ಲಖನೌ: ಮೊಘಲ್ ದೊರೆ ಔರಂಗಜೇಬನ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ಸಮಾಜವಾದಿ ಪಕ್ಷ ಮತ್ತು ಅದರ ಮಹಾರಾಷ್ಟ್ರ ಶಾಸಕ ಅಬು ಅಜ್ಮಿ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಬ್ಬರಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಸಮಾಜವಾದಿ ಪಕ್ಷವನ್ನು ಖಂಡಿಸುತ್ತಾ, ಅಬು ಅಜ್ಮಿ ಅವರನ್ನು ಪಕ್ಷದಿಂದ ತೆಗೆದುಹಾಕಿ "ಟ್ರೀಟ್ಮೆಂಟ್"ಗಾಗಿ ಉತ್ತರ ಪ್ರದೇಶಕ್ಕೆ ಕಳುಹಿಸಿ ಎಂದು ಯೋಗಿ ಆದಿತ್ಯನಾಥ್ ಕೇಳಿದ್ದಾರೆ.
"ಸಮಾಜವಾದಿ ಪಕ್ಷದ ಆ ದೌರ್ಭಾಗ್ಯ ವ್ಯಕ್ತಿಯನ್ನು ಪಕ್ಷದಿಂದ ತೆಗೆದುಹಾಕಿ ಮತ್ತು ಅವರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿ, ನಾವು ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ" ಎಂದು ಆದತ್ಯನಾಥ್ ಸದನದಲ್ಲಿ ಅಬ್ಬರಿಸಿದ್ದಾರೆ.
ಎಸ್ಪಿ ವಿರುದ್ಧ ತಮ್ಮ ದಾಳಿಯನ್ನು ತೀಕ್ಷ್ಣಗೊಳಿಸಿದ ಸಿಎಂ ಯೋಗಿ, ಎಸ್ಪಿ ಶಾಸಕರು ದೇವಾಲಯವನ್ನು ನಾಶಪಡಿಸಿದ ವ್ಯಕ್ತಿಯನ್ನು (ಔರಂಗಜೇಬ) ಹೊಗಳುತ್ತಿರುವಾಗ ಅವರು ಮಹಾಕುಂಭವನ್ನು ದೂಷಿಸುತ್ತಲೇ ಇದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
"ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯ ಬಗ್ಗೆ ನಾಚಿಕೆಪಡುವ ವ್ಯಕ್ತಿ, ಹೆಮ್ಮೆಪಡುವ ಬದಲು ಮತ್ತು ಔರಂಗಜೇಬನನ್ನು ತನ್ನ ಆರಾಧ್ಯ ದೈವವೆಂದು ಪರಿಗಣಿಸುವ ವ್ಯಕ್ತಿಗೆ ನಮ್ಮ ದೇಶದಲ್ಲಿ ಉಳಿಯುವ ಹಕ್ಕಿದೆಯೇ? ಸಮಾಜವಾದಿ ಪಕ್ಷ ಇದಕ್ಕೆ ಉತ್ತರಿಸಬೇಕು. ಒಂದೆಡೆ, ನೀವು ಮಹಾ ಕುಂಭಮೇಳವನ್ನು ದೂಷಿಸುತ್ತಲೇ ಇರುತ್ತೀರಿ... ಮತ್ತೊಂದೆಡೆ, ದೇಶದ ದೇವಾಲಯಗಳನ್ನು ನಾಶಪಡಿಸಿದ ಔರಂಗಜೇಬನಂತಹ ವ್ಯಕ್ತಿಯನ್ನು ನೀವು ಹೊಗಳುತ್ತೀರಿ... ನಿಮ್ಮ ಆ ಶಾಸಕನನ್ನು ನೀವು ಏಕೆ ನಿಯಂತ್ರಿಸಲು ಸಾಧ್ಯವಿಲ್ಲ? ಅವರ ಹೇಳಿಕೆಯನ್ನು ನೀವು ಏಕೆ ಖಂಡಿಸಲಿಲ್ಲ?" ಎಂದು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಪ್ರಶ್ನಿಸಿದರು.