ಗುವಾಹಟಿ: ಕಾಂಗ್ರೆಸ್ ಪಕ್ಷ ಭಾರತೀಯ ಸೇನೆಯನ್ನು ಬೆಂಬಲಿಸುವ ಬದಲು ಪಾಕಿಸ್ತಾನದಿಂದ ಬೆಳೆಸಲ್ಪಟ್ಟ ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದು, ಒಳ ನುಸುಳುಕೋರರನ್ನು ರಕ್ಷಿಸುತ್ತಿದೆ ಎಂದು ಪ್ರಧಾನಿ ಮೋದಿ ಭಾನುವಾರ ಆರೋಪಿಸಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ಆಪರೇಷನ್ ಸಿಂಧೂರ್' ಸಮಯದಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಿದ ನಮ್ಮ ಸಶಸ್ತ್ರ ಪಡೆಗಳನ್ನು ಬೆಂಬಲಿಸುವ ಬದಲು ನುಸುಳುಕೋರರು ಮತ್ತು ದೇಶ ವಿರೋಧಿ ಶಕ್ತಿಗಳನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ತೊಡಗಿತ್ತು ಎಂದು ಆರೋಪಿಸಿದರು.
ಕಾಮಾಕ್ಯ ದೇವರ ಆಶೀರ್ವಾದದಿಂದ 'ಆಪರೇಷನ್ ಸಿಂಧೂರ್' ಯಶಸ್ವಿಯಾಗಿದೆ. ಈ ಪುಣ್ಯಭೂಮಿಯಲ್ಲಿ ನಿಂತಿರುವುದು ನನಗೆ ಗೌರವವಾಗಿದೆ ಎಂದು ಹೇಳಿದ ಪ್ರಧಾನಿ, 1962 ರಲ್ಲಿ ಚೀನಾ ಆಕ್ರಮಣ ಸಮಯದಲ್ಲಿ ಜವಾಹರಲಾಲ್ ನೆಹರು ಅಸ್ಸಾಂನ ಜನರ ಮೇಲೆ ಉಂಟು ಮಾಡಿದ ಗಾಯಗಳು ಇನ್ನೂ ವಾಸಿಯಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ನುಸುಳುಕೋರರು ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಭೌಗೋಳಿಕತೆಯನ್ನು ಬದಲಾಯಿಸುವ ಅವರ ಪಿತೂರಿಗೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದರು.
ಅಸ್ಸಾಂ ರಾಜ್ಯದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಬ್ರಹ್ಮಪುತ್ರ ನದಿ ಮೇಲೆ ಮೂರು ಸೇತುವೆಗಳನ್ನು ನಿರ್ಮಿಸಿತ್ತು. ಆದರೆ ಬಿಜೆಪಿ ಆಡಳಿತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅಂತಹ ಆರು ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದ ಪ್ರದಾನಿ, ತಪ್ಪುಗಳನ್ನು ಸರಿಪಡಿಸುವ ಕೆಲಸವನ್ನು ಬಿಜೆಪಿ ಪ್ರಾರಂಭಿಸಿದೆ ಎಂದರು.
ಕಾಂಗ್ರೆಸ್ ಆಡಳಿತವಿದ್ದಾಗ ರೈತರ ಭೂಮಿ ಮತ್ತು ದೇವಾಲಯ ಆಸ್ತಿಯನ್ನು ಆಕ್ರಮಣ ಮಾಡಿಕೊಳ್ಳಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಪ್ಪುಗಳನ್ನು ಸರಿಪಡಿಸಲಾಗುತ್ತಿದೆ ಎಂದು ಹೇಳಿದರು.
ಅಸ್ಸಾಂನಲ್ಲಿ ನುಸುಳುಕೋರರಿಂದ ಲಕ್ಷಗಟ್ಟಲೆ ಎಕರೆಗಳನ್ನು ವಶಪಡಿಸಿಕೊಳ್ಳಲಾಗಿದೆ. "ದೇಶವನ್ನು ನುಸುಳುಕೋರರಿಂದ ರಕ್ಷಿಸುವುದು ಮತ್ತು ಅದರ ಸಮಗ್ರತೆಯನ್ನು ಪುನರ್ ಸ್ಥಾಪಿಸುವುದು ಬಿಜೆಪಿಯ ಉದ್ದೇಶವಾಗಿದೆ. ನುಸುಳುಕೋರರನ್ನು ಸಮರ್ಥಿಸಿಕೊಳ್ಳುವ ರಾಜಕಾರಣಿಗಳು ಮುಂದೆ ಬಂದು ಈ ವಿಚಾರ ಕುರಿತು ಚರ್ಚಿಸುವಂತೆ ಸವಾಲು ಹಾಕುತ್ತೇನೆ. ನಾವು ಮಾಡಿರುವ ಪ್ರಯತ್ನಗಳಿಗೆ ಹೋಲಿಸಿದರೆ ಒಳನುಸುಳುವವರನ್ನು ಮಟ್ಟ ಹಾಕಲು ಅವರು ಯಾವ ಪ್ರಯತ್ನ ಮಾಡಿದ್ದಾರೆ ಎಂಬುದನ್ನು ತೋರಿಸಲಿ. ನುಸುಳುಕೋರರಿಗೆ ಆಶ್ರಯ ನೀಡುವವರು ಬೆಲೆ ತೆರಬೇಕಾಗುತ್ತದೆ; ದೇಶವು ಅವರನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಸ್ಸಾಂ ಶೇಕಡಾ 13 ರಷ್ಟು ಬೆಳವಣಿಗೆ ದರವನ್ನು ಅನುಭವಿಸುತ್ತಿದೆ. ಇದಕ್ಕೆ ಅವರ "ಡಬಲ್-ಇಂಜಿನ್" ಸರ್ಕಾರ ಕಾರಣವಾಗಿದೆ. ಅಸ್ಸಾಂ ಅನ್ನು ಆರೋಗ್ಯ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ವಿಕಸಿತ ಭಾರತ ಕನಸು ನನಸು ಆಗುವಲ್ಲಿಈಶಾನ್ಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದರು.