ರಾಂಚಿ: ಅಕ್ಟೋಬರ್ 16 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ವಕೀಲ ಮಹೇಶ್ ತಿವಾರಿ ಮತ್ತು ನ್ಯಾಯಮೂರ್ತಿ ರಾಜೇಶ್ ಕುಮಾರ್ ನಡುವೆ ನಡೆದ ತೀವ್ರ ವಾಗ್ವಾದದ ವೀಡಿಯೊ ವೈರಲ್ ಆಗಿದ್ದು, ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಸ್ವಯಂಪ್ರೇರಿತ ನ್ಯಾಯಾಲಯ ನಿಂದನೆ ಪ್ರಕರಣವನ್ನು ದಾಖಲಿಸಿದೆ.
ಮುಖ್ಯ ನ್ಯಾಯಮೂರ್ತಿ ತರ್ಲೋಕ್ ಸಿಂಗ್ ಚೌಹಾಣ್, ನ್ಯಾಯಮೂರ್ತಿ ಸುಜಿತ್ ನಾರಾಯಣ್ ಪ್ರಸಾದ್, ನ್ಯಾಯಮೂರ್ತಿ ರೊಂಗೋನ್ ಮುಖ್ಯೋಪಾಧ್ಯಾಯ, ನ್ಯಾಯಮೂರ್ತಿ ಆನಂದ ಸೇನ್ ಮತ್ತು ನ್ಯಾಯಮೂರ್ತಿ ರಾಜೇಶ್ ಶಂಕರ್ ಅವರನ್ನೊಳಗೊಂಡ ಪೂರ್ಣ ಪೀಠವು ಈ ವಿಷಯವನ್ನು ಪರಿಶೀಲಿಸಲು ಸಭೆ ನಡೆಸಿದೆ. ವಿಚಾರಣೆಯ ನಂತರ, ನ್ಯಾಯಾಲಯ ವಕೀಲ ತಿವಾರಿ ಅವರಿಗೆ ಮೂರು ವಾರಗಳಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದ ಸಂಬಂಧ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸೂಚಿಸಿದೆ.
ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಕಾರಣವಾದ ಘಟನೆಗಳು ಅಕ್ಟೋಬರ್ 16 ರಂದು ನ್ಯಾಯಮೂರ್ತಿ ರಾಜೇಶ್ ಕುಮಾರ್ ಅವರ ನ್ಯಾಯಾಲಯದ ಕೊಠಡಿಯಲ್ಲಿ ನಡೆದಿದೆ. ಬಾಕಿ ಇರುವ ಬಿಲ್ಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯಿಂದ ಸಂಪರ್ಕ ಕಡಿತಗೊಳಿಸಲಾದ ತಮ್ಮ ಕಕ್ಷಿದಾರರ ವಿದ್ಯುತ್ ಸಂಪರ್ಕವನ್ನು ಪುನಃಸ್ಥಾಪಿಸಲು ವಕೀಲ ಮಹೇಶ್ ತಿವಾರಿ ವಾದಿಸುತ್ತಿದ್ದರು.
ವಿಚಾರಣೆಯ ಸಮಯದಲ್ಲಿ, ತಿವಾರಿ ತಮ್ಮ ಕಕ್ಷಿದಾರರು ಮರು ಸಂಪರ್ಕಕ್ಕೆ 25,000 ರೂ.ಗಳನ್ನು ಠೇವಣಿ ಇಡಲು ಸಿದ್ಧರಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದಾಗ್ಯೂ, ನ್ಯಾಯಮೂರ್ತಿ ಕುಮಾರ್ ಒಟ್ಟು ಬಾಕಿ ಮೊತ್ತದ ಶೇಕಡಾ 50 ರಷ್ಟು ಠೇವಣಿ ಇಡಬೇಕಾದ ನ್ಯಾಯಾಂಗ ಪೂರ್ವನಿದರ್ಶನವನ್ನು ಉಲ್ಲೇಖಿಸಿದರು. ವಕೀಲರು ತಮ್ಮ ಕಕ್ಷಿದಾರರಿಂದ 50,000 ರೂ. ಠೇವಣಿ ಇಡಲು ಒಪ್ಪಿಕೊಂಡ ನಂತರ ಈ ವಿಷಯ ಇತ್ಯರ್ಥವಾಯಿತು.
ತಿವಾರಿ ಅವರ ಪ್ರಕರಣದ ಮುಕ್ತಾಯದ ನಂತರ ಸಮಸ್ಯೆ ಉಲ್ಬಣಗೊಂಡಿತು. ನ್ಯಾಯಾಲಯ ಮುಂದಿನ ವಿಷಯವನ್ನು ಕೈಗೆತ್ತಿಕೊಂಡಾಗ, ತಿವಾರಿ ತಮ್ಮ ವಾದಗಳನ್ನು ಮಂಡಿಸಿದ ವಿಧಾನದ ಬಗ್ಗೆ ನ್ಯಾಯಮೂರ್ತಿ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ. ನಂತರ ನ್ಯಾಯಾಧೀಶರು ನ್ಯಾಯಾಲಯದಲ್ಲಿ ಹಾಜರಿದ್ದ ಜಾರ್ಖಂಡ್ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷರನ್ನು ಉದ್ದೇಶಿಸಿ ವಕೀಲರ ನಡವಳಿಕೆಯನ್ನು ಗಮನದಲ್ಲಿಟ್ಟುಕೊಳ್ಳಲು ಸೂಚಿಸಿದರು.
"ವಿಚಾರಣೆ ವೇಳೆ ನ್ಯಾಯಾಧೀಶರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಕೀಲ, ವಕೀಲರನ್ನು ಅವಮಾನಿಸಬೇಡಿ, ನಿಮ್ಮ ಮಿತಿ ಮೀರಬೇಡಿ, ನ್ಯಾಯಾಂಗದ ವಿಷಯದಲ್ಲಿ ದೇಶ ಹೊತ್ತಿ ಉರೀತಿದೆ" ಎಂದು ಹೇಳಿದ್ದಾರೆ.