ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ 
ದೇಶ

ಜೈಪುರ: ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಎಂಟು ರೋಗಿಗಳು ಸಜೀವ ದಹನ, ಮೂವರ ಸ್ಥಿತಿ ಗಂಭೀರ

ಮಾಹಿತಿ ತಿಳಿದ ಸ್ವಲ್ಪ ಹೊತ್ತಿನಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸುಮಾರು ಎರಡು ಗಂಟೆಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಜೈಪುರ: ಜೈಪುರದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಯ ಟ್ರಾಮಾ ಸೆಂಟರ್‌ನ ಐಸಿಯುನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಎಂಟು ರೋಗಿಗಳು ಸಜೀವ ದಹನವಾಗಿದ್ದಾರೆ.

ಜೈಪುರದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾದ ಎಸ್‌ಎಂಎಸ್‌ನಲ್ಲಿ ರಾತ್ರಿ 11.20ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಮಹಿಳೆಯರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ.

ಐಸಿಯು ವಾರ್ಡ್‌ನ ಸ್ಟೋರ್‌ರೂಂನಲ್ಲಿನ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಭೀಕರ ದುರಂತ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಅಲ್ಲಿದ್ದ ಕಾಗದಗಳು, ವೈದ್ಯಕೀಯ ಉಪಕರಣಗಳು ಮತ್ತು ರಕ್ತದ ಮಾದರಿ ಸಂಗ್ರಹಿಸುವ ಟ್ಯೂಬ್‌ಗಳನ್ನು ಇರಿಸಲಾಗಿತ್ತು. ಬೆಂಕಿಯು ಬೇಗನೆ ಇಡೀ ವಾರ್ಡ್ ಅನ್ನು ಆವರಿಸಿತು ಮತ್ತು ದಟ್ಟ ಹೊಗೆ ಆವರಿಸಿತು. ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಆಸ್ಪತ್ರೆ ಆಡಳಿತದ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ಸಮಯದಲ್ಲಿ, ಒಟ್ಟು 18 ರೋಗಿಗಳು ಐಸಿಯು ಮತ್ತು ಸೆಮಿ-ಐಸಿಯುನಲ್ಲಿ ದಾಖಲಾಗಿದ್ದರು, ಅವರಲ್ಲಿ 11 ರೋಗಿಗಳು ಬೆಂಕಿ ಕಾಣಿಸಿಕೊಂಡ ಅದೇ ವಾರ್ಡ್‌ನಲ್ಲಿದ್ದರು.

ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ವ್ಯಾಪಕ ಬೆಂಕಿ ಮತ್ತು ವಿಷಕಾರಿ ಹೊಗೆ ಅಡ್ಡಿಯುಂಟು ಮಾಡಿತು. ಕುಟುಂಬ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಸಹಾಯದಿಂದ ಕಿಟಕಿ ಮತ್ತು ಬಾಗಿಲುಗಳನ್ನು ಒಡೆದು ಅನೇಕ ರೋಗಿಗಳನ್ನು ರಕ್ಷಿಸಲಾಯಿತು. ರೋಗಿಗಳಿಗೆ ತಕ್ಷಣವೇ ಕಟ್ಟಡದ ಹೊರಗೆ ಆಮ್ಲಜನಕ ಮತ್ತು ಪ್ರಥಮ ಚಿಕಿತ್ಸೆ ನೀಡಲಾಯಿತು.

ಬೆಂಕಿ ಹೊತ್ತಿಕೊಂಡ ನಂತರ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಉಂಟಾಯಿತು. ಐಸಿಯುಗೆ ದಾಖಲಾಗಿದ್ದ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಸ್ಥಳಾಂತರಿಸಲು ಸಿಬ್ಬಂದಿ ಹೆಣಗಾಡಿದರು. ಬೆಂಕಿಯನ್ನು ನಿಯಂತ್ರಿಸಲು ಒಂದರಿಂದ ಒಂದೂವರೆ ಗಂಟೆ ಬೇಕಾಯಿತು. ಎಲ್ಲ ರೋಗಿಗಳನ್ನು ಅವರ ಹಾಸಿಗೆಗಳ ಜೊತೆಗೆ ಹೊರಗೆ ಸ್ಥಳಾಂತರಿಸಲಾಯಿತು.

ಟ್ರಾಮಾ ಸೆಂಟರ್‌ನ ನೋಡಲ್ ಅಧಿಕಾರಿ ಡಾ. ಅನುರಾಗ್ ಧಾಕಡ್, ಐಸಿಯುನಲ್ಲಿ 11 ರೋಗಿಗಳಿದ್ದರು. ಅವರಲ್ಲಿ ಕೆಲವರನ್ನು ತಕ್ಷಣ ಸ್ಥಳಾಂತರಿಸಲಾಯಿತು. ಪಕ್ಕದ ಐಸಿಯುನಲ್ಲಿ 13 ರೋಗಿಗಳಿದ್ದರು. ಬೆಂಕಿ ಹರಡುತ್ತಿದ್ದಂತೆ ಆರು ರೋಗಿಗಳು ಒಳಗೆ ಸಿಲುಕಿಕೊಂಡರು ಎಂದರು.

