ಕಾರ್ಯಾಚರಣೆ  
ದೇಶ

ಉ. ಪ್ರದೇಶ: ಆಗ್ರಾ ನದಿಯಲ್ಲಿ ದಸರಾ ವಿಗ್ರಹ ವಿಸರ್ಜನೆ ವೇಳೆ ಮುಳುಗಿ ಸಾವು: 12 ಮಂದಿ ಮೃತದೇಹ ಪತ್ತೆ

ಅಕ್ಟೋಬರ್ 2 ರಂದು ಖೈರಾಗರ್ ಪ್ರದೇಶದಲ್ಲಿ 13 ಯುವಕರು ದುರ್ಗಾಮಾತೆ ವಿಗ್ರಹವನ್ನು ವಿಸರ್ಜಿಸಲು ಹೋದಾಗ ಈ ದುರಂತ ಸಂಭವಿಸಿತ್ತು.

ದಸರಾ ಹಬ್ಬದ ಸಮಯದಲ್ಲಿ ಉತ್ತರ ಪ್ರದೇಶದ ಉತಂಗನ್ ನದಿಯಲ್ಲಿ ವಿಗ್ರಹ ವಿಸರ್ಜನೆಯ ಸಮಯದಲ್ಲಿ ಮುಳುಗಿ ಮೃತಪಟ್ಟಿದ್ದ ಎಲ್ಲಾ 12 ಮಂದಿಯ ಶವಗಳನ್ನು ಹೊರತೆಗೆಯಲಾಗಿದ್ದು, ಐದು ದಿನಗಳ ಬೃಹತ್ ರಕ್ಷಣಾ ಕಾರ್ಯಾಚರಣೆ ಕೊನೆಗೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಅಕ್ಟೋಬರ್ 2 ರಂದು ಖೈರಾಗರ್ ಪ್ರದೇಶದಲ್ಲಿ 13 ಯುವಕರು ದುರ್ಗಾಮಾತೆ ವಿಗ್ರಹವನ್ನು ವಿಸರ್ಜಿಸಲು ಹೋದಾಗ ಈ ದುರಂತ ಸಂಭವಿಸಿತ್ತು. ಅವರಲ್ಲಿ ಒಬ್ಬರಾದ ವಿಷ್ಣು ಎಂದು ಗುರುತಿಸಲ್ಪಟ್ಟವರನ್ನು ತಕ್ಷಣವೇ ರಕ್ಷಿಸಲಾಗಿ, ಉಳಿದ 12 ಮಂದಿ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು.

ಸತತ 124 ಗಂಟೆಗಳ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF), ಸೇನೆ, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PAC), ಸ್ಥಳೀಯ ಪೊಲೀಸರು ಮತ್ತು ಡೈವರ್‌ಗಳು ಭಾಗವಹಿಸಿದ್ದರು ಎಂದು ಆಗ್ರಾ ಪೊಲೀಸ್ ಆಯುಕ್ತ ದೀಪಕ್ ಕುಮಾರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಶವಗಳು ನದಿಯ ಮಧ್ಯದಲ್ಲಿರುವ ಆಳವಾದ ಹೊಂಡಗಳು ಮತ್ತು ಕುಳಿಗಳಲ್ಲಿ ಸಿಲುಕಿಕೊಂಡಿದ್ದರಿಂದ ಕಾರ್ಯಾಚರಣೆ ಕಷ್ಟಕರವಾಗಿತ್ತು. ರಕ್ಷಣಾ ತಂಡಗಳಿಗೆ ಸಹಾಯ ಮಾಡಲು ನದಿಯ ಹರಿವಿನ ತಾತ್ಕಾಲಿಕ ತಿರುವು ವ್ಯವಸ್ಥೆ ಮಾಡಲಾಗಿತ್ತು ಎಂದು ದೀಪಕ್ ಕುಮಾರ್ ತಿಳಿಸಿದ್ದಾರೆ.

ಮೃತರನ್ನು ಸಚಿನ್ (14), ದೀಪಕ್ (15), ಮನೋಜ್ (15), ಅಭಿಷೇಕ್ (16), ವಿನೇಶ್ (19), ಓಕೆ (19), ಗಜೇಂದ್ರ (20), ಕರಣ್ (21), ಹರೇಶ್ (22), ಭಗವತಿ (23), ಗಗನ್ (25), ಮತ್ತು ಓಂಪಾಲ್ (35) ಎಂದು ಗುರುತಿಸಲಾಗಿದೆ.

ಯುವಕರು ವಿಗ್ರಹವನ್ನು ಆಳವಿಲ್ಲದ ನೀರಿನಲ್ಲಿ ಇರಿಸಿ ನದಿಯೊಳಗೆ ಮತ್ತಷ್ಟು ದೂರ ಹೋಗಿದ್ದರಿಂದ ದುರಂತ ಸಂಭವಿಸಿತ್ತು.

ಅವರಲ್ಲಿ ಒಬ್ಬರು ಅಕ್ರಮ ಮರಳು ಗಣಿಗಾರಿಕೆಯಿಂದ ರೂಪುಗೊಂಡ 25 ಅಡಿ ಆಳದ ಗುಂಡಿಗೆ ಜಾರಿದಾಗ ರಕ್ಷಿಸಲು ಇತರರು ಹೋದಾಗ ಅವರು ಕೂಡ ಸಿಕ್ಕಿಹಾಕಿಕೊಂಡರು. ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

20 ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್‌: ಫಾರ್ಮಾ ಕಂಪನಿಯ ಮಾಲೀಕ ಅರೆಸ್ಟ್

Chamarajpet: ಚಾಲಕನ ನಿಯಂತ್ರಣ ತಪ್ಪಿದ ಟ್ರಕ್‌ ಪೆಟ್ರೋಲ್ ಬಂಕ್ ಗೆ ಢಿಕ್ಕಿ, ಭೀಕರ Video

'2 ತಿಂಗಳಲ್ಲೇ ಸಿಕ್ಕಿಬಿದ್ರೆ.. 4 ವರ್ಷ ಸಂಸಾರ ಹೇಗಾಯ್ತು.. ಅವರ ಮನೆ ನನ್ನ ಹೆಸರಿನಲ್ಲಿ ನಡೆಯುತ್ತಿದೆ': ಮಾಜಿ ಪತ್ನಿ ಧನಶ್ರೀಗೆ ಯಜುವೇಂದ್ರ ಚಹಲ್ ತಿರುಗೇಟು!

Ranji Trophy: ಮೈದಾನದಲ್ಲೇ ಹೈಡ್ರಾಮಾ, ಸಹ ಆಟಗಾರನತ್ತ ಬ್ಯಾಟ್ ಬೀಸಿದ ಪೃಥ್ವಿ ಶಾ, Video

ಶಾಂತಿ ಸೂತ್ರಕ್ಕೆ ಹಮಾಸ್ ಒಪ್ಪಿಗೆ: ಒತ್ತೆಯಾಳುಗಳು ಸೋಮವಾರ ವಾಪಸ್ ಎಂದ ಟ್ರಂಪ್, ಕದನ ವಿರಾಮ ಘೋಷಣೆ ಬಳಿಕವೂ ಇಸ್ರೇಲ್‌ನಿಂದ ಮುಂದುವರೆದ ದಾಳಿ..!

SCROLL FOR NEXT