ನವದೆಹಲಿ: ಭಾರತ ಮೇಲೆ ಸುಂಕಾಸ್ತ್ರ ಪ್ರಯೋಗಿಸುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಮಾತುಕತೆಗೆ ಮುಂದಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮೆಚ್ಚಿಸಲು ದೇಶಾದ್ಯಂತ ಹತ್ತಿ ರೈತರನ್ನು ಪಣಕ್ಕಿಡಲಾಗುತ್ತಿದೆ. ಎರಡೂ ದೇಶಗಳ ನಡುವೆ ಯಾವ ರೀತಿಯ ಮಾತುಕತೆ ನಡೆಯುತ್ತಿದೆ? ಕೇವಲ ಏಕಪಕ್ಷೀಯ ಮಾತುಕತೆ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ರೈತರು, ವ್ಯಾಪಾರಿಗಳು ಹಾಗೂ ಯುವಕರ ಜೀವನೋಪಾಯವನ್ನು ಪಣಕ್ಕಿಟ್ಟು, ಭಾರತೀಯ ಮಾರುಕಟ್ಟೆಯನ್ನು ಅಮೆರಿಕನ್ನರಿಗೆ ಸಂಪೂರ್ಣವಾಗಿ ತೆರೆಯಲಾಗುತ್ತಿದೆ. ಇಡೀ ಮಾರುಕಟ್ಟೆಯನ್ನು ಅಮೆರಿಕನ್ನರು ವಶಪಡಿಸಿಕೊಂಡರೆ ನಮ್ಮ ಜನರು ಎಲ್ಲಿಗೆ ಹೋಗುತ್ತಾರೆ? ಟ್ರಂಪ್ ಮುಂದೆ ಇಂತಹ ಶರಣಾಗತಿ ಭಾರತದ ಆರ್ಥಿಕತೆಗೆ ಮಾರಕವಾಗುವುದಲ್ಲದೆ, 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನವೂ ಆಗಿದೆ ಎಂದು ಹೇಳಿದ್ದಾರೆ.
ದೇಶದ ಗೌರವವನ್ನು ದುರ್ಬಲಗೊಳಿಸಬೇಡಿ, ದೇಶದ ಗೌರವವನ್ನು ಕಾಪಾಡುತ್ತೀರಿ ಎಂದು ದೇಶವೇ ನಿರೀಕ್ಷಿಸುತ್ತದೆ ಎಂದು ತಿಳಿಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ನಮ್ಮ ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳನ್ನು ಪರಿಹರಿಸಲು ಭಾರತ ಮತ್ತು ಅಮೆರಿಕ ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ಘೋಷಿಸಲು ಸಂತೋಷವಾಗಿದೆ. ಮುಂಬರುವ ವಾರಗಳಲ್ಲಿ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆಂದು ಹೇಳಿದ್ದು, ಇದಕ್ಕೆ ಪ್ರಧಾನಿ ಮೋದಿಯವರೂ ಪ್ರತಿಕ್ರಿಯೆ ನೀಡಿದ್ದಾರೆ.
ಅಮೇರಿಕಾ ಆಪ್ತ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಮ್ಮ ವ್ಯಾಪಾರ ಮಾತುಕತೆಗಳು ಭಾರತ-ಅಮೆರಿಕ ಪಾಲುದಾರಿಕೆಯ ಅಪರಿಮಿತ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚು ಮಾಡಲು ದಾರಿ ಮಾಡಿಕೊಡುತ್ತವೆ ಎಂಬ ವಿಶ್ವಾಸ ನನಗಿದೆ ಚರ್ಚೆಗಳನ್ನು ಆದಷ್ಟು ಬೇಗ ಮುಗಿಸಲು ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ನಾನೂ ಉತ್ಸುಕನಾಗಿದ್ದೇನೆ. ಉಭಯ ರಾಷ್ಟ್ರಗಳ ಜನರಿಗೆ ಉಜ್ವಲ, ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆಂದು ತಿಳಿಸಿದ್ದಾರೆ.