ಜೈಪುರ: ಕೋಮು ಸಾಮರಸ್ಯ ಮತ್ತು ಮಾನವೀಯತೆಗೆ ಉದಾಹರಣೆಯಾಗಿ ಮುಸ್ಲಿಂ ಯುವಕನೊಬ್ಬ ಮಗನಂತೆ ಹಿಂದೂ ಮಹಿಳೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ. ನಗರದ ಜಂಗಿ ಚೌಕ್ನಲ್ಲಿ 67 ವರ್ಷದ ಶಾಂತಿ ದೇವಿ ನಿಧನರಾಗಿದ್ದರು. ಅವರ ಕುಟುಂಬದಲ್ಲಿ ಯಾರೂ ಇರಲಿಲ್ಲ. ಇದರಿಂದಾಗಿ ಮೂವತ್ತು ವರ್ಷದ ಯುವಕ ಅಸ್ಗರ್ ಅಲಿ ಮಗನಂತೆ ಹಿಂದೂ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಿದರು.
2018 ರಲ್ಲಿ ತನ್ನ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಕಳೆದುಕೊಂಡ ನಂತರ ಶಾಂತಿ ದೇವಿ ಒಂಟಿಯಾಗಿ ವಾಸಿಸುತ್ತಿದ್ದರು. ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದು ಮಹಾತ್ಮ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನರಾಗಿದ್ದರು. ಅವರ ಕುಟುಂಬದಲ್ಲಿ ಯಾರೂ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಯುವಕ ಅಸ್ಗರ್ ಅಲಿ ಮತ್ತು ಸ್ಥಳೀಯರು ಮುಂದೆ ಬಂದರು. ಶಾಂತಿ ದೇವಿಯನ್ನು ವರ್ಷಗಳ ಕಾಲ ತಾಯಿಯಾಗಿ ನೋಡುತ್ತಾ ಅಗ್ಸರ್ ಬೆಳೆದಿದ್ದನು.
ಬಾಲ್ಯದಿಂದಲೂ ಅವರು ನನಗೆ ತಾಯಿ ಪ್ರೀತಿ ನೀಡುತ್ತಿದ್ದರು. ನಾನು ಊಟ ಮಾಡಿದ್ದೀನೋ ಇಲ್ಲವೋ ಅಥವಾ ಹೇಗಿದ್ದೇನೆಯೋ ಎಂದು ಅವರು ಪ್ರತಿದಿನ ನನ್ನನ್ನು ಕೇಳುತ್ತಿದ್ದರು. ಅವರ ನಿಧನದಿಂದ ನಾನು ನನ್ನ ತಾಯಿಯನ್ನು ಮತ್ತೆ ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂದು ಅಸ್ಗರ್ ಹೇಳಿದರು. ನನ್ನ ಹೆತ್ತವರು ಬಹಳ ಹಿಂದೆಯೇ ನಿಧನರಾದರು... ಆಗ ಶಾಂತಿ ದೇವಿ ಆ ಶೂನ್ಯವನ್ನು ತುಂಬಿದರು. ಕೊರೊನಾ ಸಮಯದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾದಾಗಲೂ, ನಾನು ಅವರ ಚಿಕಿತ್ಸೆಯನ್ನು ನೋಡಿಕೊಂಡೆ. ಭಾನುವಾರ ಅವರ ನಿಧನದೊಂದಿಗೆ, ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡಂತೆ ಭಾಸವಾಯಿತು" ಎಂದು ಹೇಳಿದರು.
ಅಸ್ಗರ್ ತಮ್ಮ ನೆರೆಹೊರೆಯವರು ಮತ್ತು ಸ್ನೇಹಿತರಾದ ಅಶ್ಫಾಕ್ ಖುರೇಷಿ, ಅಬಿದ್ ಖುರೇಷಿ, ಶಾಕಿರ್ ಪಠಾಣ್, ಫಿರೋಜ್ ಖುರೇಷಿ, ಇನಾಯತ್ ಮತ್ತು ಜಬೀದ್ ಸಹಾಯದಿಂದ ಅಂತ್ಯಕ್ರಿಯೆಯನ್ನು ನೆರವೇರಿಸಿದರು. ಹೆಗಲ ಮೇಲೆ ಶವವನ್ನು ಹೊತ್ತುಕೊಂಡು ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಯನ್ನು ನೆರವೇರಿಸಿದರು.
ಅಂತ್ಯಕ್ರಿಯೆಯ ಮೆರವಣಿಗೆಯ ಸಮಯದಲ್ಲಿ ಸ್ಥಳೀಯ ಮುಸ್ಲಿಂ ಮಹಿಳೆಯರು ಸಹ ಅಳುತ್ತಿರುವುದು ಕಂಡುಬಂದಿತ್ತು. ಶಾಂತಿ ದೇವಿಯ ಸಂಬಂಧಿಕರು ನಂತರ ಮಧ್ಯಪ್ರದೇಶದಿಂದ ಇಲ್ಲಿಗೆ ತಲುಪಿ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಸೇರಿಕೊಂಡರು. ಆಕೆಯ ಇಚ್ಛೆಯಂತೆ ಆಕೆಯ ಚಿತಾಭಸ್ಮವನ್ನು ತ್ರಿವೇಣಿ ಸಂಗಮ ಅಥವಾ ಮಾತೃಕುಂಡಿಯಾದಲ್ಲಿ ವಿಸರ್ಜಿಸಲಾಗುವುದು ಎಂದು ಅಸ್ಗರ್ ಹೇಳಿದರು.