ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರು "ಊಳಿಗಮಾನ್ಯ ಮನಸ್ಥಿತಿ"ಯನ್ನು ಬೆಳೆಸುತ್ತಿದ್ದಾರೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಜಾತಿ ಆಧಾರಿತ ಹಿಂಸಾಚಾರವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
2013 ರಿಂದ 2023 ರವರೆಗಿನ ಎನ್ಸಿಆರ್ಬಿ ದತ್ತಾಂಶವನ್ನು ಉಲ್ಲೇಖಿಸಿದ ಖರ್ಗೆ, ದಲಿತರ ಮೇಲಿನ ಅಪರಾಧಗಳು ಶೇ. 46 ರಷ್ಟು ಹೆಚ್ಚಾಗಿದೆ ಮತ್ತು ಆದಿವಾಸಿಗಳ ಮೇಲಿನ ಅಪರಾಧ ಶೇ. 91 ರಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಖರ್ಗೆ, ಅಂಚಿನಲ್ಲಿರುವ ಸಮುದಾಯಗಳ ವಿರುದ್ಧ ಹಿಂಸಾತ್ಮಕ ಮತ್ತು ತಾರತಮ್ಯದ ಕ್ರಮಗಳಲ್ಲಿ ವ್ಯಕ್ತವಾಗುವ ಊಳಿಗಮಾನ್ಯ ಮತ್ತು ಜಾತಿವಾದಿ ಮನಸ್ಥಿತಿಯನ್ನು ಬಿಜೆಪಿ ಸಕ್ರಿಯಗೊಳಿಸುತ್ತಿದೆ ಮತ್ತು ಸಮರ್ಥಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ದಲಿತ ವ್ಯಕ್ತಿ ಹರಿಓಂ ವಾಲ್ಮೀಕಿಯ ಹತ್ಯೆ, ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲಿನ ಹಲ್ಲೆ ಮತ್ತು ಹರಿಯಾಣದ ದಲಿತ ಐಪಿಎಸ್ ಅಧಿಕಾರಿಯ ಇತ್ತೀಚಿನ ಆತ್ಮಹತ್ಯೆ ಸೇರಿದಂತೆ ಜಾತಿ ಆಧಾರಿತ ತಾರತಮ್ಯ ಮತ್ತು ಹಿಂಸಾಚಾರದ ಇತ್ತೀಚಿನ ಘಟನೆಗಳನ್ನು ಖರ್ಗೆ ಪಟ್ಟಿ ಮಾಡಿದ್ದಾರೆ.
"ಇವು ಪ್ರತ್ಯೇಕ ಘಟನೆಗಳಲ್ಲ" ಎಂದು ಖರ್ಗೆ ಬರೆದಿದ್ದಾರೆ. "ಇದು ಆರ್ಎಸ್ಎಸ್-ಬಿಜೆಪಿಯ ಊಳಿಗಮಾನ್ಯ ಮನಸ್ಥಿತಿಯ ಅಪಾಯಕಾರಿ ಅಭಿವ್ಯಕ್ತಿ ಮತ್ತು ಸಂವಿಧಾನ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳ ಮೇಲಿನ ನೇರ ದಾಳಿ" ಎಂದು ಕಿಡಿ ಕಾರಿದ್ದಾರೆ.
ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಇತರ ಅಂಚಿನಲ್ಲಿರುವ ಗುಂಪುಗಳನ್ನು ದಮನಿಸುವ ಗುರಿಯನ್ನು ಆಡಳಿತ ಪಕ್ಷ ಹೊಂದಿದೆ. ಅಂತಹ ರಾಜಕೀಯವು ಭಾರತದ ಪ್ರಜಾಪ್ರಭುತ್ವ ರಚನೆಗೆ ಗಂಭೀರ ಬೆದರಿಕೆ ಎಂದು ಖರ್ಗೆ ಎಚ್ಚರಿಸಿದ್ದಾರೆ.
"ಭಾರತವು ಸಂವಿಧಾನದಿಂದ ಆಳಲ್ಪಡುತ್ತದೆ, ಯಾವುದೇ ಉಗ್ರಗಾಮಿ ಸಿದ್ಧಾಂತಗಳಿಂದಲ್ಲ" ಎಂದು ಖರ್ಗೆ ಹೇಳಿದ್ದಾರೆ.