ನವದೆಹಲಿ: ಅಧಿಕಾರಶಾಹಿಗೆ ತೀಕ್ಷ್ಣವಾದ ಸಂದೇಶವೊಂದರಲ್ಲಿ, ಪ್ರಧಾನ ಮಂತ್ರಿ ಕಚೇರಿ (PMO) ಎಲ್ಲಾ ಸಚಿವಾಲಯಗಳು ಪರಸ್ಪರ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದನ್ನು, ಪರಸ್ಪರ ದೂಷಣೆ ಮಾಡುವುದನ್ನು ಬಿಟ್ಟು ಭಾರತೀಯ ನೀತಿಗಳು ಮತ್ತು ಜಾಗತಿಕ ಮಾನದಂಡಗಳಿಗೆ ಹೊಂದಿಕೆಯಾಗುವ ಉತ್ತಮ ಗುಣಮಟ್ಟದ ಸಂಪುಟ ಟಿಪ್ಪಣಿಗಳನ್ನು ಸಿದ್ಧಪಡಿಸಿ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಆದೇಶ ನೀಡಿದೆ.
ಕಳೆದ ವಾರ ಕಠಿಣ ಶಬ್ದಗಳಲ್ಲಿ ಆದೇಶಗಳನ್ನು ಹೊರಡಿಸಲಾಗಿದ್ದು, ಸರ್ಕಾರದ ಇಲಾಖೆಗಳ ಕಾರ್ಯದರ್ಶಿಗಳು ವಾಡಿಕೆಯ ಅಧಿಕಾರಶಾಹಿ ಮನಸ್ಥಿತಿಯನ್ನು ಬಿಟ್ಟು ಪ್ರಮುಖ ನೀತಿ ನಿರ್ಧಾರಗಳ ಅನುಮೋದನೆಗಾಗಿ ಸರ್ಕಾರದ ಮುಂದೆ ಸಚಿವರು ಸಲ್ಲಿಸುವ ಪ್ರಸ್ತಾವನೆಗಳನ್ನು ರಚಿಸುವಾಗ ಅಥವಾ ಹೇಳಿಕೆ ನೀಡುವಾಗ ಮೌಲ್ಯ ಕಾಪಾಡಬೇಕೆಂದು ಸೂಚಿಸಿದೆ.
ಈ ಸೂಚನೆಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವೈಯಕ್ತಿಕ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತವೆ. ಎಲ್ಲರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಿಎಂಒ ಸ್ಪಷ್ಟಪಡಿಸಿದೆ.
ಇತ್ತೀಚಿನ ತಿಂಗಳುಗಳಲ್ಲಿ ಪುನರಾವರ್ತಿತ ಅಡಚಣೆಗಳು ಮತ್ತು ಅಂತರ-ಸಚಿವಾಲಯದ ಭಿನ್ನಾಭಿಪ್ರಾಯಗಳು ಪ್ರಧಾನಿ ಕಚೇರಿಯಿಂದ ಈ ಕಠಿಣ ನಿರ್ದೇಶನವನ್ನು ಉಂಟುಮಾಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸಚಿವಾಲಯ ಕೆಲಸ-ಕಾರ್ಯಗಳಲ್ಲಿ ವಿಳಂಬ ಮಾಡುವುದು, ನೀತಿ ನಿರೂಪಣೆಗಳನ್ನು ಸೂಕ್ತ ಸಮಯಕ್ಕೆ ಜಾರಿಗೆ ತರದೆ ಕಾಲಹರಣ ಮಾಡುವುದನ್ನು ತಪ್ಪಿಸಲು ಸಂಪುಟ ಟಿಪ್ಪಣಿಗಳ ಅಂತಿಮಗೊಳಿಸುವಿಕೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಸಚಿವಾಲಯಗಳು ನಿಯಮಿತ ಹೇಳಿಕೆಗಳಿಗಿಂತ ಮೌಲ್ಯವರ್ಧನೆಯತ್ತ ಗಮನಹರಿಸಬೇಕು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳುತ್ತದೆ.
ಸರ್ಕಾರದ ದಾಖಲೆಗಳು, ಅನುಮೋದನೆಯಾಗಬೇಕಾದ ಕೆಲಸಗಳು, ಯೋಜನೆಗಳ ದಾಖಲೆಗಳನ್ನು ಬಹಳ ಕಾಲ ಬಿಡುವ ಬದಲು ವ್ಯತ್ಯಾಸಗಳನ್ನು ನಿವಾರಿಸಲು ಆರಂಭಿಕ ಅಂತರ-ಸಚಿವಾಲಯ ಸಮಾಲೋಚನೆಗಳು ಮತ್ತು ಅಗತ್ಯವಿದ್ದರೆ, ಮುಖಾಮುಖಿ ಸಭೆಗಳನ್ನು ಮಾಡಬೇಕೆಂದು ಹೇಳುತ್ತದೆ.
ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ನೀತಿಗಳಿಗೆ ಸಂಬಂಧಿಸಿದಂತೆ ಸಂಪುಟ ಸಮಿತಿಗಳಿಗೆ ಸಲ್ಲಿಸಲಾದ ಪ್ರಸ್ತಾವನೆಗಳು, ಸಾಧ್ಯವಾದಲ್ಲೆಲ್ಲಾ, ಆ ಪ್ರಸ್ತಾವನೆಗೆ ಸಂಬಂಧಿಸಿದಂತೆ ಜಾಗತಿಕ ಮಾನದಂಡಗಳೊಂದಿಗೆ ಮಾನದಂಡದ ವಿವರಗಳನ್ನು ಸೇರಿಸಬೇಕು ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿದೆ. ನೀತಿ ಪ್ರಸ್ತಾವನೆಯನ್ನು ಪರಿಕಲ್ಪನೆ ಮಾಡುವಾಗ ಒಟ್ಟಾರೆ ಸಾರ್ವಜನಿಕ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕೆಂದು ಹೇಳಿದೆ.
ಇಲಾಖೆಗಳು ತಮ್ಮ ಸೀಮಿತ ಕ್ಷೇತ್ರದ ಮೇಲೆ ಮಾತ್ರ ಗಮನಹರಿಸಬಾರದು, ದೊಡ್ಡ ರಾಷ್ಟ್ರೀಯ ದೃಷ್ಟಿಕೋನವನ್ನು ನೋಡಬೇಕು. ವಿಶೇಷವಾಗಿ ಬಹು-ಸಚಿವಾಲಯ ಯೋಜನೆಗಳಲ್ಲಿ. ವೇಗ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು, ಪ್ರತಿ ಕ್ಯಾಬಿನೆಟ್ ಟಿಪ್ಪಣಿಯ ಅಂತಿಮೀಕರಣವನ್ನು ಈಗ ನಿಕಟವಾಗಿ ಗಮನಹರಿಸಲಾಗುತ್ತದೆ. ಭಾರತದ ನೀತಿಗಳು ವಿಶ್ವದ ಅತ್ಯುತ್ತಮ ನೀತಿಗಳಿಗೆ ಹೊಂದಿಕೆಯಾಗುವಂತೆ ಸಾಧ್ಯವಾದಲ್ಲೆಲ್ಲಾ ಜಾಗತಿಕ ಮಾನದಂಡ ರೂಪಿಸಬೇಕೆಂದು ಸಚಿವಾಲಯಗಳಿಗೆ ಹೇಳಲಾಗಿದೆ.
ಸಚಿವಾಲಯ ಕೆಲಸಗಳಲ್ಲಿ ಅಡಚಣೆಗಳು, ಅಂತರ-ಸಚಿವಾಲಯದ ಬಿಕ್ಕಟ್ಟುಗಳಿಗೆ ಪ್ರಧಾನ ಮಂತ್ರಿ ಕಚೇರಿ ಕಠಿಣ ಸಂದೇಶ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಹಲವಾರು ದೊಡ್ಡ ಸುಧಾರಣೆಗಳು ಮತ್ತು ಮೂಲಸೌಕರ್ಯ ಯೋಜನೆಗಳು ಪ್ರಾಯೋಗಿಕ ಹಂತದಲ್ಲಿರುವುದರಿಂದ ಸರ್ಕಾರದ ಆಡಳಿತದಲ್ಲಿ ವೇಗ ಕಾಯ್ದುಕೊಳ್ಳಲು ಪ್ರಧಾನ ಮಂತ್ರಿ ಕಚೇರಿ ಬಯಸುತ್ತದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಪ್ರತಿಯೊಬ್ಬ ಕಾರ್ಯದರ್ಶಿ ದೇಶದ ಹಿತಾಸಕ್ತಿಗಿಂತ ತನ್ನ ಸ್ವಂತ ಸಚಿವಾಲಯ ಹಿತಾಸಕ್ತಿಯನ್ನು ನೋಡಿಕೊಳ್ಳುತ್ತಿದ್ದು ಅದಕ್ಕೆ ಕಡಿವಾಣ ಹಾಕಲು ಸ್ವತಃ ಪ್ರಧಾನ ಮಂತ್ರಿಗಳೇ ಮುಂದಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಒಂದು ಪ್ರಮುಖ ಮೂಲಸೌಕರ್ಯ ಯೋಜನೆಯು ಐದು ಸಚಿವಾಲಯಗಳನ್ನು ಒಳಗೊಂಡಾಗ, ಪ್ರಧಾನ ಮಂತ್ರಿಗಳು ವಿಭಿನ್ನ ದಿಕ್ಕುಗಳಲ್ಲಿ ಹೋಗುವ ಐದು ವಿಭಿನ್ನ ಕಾರ್ಯಸೂಚಿಗಳನ್ನು ಪಡೆಯುತ್ತಾರೆ. ಅದನ್ನು ಆರಂಭದಲ್ಲಿಯೇ ಚಿವುಟಿ ಹಾಕಬೇಂದು ಅಧಿಕಾರಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆಗೆ ತಿಳಿಸಿದ್ದಾರೆ.