ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮಜನ್ಮಭೂಮಿ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರ ಸಂಕೇತವಾಗಿ ದೇಗುಲದ ಶಿಖರದ ಮೇಲೆ ಕೇಸರಿ ಧ್ವಜವನ್ನು ಔಪಚಾರಿಕವಾಗಿ ಹಾರಿಸಲಿದ್ದಾರೆ.
ಹತ್ತು ಅಡಿ ಎತ್ತರ ಮತ್ತು ಇಪ್ಪತ್ತು ಅಡಿ ಉದ್ದದ ತ್ರಿಕೋನ ಧ್ವಜವು ಭಗವಾನ್ ರಾಮನ ತೇಜಸ್ಸು ಮತ್ತು ಶೌರ್ಯವನ್ನು ಸಂಕೇತಿಸುವ ವಿಕಿರಣ ಸೂರ್ಯನ ಚಿತ್ರವನ್ನು ಹೊಂದಿದೆ. ಅದರ ಮೇಲೆ ಕೋವಿದರ ಮರದ ಚಿತ್ರದೊಂದಿಗೆ 'ಓಂ' ಅನ್ನು ಬರೆಯಲಾಗಿದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಹೇಳಿಕೆ ತಿಳಿಸಿದೆ.
ಪವಿತ್ರ ಕೇಸರಿ ಧ್ವಜವು ಘನತೆ, ಏಕತೆ ಮತ್ತು ಸಾಂಸ್ಕೃತಿಕ ನಿರಂತರತೆಯ ಸಂದೇಶವನ್ನು ರವಾನಿಸುತ್ತದೆ. ರಾಮ ರಾಜ್ಯದ ಆದರ್ಶಗಳನ್ನು ಸಾಕಾರಗೊಳಿಸುತ್ತದೆ ಎಂದು ಪಿಎಂಒ ತಿಳಿಸಿದೆ.
'ಶಿಖರ'ವನ್ನು (ಗೋಪುರ) ಸಾಂಪ್ರದಾಯಿಕ ಉತ್ತರ ಭಾರತದ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಅದರ ಮೇಲೆ ಧ್ವಜಾರೋಹಣ ನಡೆಯಲಿದೆ. ದೇವಾಲಯದ ಸುತ್ತಲಿನ 800 ಮೀಟರ್ ಪಾರ್ಕೋಟವನ್ನು (ಪ್ರದಕ್ಷಿಣೆಗಾಗಿ ಇರುವ ಆವರಣ)ದಕ್ಷಿಣ ಭಾರತೀಯ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ದೇವಾಲಯದ ವಾಸ್ತುಶಿಲ್ಪ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ ಎಂದು ಅದು ಹೇಳಿದೆ.
ಅಯೋಧ್ಯೆಯಲ್ಲಿ ವಾಸ್ತವ್ಯದ ಸಮಯದಲ್ಲಿ ಪ್ರಧಾನಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, ದೇವಿ ಅಹಲ್ಯಾ, ನಿಷದ್ರಾಜ್ ಗುಹಾ ಮತ್ತು ಮಾತಾ ಶಬರಿಯವರಿಗೆ ಸಂಬಂಧಿಸಿದ ದೇವಾಲಯಗಳನ್ನು ಹೊಂದಿರುವ ಸಪ್ತಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದಾದ ನಂತರ ಶೇಷಾವತಾರ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಮಾತಾ ಅನ್ನಪೂರ್ಣ ಮಂದಿರಕ್ಕೆ ಭೇಟಿ ನೀಡಿ, ರಾಮ ದರ್ಬಾರ್ ಗರ್ಭಗೃಹದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಲಿದ್ದಾರೆ. ನಂತರ ರಾಮ ಲಲ್ಲಾ ಗರ್ಭಗೃಹದಲ್ಲಿ ದರ್ಶನ ಪಡೆಯಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಮಧ್ಯಾಹ್ನದ ಸುಮಾರಿಗೆ, ಪ್ರಧಾನಿ ಮೋದಿ ಅವರು ಅಯೋಧ್ಯೆಯ ಪವಿತ್ರ ಶ್ರೀ ರಾಮ ಜನ್ಮಭೂಮಿ ದೇವಾಲಯದ 'ಶಿಖರ'ದ ಮೇಲೆ ಕೇಸರಿ ಧ್ವಜವನ್ನು ಶಾಸ್ತ್ರೋಕ್ತವಾಗಿ ಹಾರಿಸಲಿದ್ದಾರೆ. ಇದು ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದನ್ನು ಸಂಕೇತಿಸುತ್ತದೆ. ಸಾಂಸ್ಕೃತಿಕ ಆಚರಣೆ ಮತ್ತು ರಾಷ್ಟ್ರೀಯ ಏಕತೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.
ಈ ಸಂದರ್ಭದಲ್ಲಿ ಪ್ರಧಾನಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಶುಭ ಪಂಚಮಿಯಂದು, ಶ್ರೀರಾಮ ಮತ್ತು ಸೀತಾ ಮಾತೆಯ ವಿವಾಹವಾದ ಪಂಚಮಿಯ ಅಭಿಜಿತ್ ಮುಹೂರ್ತದಲ್ಲಿ ನಡೆಯಲಿದೆ ಎಂದು ಅದು ಹೇಳಿದೆ.