ನವದೆಹಲಿ: ಪ್ರಯಾಗ್ ರಾಜ್ ನಲ್ಲಿ ಇತ್ತೀಚಿಗೆ ಮುಕ್ತಾಯವಾದ ಮಹಾಕುಂಭ ಯಶಸ್ಸು ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ಲೋಕಸಭೆ ಕಲಾಪವನ್ನು ಮಧ್ಯಾಹ್ನ 1 ಗಂಟೆಯವರೆಗೂ ಕೆಲಕಾಲ ಮುಂದೂಡಲಾಗಿತ್ತು.
ಪ್ರಧಾನಿ ಮೋದಿ ಮಾತನಾಡಿದ ನಂತರ ಅನೇಕ ವಿಪಕ್ಷಗಳ ಸದಸ್ಯರು ತಮ್ಮ ಆಸನದಿಂದ ಎದ್ದುನಿಂತು ಪ್ರತಿಭಟನೆಗೆ ಮುಂದಾದರು. ಪ್ರತಿಭಟನಾನಿರತ ಸದಸ್ಯರು ತಮ್ಮ ಆಸನಗಳಿಗೆ ಮರಳುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪದೇ ಪದೇ ಮನವಿ ಮಾಡಿದರು.
ಅವರ ಮಾತಿಗೆ ಸದಸ್ಯರು ಕಿವಿಗೂಡದಿದ್ದಾಗ ಕಲಾಪವನ್ನು ಮಧ್ಯಾಹ್ನ1 ಗಂಟೆಯವರೆಗೂ ಮುಂದೂಡಿದರು.
ಮಹಾಕುಂಭ ಮೇಳವನ್ನು ಪ್ರಮುಖವಾದ ಮೈಲಿಗಲ್ಲು ಎಂದು ಬಣ್ಣಿಸಿದ ಪ್ರಧಾನಿ, ಅಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವ ಸಾಮರ್ಥ್ಯ ಭಾರತಕ್ಕೆ ಇದೆಯೇ ಎಂದು ಪ್ರಶ್ನಿಸಿದವರಿಗೆ ಈ ಘಟನೆ ತಕ್ಕ ಉತ್ತರ ನೀಡಿದೆ ಎಂದು ಮೋದಿ ಮಂಗಳವಾರ ಲೋಕಸಭೆಯಲ್ಲಿ ಹೇಳಿದರು.
ಮಹಾಕುಂಭದ ಸಂದರ್ಭದಲ್ಲಿ ಇಡೀ ಜಗತ್ತು ಭಾರತದ ಭವ್ಯತೆಗೆ ಸಾಕ್ಷಿಯಾಯಿತು. ಮಹಾಕುಂಭದ ಯಶಸ್ಸಿಗೆ ಕಾರಣರಾದ ದೇಶದ ಕೋಟ್ಯಂತರ ಜನರಿಗೆ ನಾನು ನಮಿಸುತ್ತೇನೆ. ಇದು ಜನರ ಒಗ್ಗಟ್ಟನ್ನು ಪ್ರದರ್ಶಿಸಿದೆ ಎಂದು ಹೇಳಿದರು.
ಸಬ್ಕಾ ಸಾಥ್ ಪರಿಕಲ್ಪನೆಗೆ ಇದೊಂದು ಉತ್ತಮ ಉದಾಹರಣೆಯಾಗಿದೆ. ವೈವಿಧ್ಯತೆಯಲ್ಲಿ ಏಕತೆ ಭಾರತದ ಸಂಸ್ಕೃತಿಯಲ್ಲಿ ಆಳವಾಗಿದೆ ಎಂಬುದನ್ನು ಮಹಾಕುಂಭವು ಸಾಬೀತುಪಡಿಸಿದೆ. ಭಾರತದ ಹೊಸ ಪೀಳಿಗೆಯು ಮಹಾಕುಂಭದೊಂದಿಗೆ ಸಂಪರ್ಕ ಹೊಂದಿದೆ. ಸಂಪ್ರದಾಯಗಳು ಮತ್ತು ನಂಬಿಕೆಯನ್ನು ಹೆಮ್ಮೆಯಿಂದ ಅಳವಡಿಸಿಕೊಂಡಿದೆ ಎಂದು ಮೋದಿ ಹೇಳಿದರು