ರಷ್ಯಾದ ಉಫಾ ನಗರದಲ್ಲಿ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿಯ ಮೃತದೇಹ ಗುರುವಾರ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ.
ರಾಜಸ್ಥಾನದ ಅಲ್ವಾರ್ನ ಲಕ್ಷ್ಮಣಗಢದ ಕಫನ್ವಾಡ ಗ್ರಾಮದ ನಿವಾಸಿ ಅಜಿತ್ ಸಿಂಗ್ ಚೌಧರಿ ಅವರು 2023 ರಲ್ಲಿ ಎಂಬಿಬಿಎಸ್ ಕೋರ್ಸ್ಗಾಗಿ ಬಶ್ಕಿರ್ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಿದ್ದರು.
ಇದೇ ಅಕ್ಟೋಬರ್ 19 ರಂದು ಅವರು ಉಫಾದಲ್ಲಿ ಕಾಣೆಯಾಗಿದ್ದರು. ವಿದ್ಯಾರ್ಥಿ ಬೆಳಗ್ಗೆ 11 ಗಂಟೆ ಸುಮಾರಿಗೆ ಹಾಲು ಖರೀದಿಸಲು ಹೋಗುವುದಾಗಿ ಹೇಳಿ ಹಾಸ್ಟೆಲ್ನಿಂದ ಹೊರಟುಹೋಗಿದ್ದರು, ಆದರೆ ಹಿಂತಿರುಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಚೌಧರಿ ಅವರ ಮೃತದೇಹ ವೈಟ್ ನದಿಯ ಪಕ್ಕದಲ್ಲಿರುವ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ ಎಂದು ಅಲ್ವಾರ್ ಸರಸ್ ಡೈರಿ ಅಧ್ಯಕ್ಷ ನಿತಿನ್ ಸಾಂಗ್ವಾನ್ ತಿಳಿಸಿದ್ದಾರೆ. ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಯಾವುದೇ ಹೇಳಿಕೆಗಳು ಬಂದಿಲ್ಲ ಆದರೆ ಗುರುವಾರ ಚೌಧರಿ ಅವರ ಕುಟುಂಬಕ್ಕೆ ಅವರ ಸಾವಿನ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
19 ದಿನಗಳ ಹಿಂದೆ ನದಿ ದಂಡೆಯ ಬಳಿ ಚೌಧರಿ ಅವರ ಬಟ್ಟೆ, ಮೊಬೈಲ್ ಫೋನ್ ಮತ್ತು ಶೂಗಳು ಪತ್ತೆಯಾಗಿದ್ದವು ಎಂದು ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಲ್ವಾರ್ ಹೇಳಿದ್ದಾರೆ.
ಅಜಿತ್ ಕುಟುಂಬದವರು ತಮ್ಮ ಮಗ ಒಳ್ಳೆಯ ವಿದ್ಯಾಭ್ಯಾಸ ಮಾಡಿ, ಒಳ್ಳೆಯ ಕೆಲಸ ಪಡೆದುಕೊಳ್ಳಲಿ ಎನ್ನುವ ಹೆಚ್ಚಿನ ಭರವಸೆಗಳೊಂದಿಗೆ ರಷ್ಯಾಗೆ ಕಳುಹಿಸಿತ್ತು. ಅವರ ಪೋಷಕರು ಕಷ್ಟಪಟ್ಟು ಹಣವನ್ನು ಒಟ್ಟುಗೂಡಿಸಿದ್ದರು.
22 ವರ್ಷದ ಮಗ ಕಣ್ಮರೆಯಾದ ಸುದ್ದಿ ಕೇಳಿ ಕುಟುಂಬವು ತೀವ್ರ ದುಃಖಿತವಾಗಿತ್ತು, ಇಡೀ ಕುಟುಂಬವು ಅವನು ಸುರಕ್ಷಿತವಾಗಿ ಮರಳಲು ಪ್ರಯತ್ನಗಳು ಮತ್ತು ಪ್ರಾರ್ಥನೆಗಳನ್ನು ಮಾಡುತ್ತಿತ್ತು ಎಂದು ಅವರು ಹೇಳಿದರು.
ವಿದ್ಯಾರ್ಥಿಯ ಶವವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಕಾಂಗ್ರೆಸ್ ನಾಯಕರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಯ ಸಾವಿನ ಬಗ್ಗೆ ವಿಶ್ವವಿದ್ಯಾಲಯ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.