ಘಟನೆ ನಂತರ ಆಸ್ಪತ್ರೆಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಬೆಂಕಿ ಹೊತ್ತಿಕೊಂಡ ಆರಂಭಿಕ ನಿಮಿಷಗಳಲ್ಲಿ ಅಗ್ನಿಶಾಮಕ ಎಚ್ಚರಿಕೆ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಮತ್ತು ಆಮ್ಲಜನಕ ಮಾರ್ಗವನ್ನು ಸ್ಥಗಿತಗೊಳಿಸುವಲ್ಲಿ ವಿಳಂಬವಾಯಿತು. ಸಿಬ್ಬಂದಿಗೆ ಸಾಕಷ್ಟು ಅಗ್ನಿಶಾಮಕ ಸುರಕ್ಷತಾ ಸಾಧನಗಳ ಕೊರತೆಯಿತ್ತು. ಇದು ಬೆಂಕಿಯ ಹರಡುವಿಕೆಯನ್ನು ಮತ್ತಷ್ಟು ವೇಗಗೊಳಿಸಿತು ಎಂದು ದೂರಿದ್ದಾರೆ.

ಸಂತ್ರಸ್ತರ ಕುಟುಂಬಗಳು ಎಸ್‌ಎಂಎಸ್ ಟ್ರಾಮಾ ಸೆಂಟರ್ ಹೊರಗೆ ಧರಣಿ ನಡೆಸಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ತಡರಾತ್ರಿ ಆಸ್ಪತ್ರೆಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಗಾಯಾಳುಗಳ ಚಿಕಿತ್ಸೆಗೆ ಎಲ್ಲ ರೀತಿಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

'ಇದು ತುಂಬಾ ದುಃಖಕರ ಮತ್ತು ಆತಂಕಕಾರಿ ಘಟನೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ಅಂಬರೀಶ್ ಕುಮಾರ್, ಪೊಲೀಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್, ಜೈಪುರ ಕಲೆಕ್ಟರ್ ಜಿತೇಂದ್ರ ಸೋನಿ ಮತ್ತು ಎಸ್‌ಎಂಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ದೀಪಕ್ ಮಹೇಶ್ವರಿ ಅವರಿಂದ ವಿವರವಾದ ವರದಿಯನ್ನು ಕೋರಿದ್ದಾರೆ.

ಘಟನೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಲು ನಿರ್ದೇಶಿಸಿದ್ದಾರೆ. ಬೆಂಕಿಗೆ ಯಾರ ನಿರ್ಲಕ್ಷ್ಯ ಕಾರಣ ಮತ್ತು ಆಸ್ಪತ್ರೆಯ ಅಗ್ನಿಶಾಮಕ ಉಪಕರಣಗಳು ಮತ್ತು ಸುರಕ್ಷತಾ ಕ್ರಮಗಳು ಸಮರ್ಪಕವಾಗಿವೆಯೇ ಎಂಬುದನ್ನು ಸಮಿತಿಯು ತನಿಖೆ ಮಾಡುತ್ತದೆ.

ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಸರ್ಕಾರದಿಂದ SMS ಬೆಂಕಿ ಅವಘಡದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. 'ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಖಚಿತಪಡಿಸಿಕೊಳ್ಳಬೇಕು' ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar Assemebly Election: ಚುನಾವಣಾ ಆಯೋಗದಿಂದ ಸಂಜೆ 4 ಗಂಟೆಗೆ ಮುಹೂರ್ತ ಫಿಕ್ಸ್ !

ಹೈಕೋರ್ಟ್ ಚಾಟಿ, ಜಿಲ್ಲಾಡಳಿತದ ಖಡಕ್ ವಾರ್ನಿಂಗ್: ಕೊನೆಗೂ Sambhal ಮಸೀದಿ ತೆರವು ಮಾಡಿದ 'ಮುಸ್ಲಿಮರು'

'ಶಾಂತಿ ಇದೆ, ಕ್ರಾಂತಿ ಎಲ್ಲಿದೆ? ನಾವೆಲ್ಲರೂ ಶಾಂತಿ ಪ್ರಿಯರು'; ಸಿಎಂ ಬದಲಾವಣೆ ವಿಚಾರ 'ಅಪ್ರಸ್ತುತ': ಬಸವರಾಜ ರಾಯರೆಡ್ಡಿ

ಯಾರು ಎಷ್ಟೇ ವಿರೋಧಿಸಿದರೂ ಸಮೀಕ್ಷೆ ನಡೆಯುತ್ತದೆ, ಎಲ್ಲರೂ ಸಹಕರಿಸಿ: DCM ಡಿಕೆ ಶಿವಕುಮಾರ್ ಮನವಿ

ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ವಿಚಾರ ಮತ್ತೆ ಮುನ್ನಲೆಗೆ; ಸಿದ್ದರಾಮಯ್ಯ ಸಮ್ಮುಖದಲ್ಲೇ ಒತ್ತಾಯ

SCROLL FOR NEXT