ಪೊಲೀಸರು ಇದನ್ನು ಅಪಘಾತ ಎಂದು ಕರೆಯುತ್ತಿದ್ದರೂ, ಈ ಪ್ರಕರಣವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಶ್ನೆ ಏನೆಂದರೆ, ಇದು ನಿಜವಾಗಿಯೂ ಆಕಸ್ಮಿಕ ಗುಂಡು ಹಾರಿದೆಯೇ ಅಥವಾ ಏನಾದರೂ ತಪ್ಪಾಗಿದೆಯೇ? ಗೋಗಿಯ ಪರವಾನಗಿ ಪಡೆದ ಪಿಸ್ತೂಲ್ ಉತ್ತಮ ಸ್ಥಿತಿಯಲ್ಲಿತ್ತೇ? ಈ ಘಟನೆ ಪಿಸ್ತೂಲ್ ಸ್ವಚ್ಛಗೊಳಿಸುವಾಗ ನಡೆದಿದೆಯೇ ಅಥವಾ ಬೇರೆ ಏನಾದರೂ ಕಾರಣವಿದೆಯೇ? ಎಂಬುದರ ಕುರಿತು ತನಿಖೆ ನಡೆಯಲಿದೆ.
ಗೋಗಿಯವರ ನಿಧನ ನಮಗೆ ದೊಡ್ಡ ನಷ್ಟ ಎಂದು ಆಮ್ ಆದ್ಮಿ ಪಕ್ಷದ ಪಂಜಾಬ್ ಅಧ್ಯಕ್ಷ ಅಮನ್ ಅರೋರಾ ಹೇಳಿದ್ದಾರೆ. ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ. ನಮ್ಮ ಸಹೋದ್ಯೋಗಿ ಮತ್ತು ಪಂಜಾಬ್ನ ಲುಧಿಯಾನ ಪಶ್ಚಿಮದ ಶಾಸಕ ಗುರುಪ್ರೀತ್ ಗೋಗಿ ಅವರ ನಿಧನದ ಸುದ್ದಿ ತುಂಬಾ ದುಃಖಕರವಾಗಿದೆ ಎಂದು ಟ್ವೀಟಿಸಿದ್ದಾರೆ.