ಕೆನಡಾದ ಪ್ರಜೆ ನಿರಾಲಿ ಪಟೇಲ್ 
ದೇಶ

Ahmedabad: ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಕೆನಡಾದ ಏಕೈಕ ಪ್ರಜೆ ಭಾರತೀಯ ಮೂಲದ ದಂತವೈದ್ಯೆ!

ಟೊರೊಂಟೊದ ಎಟೊಬಿಕೋಕ್‌ನಲ್ಲಿ ವಾಸಿಸುತ್ತಿದ್ದ 32 ವರ್ಷದ ನಿರಾಲಿ ಪಟೇಲ್ ಅವರು ಭಾರತದಲ್ಲಿನ ಸಾಮಾಜಿಕ ಪ್ರವಾಸ ಮುಗಿಸಿ ಕೆನಡಾಕ್ಕೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಒಟ್ಟಾವಾ: ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಏಕೈಕ ಕೆನಡಾದ ಪ್ರಜೆ ನಿರಾಲಿ ಪಟೇಲ್ ಭಾರತೀಯ ಮೂಲದ ದಂತವೈದ್ಯೆಯಾಗಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಟೊರೊಂಟೊದ ಎಟೊಬಿಕೋಕ್‌ನಲ್ಲಿ ವಾಸಿಸುತ್ತಿದ್ದ 32 ವರ್ಷದ ನಿರಾಲಿ ಪಟೇಲ್ ಅವರು ಭಾರತದಲ್ಲಿನ ಸಾಮಾಜಿಕ ಪ್ರವಾಸ ಮುಗಿಸಿ ಕೆನಡಾಕ್ಕೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು CTV ನ್ಯೂಸ್ ಟೊರೊಂಟೊ ಗುರುವಾರ ವರದಿ ಮಾಡಿದೆ.ನಿರಾಲಿಯ ಪತಿ ತನ್ನ ಒಂದು ವರ್ಷದ ಮಗುವಿನೊಂದಿಗೆ ಭಾರತಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದಾರೆ ಎಂದು ಅದು ವರದಿಯಲ್ಲಿ ತಿಳಿಸಿದೆ.

ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಗುರುವಾರ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಹಮದಾಬಾದ್‌ನ ವಸತಿ ಪ್ರದೇಶದಲ್ಲಿ ಪತನಗೊಂಡು 241 ಮಂದಿ ಸಾವನ್ನಪ್ಪಿದರು. ವಿಮಾನದಲ್ಲಿ 12 ಸಿಬ್ಬಂದಿಗಳ ಜೊತೆಗೆ 169 ಭಾರತೀಯರು, 53 ಬ್ರಿಟಿಷರು, ಒಬ್ಬ ಕೆನಡಿಯನ್ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳಿದ್ದರು. ಈ ದುರಂತದಲ್ಲಿ ಒಬ್ಬ ವ್ಯಕ್ತಿ ಪವಾಡಸದೃಶ್ಯವಾಗಿ ಬದುಕುಳಿದಿದ್ದಾರೆ.

"ಇದು ಸಂಪೂರ್ಣವಾಗಿ ಆಘಾತಕಾರಿ. ಈ ದುಃಖವನ್ನು ಹೇಳಿಕೊಳ್ಳಲು ಯಾವುದೇ ಪದಗಳಿಲ್ಲ" ಎಂದು ನಿರಾಲಿ ಪಟೇಲ್ ಕುಟುಂಬವನ್ನು ತಿಳಿದಿರುವ ವ್ಯಕ್ತಿ ಡಾನ್ ಪಟೇಲ್ ಸಿಟಿವಿ ನ್ಯೂಸ್‌ಗೆ ತಿಳಿಸಿದ್ದಾರೆ.ನಿರಾಲಿ ನಾಲ್ಕು ಅಥವಾ ಐದು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಿದ್ದರು. ಆಕೆಯ ಪೋಷಕರು, ಸಹೋದರ ಮತ್ತು ಅತ್ತಿಗೆ ಬ್ರಾಂಪ್ಟನ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಡಾನ್ ಮಾಹಿತಿ ನೀಡಿದ್ದಾರೆ.

ಮಿಸ್ಸಿಸೌಗಾ ದಂತ ಚಿಕಿತ್ಸಾಲಯದಲ್ಲಿ ಕೆಲಸ ಮಾಡಿದ ನಿರಾಲಿ ಪಟೇಲ್, 2016 ರಲ್ಲಿ ಭಾರತದಲ್ಲಿ ದಂತ ಪದವಿ ಪಡೆದಿದ್ದರು. ತದನಂತ 2019 ರಲ್ಲಿ ಕೆನಡಾದಲ್ಲಿ ಲೈಸೆನ್ಸ್‌ ಅನ್ನು ಪಡೆದಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ವಿಮಾನ ಅಪಘಾತದಲ್ಲಿ ಪಟೇಲ್ ಅವರ ನಿಧನಕ್ಕೆ ಒಂಟಾರಿಯೊ ಪ್ರೀಮಿಯರ್ ಡೌಗ್ ಫೋರ್ಡ್ ಸಂತಾಪ ಸೂಚಿಸಿದ್ದಾರೆ. ಇದಕ್ಕೂ ಮುನ್ನಾ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ವಿಮಾನ ಅಪಘಾತ ಹಾಗೂ ಅದರಲ್ಲಿ ಕೆನಡಾದ ಒಬ್ಬ ಪ್ರಜೆಯೂ ಇದ್ದದ್ದು ಕೇಳಿ ಬೇಸರವಾಗಿದೆ ಎಂದು ಹೇಳಿದರು.

ವಿದೇಶಾಂಗ ಸಚಿವೆ ಅನಿತಾ ಆನಂದ್ ಇದೊಂದು ವಿನಾಶಕಾರಿ ಸುದ್ದಿಯಿಂದ ತೀವ್ರ ಸಂಕಟವಾಗಿದೆ. ಭಾರತದೊಂದಿಗೆ ಕೆನಡಾ ನಿಕಟ ಸಂಪರ್ಕದಲ್ಲಿದೆ ಎಂದು ಹೇಳುವ ಮೂಲಕ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

'30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ,ಇನ್ನು ಸಾಧ್ಯವಿಲ್ಲ': ನಿವೃತ್ತಿಯ ಸುಳಿವು ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ಇಂಗಿತ!

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!