ನವದೆಹಲಿ: ಸಂಸತ್ತಿನಲ್ಲಿ ಸೋಮವಾರ ನಡೆದ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಲು ಆಸಕ್ತಿ ಇದೆಯೇ ಎಂದು ಕಾಂಗ್ರೆಸ್, ತನ್ನ ಸಂಸದ ಶಶಿ ತರೂರ್ ಅವರನ್ನು ಕೇಳಿತು. ಆದರೆ ಅವರು ನಿರಾಕರಿಸಿದರು ಮತ್ತು ಆಪರೇಷನ್ ಸಿಂಧೂರ್ ಬದಲಿಗೆ 'ಭಾರತೀಯ ಬಂದರು ಮಸೂದೆ, 2025' ಕುರಿತು ಮಾತನಾಡುವ ಬಯಕೆ ವ್ಯಕ್ತಪಡಿಸಿದರು ಎಂದು ಪಕ್ಷದ ಮೂಲಗಳು ಸೋಮವಾರ ತಿಳಿಸಿವೆ.
ಭಯೋತ್ಪಾದಕ ದಾಳಿಯ ನಂತರ ಸರ್ಕಾರದ ಕ್ರಮವನ್ನು ಅತ್ಯಂತ ಉತ್ಸಾಹದಿಂದ ಬೆಂಬಲಿಸಿ ಪಕ್ಷದೊಂದಿಗಿನ ಸಂಬಂಧ ಹದಗೆಡಿಸಿಕೊಂಡಿದ್ದ ಶಶಿ ತರೂರ್ ಅವರು, ಅಮೆರಿಕ ಸೇರಿದಂತೆ ಇತರ ದೇಶಗಳಿಗೆ ಸರ್ಕಾರ ಕಳುಹಿಸಿದ್ದ ಸರ್ವಪಕ್ಷ ಸಂಸದರ ನಿಯೋಗದ ನೇತೃತ್ವ ವಹಿಸಿಕೊಂಡಿದ್ದರು.
ಚರ್ಚೆಯ ಸಮಯದಲ್ಲಿ ತರೂರ್ ಅವರನ್ನು ಮಾತನಾಡಲು ಕೇಳಲಾಗಿದೆಯೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಹಿರಿಯ ಕಾಂಗ್ರೆಸ್ ನಾಯಕರೊಯೊಬ್ಬರು, "ಹಿರಿಯ ನಾಯಕರಿಗೆ ಪ್ರಮುಖ ವಿಷಯದ ಕುರಿತು ಮಾತನಾಡಲು ಆಸಕ್ತಿ ಇದೆಯೇ ಎಂದು ಕೇಳುವುದು ವಾಡಿಕೆ. ಗೌರವ್ ಗೊಗೊಯ್ ಮತ್ತು ಕೆ ಸುರೇಶ್ ಅವರು ಮಾತನಾಡುವುದಾಗಿ ಹೇಳಿದ್ದಾರೆ. ಆದರೆ ಶಶಿ ತರೂರ್ ಅವರು ಆಪರೇಷನ್ ಸಿಂಧೂರ್ ಬಗ್ಗೆ ಆಸಕ್ತಿ ಇಲ್ಲ. ಬಂದರು ಮಸೂದೆಯ ಕುರಿತು ಮಾತನಾಡುವುದಾಗಿ ಹೇಳಿದ್ದಾರೆ" ಎಂದರು.
ಪಕ್ಷದ ಮೂಲಗಳ ಹೇಳಿಕೆಗೆ ತರೂರ್ ಅವರಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಹಿಂದೆ ಆಪರೇಷನ್ ಸಿಂಧೂರ್ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತೀರಾ ಎಂದು ಕೇಳಿದಾಗ, ಅನುಭವಿ ಲೋಕಸಭಾ ಸಂಸದರು ಶಶಿ ತರೂರ್ ಅವರು, "ಮೌನ ವ್ರತ" ಆಚರಿಸುತ್ತಿರುವುದಾಗಿ ನಗೆ ಚಟಾಕಿ ಹಾರಿಸಿದ್ದರು.